ಪ್ರೋ ಕಬಡ್ಡಿ ಫೈನಲ್: ಪ್ರಶಸ್ತಿಗಾಗಿ ಬೆಂಗಳೂರು ಹೋರಾಟ!
ಪ್ರೊ ಕಬಡ್ಡಿ ಲೀಗ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಇಂದು ಮುಂಬೈನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಗುಜಾರಾತ್ ಫಾರ್ಚೂನ್ಜೈಂಟ್ಸ್ ಮುಖಾಮುಖಿಯಾಗಲಿದೆ. ಮೊದಲ ಬಾರಿಗೆ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿರುವ ಎರಡು ತಂಡಗಳ ಬಲಾಬಲ ಹೇಗಿದೆ? ಇಲ್ಲಿದೆ ವಿವರ.
ಮುಂಬೈ(ಜ.05): ಐಪಿಎಲ್ನಲ್ಲಿ ಆರ್ಸಿಬಿ ತಂಡ ಇನ್ನೂ ಟ್ರೋಫಿ ಗೆದ್ದಿಲ್ಲ. ಕಳೆದೆರಡು ವರ್ಷದಿಂದ 'ಈ ಸಲ ಕಪ್ ನಮ್ದೆ' ಎನ್ನುತ್ತಿರುವ ಆರ್ಸಿಬಿ ಕನಸು ಮಾತ್ರ ಈಡೇರಿಲ್ಲ. ಆದರೆ ಕನ್ನಡಿಗರಿಗೆ ಸಂಭ್ರಮಿಸುವ ಅವಕಾಶವನ್ನ ಈ ಬಾರಿ ಬೆಂಗಳೂರು ಬುಲ್ಸ್ ಕಬಡ್ಡಿ ತಂಡ ನೀಡುವ ಎಲ್ಲಾ ಸಾಧ್ಯತೆ ಇದೆ.
ಹೌದು, ಪ್ರೋ ಕಬಡ್ಡಿ 6ನೇ ಆವೃತ್ತಿಯ ಫೈನಲ್ ಪಂದ್ಯ. ಶನಿವಾರ ಇಲ್ಲಿನ NSCI ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕಳೆದ ಬಾರಿಯ ರನ್ನರ್ ಅಪ್ ಗುಜರಾತ್ ಫಾರ್ಚೂನ್ ಜೈಂಟ್ಸ್ ವಿರುದ್ದ ಬೆಂಗಳೂರು ಬುಲ್ಸ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.
ಇದನ್ನೂ ಓದಿ: ಕಬಡ್ಡಿಗೆ ಅನೂಪ್ ಕುಮಾರ್ ವಿದಾಯ
ಉಭಯ ತಂಡಗಳು 2ನೇ ಬಾರಿಗೆ ಫೈನಲ್ ಪ್ರವೇಶಿಸಿವೆ. ಬೆಂಗಳೂರು ಬುಲ್ಸ್ 2ನೇ ಆವೃತ್ತಿಯಲಲ್ಲಿ ಫೈನಲ್ಗೇರಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಕಲೆದ ವರ್ಷ ಪ್ರೊ ಕಬಡ್ಡಿಗೆ ಪಾದಾರ್ಪಣೆ ಮಾಡಿದ್ದ ಗುಜರಾತ್, ಮೊದಲ ಪ್ರಯತ್ನದಲ್ಲೇ ಫೈನಲ್ ಪ್ರವೇಶಿಸಿದರೂ ಪಾಟ್ನಾ ಪೈರೇಟ್ಸ್ ವಿರುದ್ದ ಸೋಲು ಕಂಡಿತು. ಹೀಗಾಗಿ ಎರಡೂ ತಂಡಗಳು ಮೊದಲ ಬಾರಿ ಟ್ರೋಫಿಗೆ ಮುತ್ತಿಡಲು ಕಠಿಣ ಹೋರಾಟ ನಡೆಸಲಿದೆ.
ಅಗ್ರಸ್ಥಾನ ಪಡೆದಿದ್ದ ತಂಡಗಳು:
ಲೀಗ್ ಹಂತದಲ್ಲಿ ಎ ವಲದಲ್ಲಿದ್ದ ಗುಜರಾತ್ 17 ಗೆಲುವುಗಳೊಂದಿಗೆ ಅಗ್ರಸ್ಥಾನ ಪಡೆದಿತ್ತು. 13 ಗೆಲುವುಗೊಳೊಂದಿಗೆ ಬುಲ್ಸ್, ಬಿ ಗುಂಪಿನಲ್ಲಿ ಮೊದಲ ಸ್ಥಾನ ಪಡೆದು ಪ್ಲೇ-ಆಫ್ನ ಕ್ವಾಲಿಫೈಯರ್1- ಅರ್ಹತೆ ಪಡೆದಿತ್ತು. ಕ್ವಾಲಿಫೈಯರ್ 1 ರಲ್ಲಿ ಜೈಂಟ್ಸ್ ಸೋಲಿ ಬುಲ್ಸ್ ಫೈನಲ್ ಪ್ರವೇಶಿಸಿತ್ತು. ಗುಜರಾತ್ 2ನೇ ಕ್ವಾಲಿಫೈಯರ್ನಲ್ಲಿ ಯುಪಿ ಯೋಧಾ ಮಣಿಸಿ ಅಂತಿಮ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.
ಇದನ್ನೂ ಓದಿ: ಬೈಕ್ ಅಪಘಾತ: ಕಬಡ್ಡಿ ಕ್ರೀಡಾಪಟು ಸಾವು
ಬುಲ್ಸ್ ರೈಡಿಂಗ್ VS ಜೈಂಟ್ಸ್ ಡಿಫೆನ್ಸ್:
ಬೆಂಗಳೂರು ಬುಲ್ಸ್ ಯಶಸ್ಸಿಗೆ ರೈಡರ್ಗಳೇ ಕಾರಣ. ರೈಡ್ ಮಷಿನ್ ಪವನ್ ಶೆರಾವತ್ ಹಾಗೂ ನಾಯಕ ರೋಹಿತ್ ಕುಮಾರ್, ಗರಿಷ್ಠ ಅಂಕ ಕಲೆಹಾಕಿದ್ದಾರೆ. ಗುಜರಾತ್ ಪೈನಲ್ಗೇರಲು ತಂಡದ ಡಿಫೆನ್ಸ್ ಪ್ರಮುಖ ಕಾರಣ. ನಾಯಕ ನಿಲ್, ಪರ್ವೇಶ್ ಬೈನ್ಸ್ವಾಲ್ ಜೋಡಿ ಜಾದು ಮಾಡಿದೆ. ಋತುರಾಜ್ ಕೊರವಿ, ಸಚಿನ್ ವಿಠ್ಠಲ, ಹಾಡಿ ಒಸ್ಪಾರಕ್ರಂಹತ ಉತ್ತಮ ದರ್ಜೆಯ ಡಿಫೆಂಡರ್ಗಳ ಬಲ ತಂಡಕ್ಕಿದೆ. ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ರಕ್ಷಣಾ ಕೋಟೆಯನ್ನ ಛಿದ್ರಗೊಳಿಸಿ ಬುಲ್ಸ್ ಜಯಭೇರಿ ಬಾರಿಸಿತ್ತು. ಮತ್ತೊಮ್ಮೆ ಅಂತದ್ದೇ ಪ್ರದರ್ಶನ ನೀಡಿದರೆ ಬುಲ್ಸ್ ಕಪ್ ಗೆಲ್ಲುವುದು ಖಚಿತ.
ಸ್ಪಂದನ್ ಕಣಿಯಾರ್