ಪ್ರೋ ಕಬಡ್ಡಿಯ ಹೊಸ ಸ್ಟಾರ್ ಸಿದ್ದಾರ್ಥ್ ದೇಸಾಯಿ
ಇದೇ ಮೊದಲ ಬಾರಿಗೆ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆಡುತ್ತಿರುವ ಸಿದ್ದಾರ್ಥ್ ದೇಸಾಯಿ ಯು ಮುಂಬಾ ಪರ ದಾಖಲೆ ಬರೆದಿದ್ದಾರೆ. ಘಟಾನುಘಟಿ ಕಬಡ್ಡಿಪಟುಗಳಿಗೆ ಪೈಪೋಟಿ ನೀಡುತ್ತಿರುವ ಸಿದ್ದಾರ್ಥ್ ಇದೀಗ ಹೊಸ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ಪುಣೆ(ಅ.22): ಪ್ರೊ ಕಬಡ್ಡಿ ಲೀಗ್ ಹೊಸ ರೈಡಿಂಗ್ ಸೂಪರ್ ಸ್ಟಾರ್ನನ್ನು ಕಾಣುತ್ತಿದೆ. ಇದೇ ಮೊದಲ ಬಾರಿಗೆ ಪ್ರೊ ಕಬಡ್ಡಿಯಲ್ಲಿ ಆಡುತ್ತಿರುವ ಸಿದ್ಧಾರ್ಥ್ ದೇಸಾಯಿ, ಯು ಮುಂಬಾ ತಂಡದ ರೈಡ್ ಮಷಿನ್ ಆಗಿ ರೂಪುಗೊಂಡಿದ್ದಾರೆ. ಈ ಆವೃತ್ತಿಯಲ್ಲಿ ಅತಿವೇಗವಾಗಿ 50 ರೈಡಿಂಗ್ ಅಂಕ ಪೂರೈಸಿದ ಆಟಗಾರ ಎನ್ನುವ ದಾಖಲೆ ಬರೆದಿರುವ ಸಿದ್ಧಾರ್ಥ್, ಸದ್ಯ 5 ಪಂದ್ಯಗಳಿಂದ 66 ಅಂಕ ಕಲೆಹಾಕಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಚಾಂದಗಡ್ ಗ್ರಾಮದಲ್ಲಿ ಮೋಜಿಗಾಗಿ ಕಬಡ್ಡಿ ಆಡುತ್ತಿದ್ದ ಸಿದ್ಧಾರ್ಥ್, ಸದ್ಯ ಪ್ರೊ ಕಬಡ್ಡಿಯಲ್ಲಿ ಮಿಂಚು ಹರಿಸುತ್ತಿದ್ದು ಮುಂದಿನ ಕೆಲ ವರ್ಷಗಳ ಕಾಲ ಲೀಗ್ ಆಳುವು ಸುಳಿವು ನೀಡಿದ್ದಾರೆ. ಹರಾಜಿನಲ್ಲಿ ₹36.4 ಲಕ್ಷಕ್ಕೆ ಯು ಮುಂಬಾ ತಂಡದ ಪಾಲಾದ ಸಿದ್ಧಾರ್ಥ್, ಸೌಮ್ಯ ಸ್ವಭಾವದ ವ್ಯಕ್ತಿ.
ಸೋನೆಪತ್ ಚರಣದ ವೇಳೆ ಅವರು ‘ಕನ್ನಡಪ್ರಭ’ದೊಂದಿಗೆ ತಮ್ಮ ಕಬಡ್ಡಿ ಪಯಣದ ರೋಚಕ ವಿವರಗಳನ್ನು ಹಂಚಿಕೊಂಡಿರು. ‘ಚಿಕ್ಕಂದಿ ನಲ್ಲಿ ಮೋಜಿಗಾಗಿ ಕಬಡ್ಡಿ ಆಡುತ್ತಿದ್ದೆವು. ಆದರೂ ಮನಸ್ಸಿನ ಮೂಲೆಯೊಂದರಲ್ಲಿ ಕಬಡ್ಡಿಯಲ್ಲೇ ಏನಾದರೂ ಸಾಧಿಸುವ ಕನಸಿತ್ತು. ಮಹಾರಾಷ್ಟ್ರ ರಾಜ್ಯ ತಂಡ ಮತ್ತು ಪ್ರೊ ಕಬಡ್ಡಿ ಲೀಗ್ ನಲ್ಲಿ ಆಡುವ ಕನಸು ನನಸಾಗಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವುದು ನನ್ನ ಗುರಿ’ ಎನ್ನುತ್ತಾರೆ ಸಿದ್ಧಾರ್ಥ್.
ಮೇಯರ್ ಕಪ್ನಲ್ಲಿ ಬೆಳಕಿಗೆ: ಸಿದ್ಧಾರ್ಥ್ ಅಪ್ಪಟ ದೇಸಿ ಪ್ರತಿಭೆ. ಕಾಲೇಜು ದಿನಗಳಲ್ಲಿ ಸ್ಥಳೀಯ ಟೂರ್ನಿಗಳಲ್ಲಿ ಆಡುತ್ತಾ ಮಹಾರಾಷ್ಟ್ರ ದಲ್ಲಿ ಹೆಸರು ಗಳಿಸಿದ ಆಟಗಾರ. ಸಿದ್ಧಾರ್ಥ್ ಪ್ರತಿಭೆ ಬೆಳಕಿಗೆ ಬಂದಿದ್ದು ಪುಣೆಯ ಮೇಯರ್ ಕಪ್ ಟೂರ್ನಿಯಿಂದ. ಪ್ರತಿ ವರ್ಷ ಪುಣೆಯ ಬಾನೇರ್ನ ಬಾಲೆವಾ ಡಿಯ ಕ್ರೀಡಾಂಗಣದಲ್ಲಿ ನಡೆಯುವ ಮೇಯರ್ ಕಪ್, ಸಿದ್ಧಾ ರ್ಥ್ ಪಾಲಿಗೆ ಅದೃಷ್ಟದ ಬಾಗಿಲು ತೆರೆಯಿತು.
ಈ ಟೂರ್ನಿ ಯಲ್ಲಿ ಅಮೋಘ ಪ್ರದರ್ಶನದ ಮೂಲಕ ಮಹಾರಾಷ್ಟ್ರ ತಂಡಕ್ಕೆ ಆಯ್ಕೆಯಾದರು. ಕಳೆದ ವರ್ಷದ ನಡೆದ ಕಬಡ್ಡಿ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ
14 ವರ್ಷಗಳ ಬಳಿಕ ಮಹಾರಾಷ್ಟ್ರಕ್ಕೆ ಪ್ರಶಸ್ತಿ ತಂದುಕೊಡುವಲ್ಲಿ ಸಿದ್ಧಾರ್ಥ್ ಮಹತ್ವದ ಪಾತ್ರ ವಹಿಸಿದರು. ಈ ವೇಳೆ ಪ್ರೊ ಕಬಡ್ಡಿ ಫ್ರಾಂಚೈಸಿಗಳ ಕಣ್ಣಿಗೆ ಸಿದ್ಧಾರ್ಥ್ ಬಿದ್ದರು.
ಪ್ರೊಕಬಡ್ಡಿಗೆ ಭರ್ಜರಿ ಪ್ರವೇಶ: ಪಾದಾರ್ಪಣೆ ಪಂದ್ಯದಲ್ಲಿಯೇ 14 ಅಂಕಗಳ ಗಳಿಸಿ ಸಿದ್ಧಾರ್ಥ್ ಎಲ್ಲರ ಗಮನ ಸೆಳೆದರು. ಪ್ರೊ ಕಬಡ್ಡಿಯ ಪಾದಾರ್ಪಣೆ ಪಂದ್ಯದಲ್ಲಿ ಆಟಗಾರನೊಬ್ಬ ಗಳಿಸಿದ 2ನೇ ಗರಿಷ್ಠ ಅಂಕ ಇದು.
ಮಧ್ಯಮ ವರ್ಗದ ಯುವಕ: ಸಿದ್ಧಾರ್ಥ್, ಮಧ್ಯಮ ವರ್ಗದ ಕುಟುಂಬದ ಹುಡುಗ. ಹಿರಿಯರಿಂದ ಬಳುವಳಿಯಾಗಿ ಬಂದಿ ರುವ 2 ಎಕರೆ ಹೊಲವೇ ಸಿದ್ಧಾರ್ಥ್ ಕುಟುಂಬಕ್ಕೆ ಆಧಾರ. ತಂದೆ ಶಿರೀಶ್ ಕೃಷಿಕರಾಗಿದ್ದು ತಾಯಿ ಅವರಿಗೆ ನೆರವಾಗುತ್ತಾರೆ. ಸಿದ್ಧಾರ್ಥ್ ಸಹೋದರ ಸೂರಜ್ ದೇಸಾಯಿ ಕೂಡ ಕಬಡ್ಡಿ ಪಟು. ಪ್ರೊ ಕಬಡ್ಡಿ 5ನೇ ಆವೃತ್ತಿಯಲ್ಲಿ ಆಡಿದ್ದರು.
ಆದರೆ ಗಾಯಾಳುವಾಗಿದ್ದರಿಂದ 6ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ‘ಮನೆಯಲ್ಲಿ ಏನೇ ತೊಂದರೆ ಇದ್ದರೂ ತಂದೆ-ತಾಯಿ, ನನಗೆ ಮತ್ತು ಅಣ್ಣನಿಗೆ ತುಂಬಾನೇ ಪ್ರೋತ್ಸಾಹ ನೀಡುತ್ತಾರೆ. ಅದರಿಂದಲೇ ನಾವು ಕ್ರೀಡೆಯಲ್ಲಿ ಮುಂದುವರಿ ಯಲು ಸಾಧ್ಯವಾಯಿತು’ ಎಂದು ಸಿದ್ಧಾರ್ಥ್ ತಮ್ಮ ಪೋಷಕರ ಪ್ರೋತ್ಸಾಹವನ್ನು ನೆನೆದರು.
ಮಲ್ಲಪ್ಪ ಸಿ. ಪಾರೇಗಾಂವ