ಪಡುಕೋಣೆ-ದ್ರಾವಿಡ್ ಕ್ರೀಡಾ ಅಕಾಡಮಿ ಉದ್ಘಾಟನೆ
ಬೆಂಗಳೂರು ಹೊರವಲಯದ ಯಲಹಂಕ ಸಮೀಪ ಉದ್ಯಮಿ ವಿವೇಕ್ ಕುಮಾರ್ ಈ ಕ್ರೀಡಾ ಸಮುಚ್ಚಯವನ್ನು ನಿರ್ಮಿಸಿದ್ದು, ದ್ರಾವಿಡ್ ಹಾಗೂ ಪಡುಕೋಣೆ ಈ ಯೋಜನೆಗೆ ಕೈಜೋಡಿಸಿದ್ದಾರೆ.
ಬೆಂಗಳೂರು(ಡಿ.17): ಒಂದೇ ಸೂರಿನಡಿ ವಿವಿಧ ಕ್ರೀಡೆಗಳಿಗೆ ತರಬೇತಿ ನೀಡುವ ‘ಪಡುಕೋಣೆ-ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್’ ಕೇಂದ್ರವನ್ನು ಭಾರತ ಕಿರಿಯರ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಹಾಗೂ ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಶನಿವಾರ ಲೋಕಾರ್ಪಣೆಗೊಳಿಸಿದರು.
ಬೆಂಗಳೂರು ಹೊರವಲಯದ ಯಲಹಂಕ ಸಮೀಪ ಉದ್ಯಮಿ ವಿವೇಕ್ ಕುಮಾರ್ ಈ ಕ್ರೀಡಾ ಸಮುಚ್ಚಯವನ್ನು ನಿರ್ಮಿಸಿದ್ದು, ದ್ರಾವಿಡ್ ಹಾಗೂ ಪಡುಕೋಣೆ ಈ ಯೋಜನೆಗೆ ಕೈಜೋಡಿಸಿದ್ದಾರೆ.
‘ಕ್ರಿಕೆಟ್, ಬ್ಯಾಡ್ಮಿಂಟನ್, ಫುಟ್ಬಾಲ್, ಟೇಬಲ್ ಟೆನಿಸ್, ಈಜು, ಬಾಸ್ಕೆಟ್'ಬಾಲ್, ಸ್ಕ್ವಾಶ್, ಟೆನಿಸ್ ಹಾಗೂ ಅಥ್ಲೆಟಿಕ್ಸ್'ಗೆ ಇಲ್ಲಿ ತರಬೇತಿ ಲಭ್ಯವಿದೆ. ಅಂತಾರಾಷ್ಟ್ರೀಯ ಕೋಚ್'ಗಳು ತರಬೇತಿ ನೀಡಲಿದ್ದಾರೆ. ‘ಮೊದಲೆಲ್ಲಾ ಕೇವಲ ಅಗ್ರ ಅಥ್ಲೀಟ್'ಗಳಿಗೆ ಮಾತ್ರ ಅಭ್ಯಾಸಕ್ಕೆ ಅನುಕೂಲಗಳು ದೊರೆಯುತ್ತಿತ್ತು. ಇಂತಹ ಅಕಾಡೆಮಿಗಳಿಂದ ಪ್ರತಿಯೊಬ್ಬರಿಗೂ ತರಬೇತಿ ದೊರೆಯಲಿದೆ’ ಎಂದು ರಾಹುಲ್ ದ್ರಾವಿಡ್ ಹೇಳಿದರು.
ಇದೇ ಸಂದರ್ಭದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಜತೆಗೂಡಿ ಇದೇ ಕ್ರೀಡಾ ಸಮುಚ್ಚಯದ ಆವರಣದಲ್ಲಿ ನಿರ್ಮಿಸಿರುವ ‘ಅಭಿನವ್ ಬಿಂದ್ರಾ ಅಕಾಡೆಮಿ’ಯನ್ನು ಬೀಜಿಂಗ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ, ಶೂಟರ್ ಅಭಿನವ್ ಬಿಂದ್ರಾ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.