ಇಂಡೋ-ವಿಂಡೀಸ್ 4ನೇ ಏಕದಿನ ಮುಂಬೈನಿಂದ ಶಿಫ್ಟ್?
ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಸರಣಿ ಆಯೋಜನೆ ಬಿಸಿಸಿಐಗೆ ತಲೆನೋವು ತಂದಿದೆ. ಇಷ್ಟು ದಿನ ಟಿಕೆಟ್ ವಿಚಾರವಾದರೆ ಇದೀಗ ಸೂಕ್ತ ಅಧಿಕಾರಿಗಳಿಲ್ಲ ಕಾರಣ ಪಂದ್ಯ ಬೇರೆಡೆಗೆ ಸ್ಥಳಾಂತರಿಸೋ ಪರಿಸ್ಥಿತಿ ಬಂದೊದಗಿದೆ.
ಮುಂಬೈ(ಅ.10): ಹಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಉಚಿತ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ಬಿಸಿಸಿಐ ಜೊತೆಗೆ ಹಗ್ಗಜಗ್ಗಾಟ ಮುಂದುವರಿಸಿದೆ. ಹೀಗಾಗಿ ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಪಂದ್ಯಗಳು ಸ್ಥಳಾಂತರಗೊಳ್ಳುತ್ತಿದೆ. ಆದರೆ ಮುಂಬೈ ಕತೆ ಮಾತ್ರ ಸ್ವಲ್ಪ ಭಿನ್ನವಾಗಿದೆ. ಪಂದ್ಯ ಆಯೋಜಿಸಲು ಸೂಕ್ತ ಅಧಿಕಾರಿಗಳಿಲ್ಲ ಕಾರಣ ಪಂದ್ಯ ಬೇರೆಡೆಗೆ ಸ್ಥಳಾಂತರಗೊಳ್ಳೋ ಸಾಧ್ಯತೆ ಇದೆ.
ಮುಂಬೈ ಕ್ರಿಕೆಟ್ ಸಂಸ್ಥೆಗೆ ಬಾಂಬೆ ಹೈಕೋರ್ಟ್ ಜಸ್ಟೀಸ್ ವಿಎನ್ ಕಾನಡೆ ಹಾಗೂ ಜಸ್ಟೀಸ್ ಹೇಮಂತ್ ಗೋಖಲೆಯನ್ನ ಆಡಳಿತ ಸದಸ್ಯರನ್ನಾಗಿ ನೇಮಿಸಿತ್ತು. ಇವರ ಅವಧಿ ಸೆಪ್ಟೆಂಬರ್ 15ಕ್ಕೆ ಮುಕ್ತಾಯಗೊಂಡಿದೆ. ಇಷ್ಟೇ ಅಲ್ಲ ಇವರ ಅವಧಿಯನ್ನ ಹೈಕೋರ್ಟ್ ವಿಸ್ತರಿಸಿಲ್ಲ.
ಸದ್ಯ ಅಂತಾರಾಷ್ಟ್ರೀಯ ಪಂದ್ಯ ಆಯೋಜಿಸಲು ಮುಂಬೈ ಕ್ರಿಕೆಟ್ ಸಂಸ್ಥೆಯಲ್ಲಿ ಆಡಳಿತ ಅಧಿಕಾರಿಗಳಿಲ್ಲ. ಹಣಕಾಸಿ ವ್ಯವಹಾರಕ್ಕೆ ಸಹಿ ಹಾಕುವವರು ಯಾರು? ಪಂದ್ಯದ ಉಸ್ತುವಾರಿ ವಹಿಸಿಕೊಳ್ಳುವವರು ಯಾರು? ವೆಂಡರ್ ನೇಮಿಸಿಕೊಳ್ಳುವವರು ಯಾರು? ಇಂತಹ ಹಲವು ಪ್ರಶ್ನೆಗಳಿಗೆ ಮುಂಬೈ ಕ್ರಿಕೆಟ್ ಸಂಸ್ಥೆಯಲ್ಲಿ ಉತ್ತರವಿಲ್ಲ. ಹೀಗಾಗಿ ಅಕ್ಟೋಬರ್ 29 ರಂದು ನಾಲ್ಕನೇ ಏಕದಿನ ಪಂದ್ಯ ಸ್ಥಳಾಂತರವಾಗೋ ಸಾಧ್ಯತೆ ಹೆಚ್ಚಿದೆ.