ಕಣ್ತೆರೆದ ಬಿಸಿಸಿಐ: ಕೊನೆಗೂ ಕನ್ನಡಿಗನಿಗೆ ತೆರೆದ ಬಾಗಿಲು
ರಣಜಿ, ಏಕದಿನ ಕ್ರಿಕೆಟ್, ಭಾರತ ಎ ಸೇರಿದಂತೆ ಎಲ್ಲಾ ಬಗೆಯ ಪಿಚ್ ಹಾಗೂ ಎಲ್ಲಾ ಮಾದರಿಯಲ್ಲಿ ಅಗ್ರಗಣ್ಯ ಬ್ಯಾಟ್ಸ್ ಮನ್ ಆಗಿ ಹೊರಹೊಮ್ಮಿರುವ ಕನ್ನಡಿಗನಿಗೆ ಕೊನೆಗೂ ಟೀಂ ಇಂಡಿಯಾದ ಬಾಗಿಲು ತೆರೆದಿದೆ.
ಮುಂಬೈ, [ಸೆ.29]: ಕೊನೆಗೂ ಭಾರತೀಯ ಕ್ರಿಕೆಟ್ ಮಂಡಳಿ [ಬಿಸಿಸಿಐ] ಕಣ್ತೆರೆದಿದೆ. ಭರ್ಜರಿ ಫಾರ್ಮ್ನಲ್ಲಿದ್ದರೂ ಅವಕಾಶವಂಚಿತರಾಗಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಮೇಲೆ ಬಿಸಿಸಿ ಕರುಣೆ ತೋರಿಸಿದೆ.
ಇದೇ ಅಕ್ಟೋಬರ್ 4ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಸ್ವದೇಶದಲ್ಲಿ ಆರಂಭವಾಗುವ 2 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಗೆ 15 ಸದಸ್ಯರ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಮಯಾಂಕ್ ಅಗರ್ವಾಲ್ ಗೆ ಚಾನ್ಸ್ ನೀಡಲಾಗಿದೆ.
ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ
ರಣಜಿ, ಏಕದಿನ ಕ್ರಿಕೆಟ್, ಭಾರತ ಎ ಸೇರಿದಂತೆ ಎಲ್ಲಾ ಬಗೆಯ ಪಿಚ್ ಹಾಗೂ ಎಲ್ಲಾ ಮಾದರಿಯಲ್ಲಿ ಅಗ್ರಗಣ್ಯ ಬ್ಯಾಟ್ಸ್ ಮನ್ ಆಗಿ ಹೊರಹೊಮ್ಮಿರುವ ಕರ್ನಾಟಕದ ಮಯಾಂಕ್ ಅಗರವಾಲ್, ಟೀಂ ಇಂಡಿಯಾಕ್ಕೆ ಆಯ್ಕೆಯಾಗಿಲ್ಲದಿರುವುದರ ಬಗ್ಗೆ ಆಕ್ರೋಶಗಳು ವ್ಯಕ್ತವಾಗಿದ್ದವು. ಬರೀ ಫ್ಯಾನ್ಸ್ ಅಷ್ಟೇ ಅಲ್ಲದೇ ಬಿಸಿಸಿಐ ವಿರುದ್ಧ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದಕ್ಕೆ ಸ್ವತಃ ಬಿಸಿಸಿಐ ಪ್ರತಿಕ್ರಿಯಿಸಿ, ಮಯಾಂಕ್ ಅವರು ಆಯ್ಕೆಯಾಗದಿರುವುದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್, ಕಳೆದ 10-12 ತಿಂಗಳಲ್ಲಿ ಮಯಾಂಕ್ ಪ್ರದರ್ಶನ ಉತ್ತಮವಾಗಿದೆ. ತಂಡ ಸೇರಲು ಇನ್ನೊಂದೆ ಮೆಟ್ಟಿಲು ಬಾಕಿಯಿದೆ. ಸೂಕ್ತ ಸಮಯದಲ್ಲಿ ತಂಡ ಸೇರಲಿದ್ದಾರೆ ಎಂದಿದ್ದರು.
ಭರ್ಜರಿ ಫಾರ್ಮ್ನಲ್ಲಿದ್ದರು ಅವಕಾಶವಂಚಿತರಾಗಿದ್ದ ಅಗರ್ವಾಲ್ ಇದೀಗ ಉತ್ತಮ ಚಾನ್ಸ್ ಸಿಕ್ಕಿದ್ದು, ಯಾವ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.