Asianet Suvarna News Asianet Suvarna News

ತೆಂಗು ಬೆಳೆಗಾರರಲ್ಲಿ ನಡುಕ ಹುಟ್ಟಿಸಿದ ರೋಗ ಬಾಧೆ : ಇಲ್ಲಿದೆ ಸಲಹೆ

ಶಿವಮೊಗ್ಗ ಜಿಲ್ಲೆಯಲ್ಲಿ ರುಗೋಸ್‌ ಸುರುಳಿ ಬಿಳಿನೊಣ ಬಾಧೆ ತೆಂಗಿನ ಮರಗಳಲ್ಲಿ ಕಂಡುಬರುತ್ತಿದ್ದು, ರೈತರು ಅಗತ್ಯ ಕ್ರಮ ಕೈಗೊಳ್ಳಲು ತೋಟಗಾರಿಕೆ ಇಲಾಖೆಯು ಸಲಹೆ ಸೂಚನೆಗಳನ್ನು ನೀಡಿದೆ.

How To Control Rugose Spiraling Whitefly in Coconut Tree
Author
Bengaluru, First Published Oct 24, 2019, 12:21 PM IST

ಶಿವಮೊಗ್ಗ (ಅ.24):  ಜಿಲ್ಲೆಯಲ್ಲಿ ತೆಂಗಿನ ಬೆಳೆಗೆ ರುಗೋಸ್‌ ಸುರುಳಿ ಬಿಳಿನೊಣ ಬಾಧೆ ಕಂಡುಬರುತ್ತಿದ್ದು, ರೈತರು ಅಗತ್ಯ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆಯು ಸಲಹೆ ನೀಡಿದೆ.

ತೆಂಗು ರುಗೋಸ್‌ ಸುರುಳಿ ಬಿಳಿ ನೊಣವು ಮರಿಹುಳುಗಳು ಮತ್ತು ವಯಸ್ಕ ಹುಳುಗಳು ಗರಿಗಳ ಕೆಳಭಾಗದಲ್ಲಿ ಸೇರಿಕೊಂಡು ರಸವನ್ನು ಹೀರುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ರಸವನ್ನು ಹೀರುವುದರಿಂದ ಜೇನುಗರೆದಂತೆ ಕೆಳಭಾಗದ ಎಲೆಗಳ ಮೇಲೆ ಸಿಹಿ ದ್ರವವು ವ್ಯಾಪಿಸುತ್ತದೆ. ಇದರಿಂದಾಗಿ ಕಾಡಿಗೆರೋಗವು ವ್ಯಾಪಿಸಿ ಎಲೆಗಳು ವಿಕಾರವಾಗುತ್ತವೆ. ಇದರಿಂದಾಗಿ ಗರಿಗಳ ದ್ಯುತಿ ಸಂಶ್ಲೇಷಣೆ ಕ್ರಿಯೆಯು ಕುಂಠಿತವಾಗುತ್ತದೆ. ಸಾಮಾನ್ಯವಾಗಿ ಹಾನಿಯು ಹೊರಸುತ್ತಿನ ಗರಿಗಳಿಂದ ಪ್ರಾರಂಭಿಸಿ ಒಳಭಾಗದ ಎಲೆಗಳ ಗರಿಗಳ ಕಡೆಗೆ ವ್ಯಾಪಿಸುತ್ತದೆ. ಕೀಟಗಳು ಉತ್ಪಾದಿಸುವ ಬಿಳಿ ಹಾರುವ ಅಂಟು ಪುಡಿ ಪದಾರ್ಥ ರೈತರಿಗೆ ಕಿರಿ ಕಿರಿ ಉಂಟುಮಾಡುತ್ತದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಳಿ ನೋಣಗಳು ತೆಂಗು, ಸೀಬೆ, ಬಾಳೆ, ಸೀತಾಫಲ, ಮಾವು, ಹಲಸು, ಕರಿಬೇವು, ಮುಂತಾದ ಗಿಡಗಳಲ್ಲಿ ಕಂಡುಬರುತ್ತವೆ. ಈ ಕೀಟವು ಸುಮಾರು 200ಕ್ಕೂ ಹೆಚ್ಚು ಗಿಡಗಳನ್ನು ಆಶ್ರಯಿಸಿ ಜೀವಿಸುತ್ತದೆ. ಅದರಲ್ಲೂ ತೆಂಗು ಬೆಳೆಯಲ್ಲಿ ಹೆಚ್ಚು ಆಶ್ರಯಸಿ ಬಾಧಿಸುವುದು ಕಂಡುಬಂದಿರುತ್ತದೆ. ಕೇವಲ 40 ದಿನಗಳಿಗೊಮ್ಮೆ ಜೀವನಚಕ್ರ ಮುಗಿಸಿ ದಾಳಿ ನಡೆಸುವುದರಿಂದ ತೆಂಗಿನ ಕಪ್ಪು ತಲೆ ಹುಳುವಿನಂತೆ ಪ್ರಮುಖ ಕೀಟವಾಗುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತದೆ.

ನಿರ್ವಹಣಾ ಕ್ರಮಗಳು

ಕೀಟನಿರ್ವಹಣಾ ಕ್ರಮಗಳನ್ನು ಪ್ರಾರಂಭಿಕ ಹಂತದಲ್ಲಿ ಕೈಗೊಳ್ಳುವುದರಿಂದ ಕೀಟದ ಪ್ರಸರಣ ಹಾಗೂ ಹಾವಳಿಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಕೀಟಬಾಧೆಗೆ ಒಳಪಟ್ಟಗಿಡಗಳ ಎಲೆಗಳನ್ನು ಕತ್ತರಿಸಿ ತೆಗೆದು ಸುಡಬೇಕು. ಹಳದಿ ಬಣ್ಣದ ಅಂಟು ಬಲೆಗಳನ್ನು ಮರಗಳ ಕಾಂಡಗಳ ಮೇಲೆ ಅಳವಡಿಸುವ ಮೂಲಕ ವಯಸ್ಕ ಬಿಳಿ ನೊಣಗಳನ್ನು ನಿಯಂತ್ರಿಸಬಹುದು. ಹಳದಿ ಬಣ್ಣದ ಡ್ರಾಯಿಂಗ್‌ ಪೇಪರ್‌ಗೆ ಹರಳೆಣ್ಣೆ ಲೇಪಿಸಿ ಬಳಸಬಹುದು. ಹಳದಿ ಬಣ್ಣವು ಕೀಟಗಳನ್ನು ಆಕರ್ಷಿಸುವುದರಿಂದ ಕೀಟಗಳು ಬಲೆಗಳಿಗೆ ಅಂಟಿಕೊಳ್ಳುತ್ತವೆ. ಶೇ. 1ರ ಪಿಷ್ಟದ್ರಾವಣವನ್ನು ಎಲೆಗಳ ಮೇಲೆ ಸಿಂಪಡಿಸುವುದರಿಂದ ತಡೆಗಟ್ಟಬಹುದು. ಪರೋಪ ಜೀವಿಗಳ ವೃದ್ಧಿಯನ್ನು ಪ್ರೋತ್ಸಾಹಿಸುವುದು. ಬಿಳಿ ನೊಣದ ಬಾಧೆ ತೀವ್ರವಾಗಿದ್ದಲ್ಲಿ ಶೇ.0.5 ಬೇವಿನ ಎಣ್ಣೆ ದ್ರಾವಣವನ್ನು ಸಿಂಪಡಿಸುವುದರಿಂದ ರುಗೋಸ್‌ ಕೀಟಬಾಧೆಯನ್ನು ತಡಗಟ್ಟಬಹುದೆಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios