Asianet Suvarna News Asianet Suvarna News

ಪುಣೆ ತವರಿನಲ್ಲಿ ಇಂದಿನಿಂದ ಬೆಂಗಳೂರು ಬುಲ್ಸ್ ಹೋರಾಟ!

ಗೆಲುವಿನ ಅಲೆಯಲ್ಲಿರುವ ಬೆಂಗಳೂರು ಬುಲ್ಸ್ ಇಂದಿನಿಂದ(ನ.23) ಹೊಸ ತವರಿನಲ್ಲಿ ಕಣಕ್ಕಿಳಿಯಲಿದೆ. ಈ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಪುಣೆಯನ್ನ ತವರು ನೆಲವಾಗಿ ಸ್ವೀಕರಿಸಿದೆ. ತವರಿನಲ್ಲಿ ಮೊದಲ ಎದುರಾಳಿ ಯಾರು? ಇಲ್ಲಿದೆ ಹೆಚ್ಚಿನ ವಿವರ.
 

Pro Kabaddi 2018 Bengaluru Bulls vs Bengal Warriors Match Preview
Author
Bengaluru, First Published Nov 23, 2018, 9:46 AM IST

ಪುಣೆ(ನ.23): 6ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ವಿಭಿನ್ನ ಆಟದ ಶೈಲಿಯಿಂದಾಗಿ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿರುವ ಬೆಂಗಳೂರು ಬುಲ್ಸ್‌, ಶುಕ್ರವಾರದಿಂದ ತನ್ನ ಹೊಸ ತವರು ಪುಣೆಯಲ್ಲಿ ಕಣಕ್ಕಿಳಿಯಲಿದೆ. ತವರಿನ ಚರಣದಲ್ಲಿ ಗೆಲುವಿನ ಓಟ ಮುಂದುವರಿಸಿ, ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಮೂಲಕ ಪ್ಲೇ-ಆಫ್‌ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಗುರಿ ರೋಹಿತ್‌ ಕುಮಾರ್‌ ಪಡೆಯದ್ದಾಗಿದೆ.

ಮುಂದಿನ ಒಂದು ವಾರದಲ್ಲಿ ಬುಲ್ಸ್‌ 6 ಪಂದ್ಯಗಳನ್ನು ಆಡಲಿದ್ದು, ಶುಕ್ರವಾರ ಬೆಂಗಾಲ್‌ ವಾರಿಯ​ರ್‍ಸ್ ತಂಡವನ್ನು ಎದುರಿಸಲಿದೆ. ತಂಡಕ್ಕೆ ಪುಣೆಯಲ್ಲಿ ತಮಿಳ್‌ ತಲೈವಾಸ್‌, ಪಾಟ್ನಾ ಪೈರೇಟ್ಸ್‌, ಯು.ಪಿ.ಯೋಧಾ, ತೆಲುಗು ಟೈಟಾನ್ಸ್‌ ಹಾಗೂ ಅಂತಿಮ ಪಂದ್ಯದಲ್ಲಿ ಮತ್ತೆ ಬೆಂಗಾಲ್‌ ವಾರಿಯ​ರ್‍ಸ್ ಎದುರಾಗಲಿವೆ. ಸದ್ಯ ಆಡಿರುವ 10 ಪಂದ್ಯಗಳಲ್ಲಿ ಬುಲ್ಸ್‌ 7ರಲ್ಲಿ ಗೆಲುವು ಸಾಧಿಸಿದರೆ, 2ರಲ್ಲಿ ಸೋಲುಂಡಿದೆ. 1 ಪಂದ್ಯ ಟೈ ಆಗಿತ್ತು. 2ನೇ ಸ್ಥಾನದಲ್ಲಿರುವ ಪಾಟ್ನಾಗಿಂತ 3 ಪಂದ್ಯ ಕಡಿಮೆ ಆಡಿದ್ದರೂ, 40 ಅಂಕಗಳೊಂದಿಗೆ ಬುಲ್ಸ್‌ ಅಗ್ರಸ್ಥಾನದಲ್ಲಿದೆ. ತವರು ಚರಣದಲ್ಲಿ ಸಾಧ್ಯವಾದಷ್ಟುಪಂದ್ಯಗಳನ್ನು ಗೆದ್ದು, ಅಗ್ರಸ್ಥಾನ ಕಾಯ್ದುಕೊಳ್ಳುವ ಗುರಿ ತಂಡದ್ದಾಗಿದೆ.

ರೈಡ್‌ ಮಷಿನ್‌ ಪವನ್‌ ಶೆರಾವತ್‌, ನಾಯಕ ರೋಹಿತ್‌ ಕುಮಾರ್‌ ಹಾಗೂ ಆಲ್ರೌಂಡರ್‌ ಕಾಶಿಲಿಂಗ್‌ ಅಡಕೆ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಡಿಫೆಂಡರ್‌ ಮಹೇಂದ್ರ ಸಿಂಗ್‌ ತಮ್ಮ ಲಯ ಮುಂದುವರಿಸಿದರೆ, ಬುಲ್ಸ್‌ಗೆ ಗೆಲುವು ಸುಲಭವಾಗಲಿದೆ.

ತವರು ಚರಣದ ಎಲ್ಲಾ ಪಂದ್ಯಗಳನ್ನು ಗೆಲ್ಲುವುದು ಕಷ್ಟಎಂದು ತಿಳಿದಿದೆ. ಪ್ರತಿ ದಿನ ಪಂದ್ಯವಾಡುವುದು ಕಷ್ಟ. ಆದರೆ ಉಳಿದ ತಂಡಗಳು 16ರಿಂದ 18 ಆಟಗಾರರನ್ನು ಹೊಂದಿವೆ. ನಮ್ಮ ತಂಡದಲ್ಲಿ 22 ಆಟಗಾರರಿದ್ದಾರೆ. ಪ್ರತಿ 2 ಪಂದ್ಯದಲ್ಲಿ ತಂಡದ ಸಂಯೋಜನೆ ಬದಲಿಸಿ, ಆಟಗಾರರಿಗೆ ಅಗತ್ಯ ವಿಶ್ರಾಂತಿ ನೀಡುವ ಅವಕಾಶ ನಮಗಿದೆ. ಜತೆಗೆ ಬಹುತೇಕ ಪಂದ್ಯಗಳಲ್ಲಿ ನಾವು ಪ್ರತಿ ಆಟಗಾರನ ಸ್ಥಾನ ಬದಲಿಸಿದ್ದೇವೆ. ಇದರಿಂದಾಗಿ ಎದುರಾಳಿಗೆ ನಮ್ಮ ತಂತ್ರಗಾರಿಕೆಯ ಕುರಿತು ಮಾಹಿತಿ ಕಲೆಹಾಕಲು ಕಷ್ಟವಾಗುತ್ತಿದೆ. ಆದಷ್ಟುಪಂದ್ಯಗಳನ್ನು ಗೆದ್ದು ಪ್ಲೇ-ಆಫ್‌ಗೆ ಹತ್ತಿರವಾಗುವುದು ನಮ್ಮ ಗುರಿ ಎಂದು ಬೆಂಗಳೂರು ಬುಲ್ಸ್ ಕೋಚ್ ಬಿ.ಸಿ.ರಮೇಶ್ ಹೇಳಿದ್ದಾರೆ. 

ಬೆಂಗಳೂರಲ್ಲಿ ನಾವು ಪಂದ್ಯಗಳನ್ನು ಆಡುತ್ತಿಲ್ಲ ಎನ್ನುವ ಬೇಸರವಿದೆ. ಆದರೆ ಪುಣೆ ಅಭಿಮಾನಿಗಳಿಂದ ಉತ್ತಮ ಬೆಂಬಲ ದೊರೆಯುವ ನಿರೀಕ್ಷೆ ಇದೆ. ರೈಡಿಂಗ್‌ ವಿಭಾಗ ಉತ್ತಮ ಲಯದಲ್ಲಿದೆ. ಡಿಫೆಂಡರ್‌ಗಳು ಲಯ ಕಾಯ್ದುಕೊಂಡು ನೆರವಾದರೆ ನಮ್ಮ ತಂಡವನ್ನು ನಿಯಂತ್ರಿಸುವುದು ಎದುರಾಳಿಗಳಿಗೆ ಕಷ್ಟವಾಗಲಿದೆ. ಸ್ಥಿರತೆ ಕಾಪಾಡಿಕೊಳ್ಳುವ ನಂಬಿಕೆ ಇದೆ ಎಂದು ಬೆಂಗಳೂರು ಬುಲ್ಸ್ ನಾಯಕ ರೋಹಿತ್‌ ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಯದೊಂದಿಗೆ ತವರು ಚರಣಕ್ಕೆ ಜೈಂಟ್ಸ್‌ ಗುಡ್‌ಬೈ
ಅಹಮದಾಬಾದ್‌: ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತವರು ಚರಣವನ್ನು ತಂಡ ಗೆಲುವಿನೊಂದಿಗೆ ಮುಕ್ತಾಯಗೊಳಿಸಿದೆ. ಗುರುವಾರ ನಡೆದ ಹರ್ಯಾಣ ಸ್ಟೀಲ​ರ್‍ಸ್ ವಿರುದ್ಧದ ಪಂದ್ಯವನ್ನು 40-31ರ ಅಂತರದಲ್ಲಿ ಗೆಲ್ಲುವ ಮೂಲಕ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಮೊದಲ ನಿಮಿಷದಲ್ಲೇ ಸೂಪರ್‌ ರೈಡ್‌ ನಡೆಸಿದ ಮಹೇಂದ್ರ ರಜಪೂತ್‌ ಗುಜರಾತ್‌ಗೆ ಭರ್ಜರಿ ಆರಂಭ ಒದಗಿಸಿದರು. ಮೊದಲಾರ್ಧದ ಅಂತ್ಯಕ್ಕೆ 21-15ರ ಮುನ್ನಡೆ ಪಡೆದ ಗುಜರಾತ್‌, ದ್ವಿತೀಯಾರ್ಧದಲ್ಲೂ ಮುನ್ನಡೆ ಕಾಯ್ದುಕೊಂಡಿತು. 10 ಅಂಕ ಗಳಿಸಿದ ಗುಜರಾತ್‌ನ ಸಚಿನ್‌, ಈ ಆವೃತ್ತಿಯಲ್ಲಿ 100 ರೈಡಿಂಗ್‌ ಅಂಕ ಪೂರೈಸಿದರು. 14 ಪಂದ್ಯಗಳಲ್ಲಿ 10ರಲ್ಲಿ ಗೆದ್ದಿರುವ ಗುಜರಾತ್‌, ‘ಎ’ ಗುಂಪಿನಿಂದ ಪ್ಲೇ-ಆಫ್‌ಗೇರುವ ನೆಚ್ಚಿನ ತಂಡ ಎನಿಸಿದೆ.

ಟರ್ನಿಂಗ್‌ ಪಾಯಿಂಟ್‌: ಮೊದಲ ನಿಮಿಷದಲ್ಲೇ ಸೂಪರ್‌ ರೈಡ್‌ ನಡೆಸಿದ್ದು ಗುಜರಾತ್‌ ಆತ್ಮವಿಶ್ವಾಸ ಹೆಚ್ಚಿಸಿತು. ಮೊದಲಾರ್ಧದಲ್ಲಿ 6 ಅಂಕ ಮುನ್ನಡೆ ಪಡೆದ ಜೈಂಟ್ಸ್‌, ಪಂದ್ಯದುದ್ದಕ್ಕೂ ಹರ್ಯಾಣಕ್ಕೆ ಪುಟಿದೇಳಲು ಅವಕಾಶ ನೀಡದೆ ಗೆಲುವನ್ನು ತನ್ನದಾಗಿಸಿಕೊಂಡಿತು.

Follow Us:
Download App:
  • android
  • ios