Asianet Suvarna News Asianet Suvarna News

ರಶ್ಮಿಕಾ ನಟಿಸದ್ದಕ್ಕೆ ಬೇಸರವಿಲ್ಲ, ನಿತ್ಯಾಶ್ರಿ ಅದ್ಭುತ ನಟಿ: ಗೌತಮ್‌

ಹೊಸ ತಂಡವೊಂದು, ವಿಭಿನ್ನವಾಗಿ ರೂಪಿಸಿರುವ ಸಿನಿಮಾ ‘ವೃತ್ರ’. ಟ್ರೇಲರ್‌ ಮೂಲಕ ಅವರ ಭರವಸೆಯನ್ನು ಮತ್ತಷ್ಟುಹೆಚ್ಚಿಸಿಕೊಂಡಿದ್ದು, ಇಂದು (ಅ.11) ತೆರೆ ಮೇಲೆ ಮೂಡುತ್ತಿರುವ ತಮ್ಮ ಚಿತ್ರವನ್ನು ನೋಡಲು ಟಾಪ್‌ 10 ಕಾರಣಗಳನ್ನು ನೀಡಿದ್ದಾರೆ ನಿರ್ದೇಶಕ ಗೌತಮ್‌ ಅಯ್ಯರ್‌.

top 10 reasons to watch kannada film Vrithra
Author
Bangalore, First Published Oct 11, 2019, 10:00 AM IST

1. ವೃತ್ರ ಎನ್ನುವುದು ಕನ್ನಡದ ಮಟ್ಟಿಗೆ ಹೊಸ ಬಗೆಯ ಸಿನಿಮಾ ಎನ್ನುವ ಭರವಸೆ ನಾನು ಕೊಡಬಲ್ಲೆ. ಕತೆ, ಪಾತ್ರಗಳು, ನಿರೂಪಣೆ ಹೊಸದಾಗಿದೆ.

2. ಇದೊಂದು ನಿಯೋನಾಯರ್‌ ಸಿನಿಮಾ. ಇಲ್ಲಿ ಯಾರು ಒಳ್ಳೆಯವರಲ್ಲ, ಯಾರೂ ಕೆಟ್ಟವರಲ್ಲ. ಆದರೆ, ಒಳ್ಳೆಯದು ಮತ್ತು ಕೆಟ್ಟದ್ದು ನಮ್ಮಲ್ಲಿ ಹೇಗೆ ಮತ್ತು ಯಾವಾಗ ಮನೆ ಮಾಡುತ್ತದೆ ಎಂಬುದನ್ನು ಒಂದು ಘಟನೆಯ ಮೂಲಕ ಹೇಳುತ್ತಾ ಹೋಗುತ್ತೇನೆ.

ಒಪ್ಪಿಕೊಂಡಿದ್ದ ಒಂದೇ ಒಂದು ಕನ್ನಡ ಸಿನಿಮಾ ಕೈ ಬಿಟ್ಟ ರಶ್ಮಿಕಾ

3. ಆಗಷ್ಟೆಪೊಲೀಸ್‌ ಇಲಾಖೆಯ ಕ್ರೈಮ್‌ ಬ್ರಾಂಚ್‌ಗೆ ಸೇರಿರುವ ಮಹಿಳಾ ಪೊಲೀಸ್‌ ಸುತ್ತ ಸಾಗುವ ಕತೆ. ಹೊಸದಾಗಿ ಡ್ಯೂಟಿಗೆ ಬಂದ ಈ ಅಧಿಕಾರಿಗೆ ಒಂದು ಕೇಸು ಸಿಗುತ್ತದೆ. ಆ ಕೇಸಿನ ವಿಚಾರಣೆಗೆ ಹೊರಟ ಮೇಲೆ ಆಕೆಯ ಬದುಕಿನಲ್ಲಿ ಏನೆಲ್ಲ ಬದಲಾವಣೆಗಳಾಗುತ್ತವೆ ಎಂಬುದನ್ನು ಸಿನಿಮಾದಲ್ಲಿ ನೋಡಬಹುದು.

4. ಇದು ಅಮಾವಾಸ್ಯೆಯಲ್ಲಿ ಶುರುವಾಗಿ ಹುಣ್ಣಿಮೆಯ ಹೊತ್ತಿಗೆ ಮುಕ್ತಾಯವಾಗುವ ಕತೆ. ಈ ಅವಧಿಯನ್ನು ಚಂದ್ರ ಬೆಳೆಯುವ ಸಮಯ ಎನ್ನುತ್ತೇವೆ. ಈ ಬೆಳವಣಿಗೆ ಚಿತ್ರದ ಮುಖ್ಯ ಪಾತ್ರಧಾರಿ ಮಹಿಳಾ ಪೊಲೀಸ್‌ ಜೀವನಕ್ಕೂ ಸಂಬಂಧವಿರುತ್ತದೆ. ಹೀಗಾಗಿ ಈ ‘ವೃತ್ರ’ ಚಿತ್ರದ್ದು ಹುಣ್ಣಿಮೆ ಮತ್ತು ಅಮಾವಾಸ್ಯೆಯ ನಡುವಿನ ಕತೆ.

ದಾಡಿ ಬಂದ ಮೇಲೆ ಡ್ಯಾಡಿಯಂತಾದ ಅಭಿಷೇಕ್ ಅಂಬರೀಶ್!

5. ಈ ಚಿತ್ರದಲ್ಲಿ ಕ್ರೈಮ್‌ ವಿಭಾಗದ ಪೊಲೀಸ್‌ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸಬೇಕಿತ್ತು. ಅವರ ಫಸ್ಟ್‌ ಲುಕ್‌ ಕೂಡ ಬಿಡುಗಡೆ ಮಾಡಿದ್ವಿ. ಕಾರಣಾಂತರಗಳಿಂದ ರಶ್ಮಿಕಾ ಅವರು ನಟಿಸಲಿಲ್ಲ. ಅವರ ಜಾಗಕ್ಕೆ ಬಂದ ನಿತ್ಯಾಶ್ರೀ ಅವರು ನಿರ್ದೇಶಕನ ವಿಷನ್‌ ಅನ್ನು ತೆರೆ ಮೇಲೆ ಮೂಡಿಸುವುದಕ್ಕೆ ಸಾಕಷ್ಟುಶ್ರಮ ಹಾಕಿದರು. ಯಾವುದರಲ್ಲೂ ಅವರ ನಟನೆ ಕೊರತೆಯಾಗಿ ಕಾಣಲಿಲ್ಲ. ರಶ್ಮಿಕಾ ಮಂದಣ್ಣ ಅವರು ನಮ್ಮ ಚಿತ್ರದಲ್ಲಿ ನಟಿಸಲಿಲ್ಲ ಎನ್ನುವ ಬೇಸರ ಆಗಲಿಲ್ಲ.

6. ಪ್ರಕಾಶ್‌ ಬೆಳವಾಡಿ, ತರುಣ್‌ ಸುಧೀರ್‌ ಮುಂತಾದವರು ನಟಿಸಿದ್ದಾರೆ. ಐದು ವರ್ಷಗಳ ನಂತರ ನಿರ್ದೇಶಕ ತರುಣ್‌ ಅವರು ನಮ್ಮ ಚಿತ್ರದಲ್ಲೇ ನಟಿಸುತ್ತಿರುವುದು ಎನ್ನುವ ಹೆಮ್ಮೆ ಇದೆ. ಕತೆಯ ಹೊರತಾಗಿರುವ ಅಂಶಗಳು ಇಲ್ಲಿಲ್ಲ. ಹಾಡು, ಫೈಟ್‌, ಮಸಾಲೆ ದೃಶ್ಯಗಳಿಲ್ಲ. ಕತೆಯೇ ಮುಖ್ಯ ಎನ್ನುವ ದೃಷ್ಟಿಯಲ್ಲಿ ಮಾಡಿರುವ ಚಿತ್ರವಿದು.

7. ಈ ಚಿತ್ರದ ಕತೆಯನ್ನು ನೋಡಿದಾಗ ಇದು ಎಲ್ಲೋ ನಮ್ಮ ನಡುವೆಯೇ ನಡೆದಂತಿದೆಯಲ್ಲ, ಎಂದು ಅನಿಸುತ್ತದೆ. ಇದೇ ನಮ್ಮ ಚಿತ್ರದ ಶಕ್ತಿ ಕೂಡ. ಈ ಕಾರಣಕ್ಕೆ ‘ವೃತ್ರ’ ಚಿತ್ರವನ್ನು ಎಲ್ಲರು ನೋಡುತ್ತಾರೆಂಬ ಭರವಸೆ ಇದೆ.

8. ಒಬ್ಬ ನಿರ್ದೇಶಕನಾಗಿ ನನಗೆ ಎಲ್ಲ ರೀತಿಯ ಸಿನಿಮಾಗಳನ್ನು ಮಾಡುವಾಸೆ. ಆದರೆ, ವೃತ್ರದಂತಹ ಪ್ರಯೋಗಾತ್ಮಕ ಸಿನಿಮಾ ಮಾಡುವ ಅವಕಾಶ ಒಮ್ಮೆ ಸಿಗುತ್ತದೆ. ಇಲ್ಲಿ ನಮ್ಮ ಪ್ರತಿಭೆಯನ್ನು ಸಾಬೀತು ಮಾಡಬೇಕು. ಅದಕ್ಕೆ ನನಗೆ ‘ವೃತ್ರ’ ಒಳ್ಳೆಯ ಅವಕಾಶ.

9. ನಮ್ಮ ಚಿತ್ರವನ್ನು ರಾರ‍ಯಡಿಕಲ್‌ ಫ್ರೇಮ್ಸ್‌ ಸಂಸ್ಥೆ ವಿತರಣೆ ಮಾಡುತ್ತಿದೆ. ಮಲ್ಟಿಪ್ಲೆಕ್ಸ್‌ ಸೇರಿದಂತೆ ಎಲ್ಲ ರೀತಿಯ ಪ್ರೇಕ್ಷಕರನ್ನು ತಲುಪುವ ನಿಟ್ಟಿನಲ್ಲಿ ಚಿತ್ರವನ್ನು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

10. ನಾನು ಚೆನ್ನೈ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನಲ್ಲಿ ನಿರ್ದೇಶನ ಕೋರ್ಸ್‌ ಓದಿಕೊಂಡು ಬಂದವನು. ಅಲ್ಲಿಂದ ಬಂದ ಮೇಲೆ ರಕ್ಷಿತ್‌ ಶೆಟ್ಟಿಅವರ ಪರಮ್‌ವಾ ಸ್ಟುಡಿಯೋದಲ್ಲಿ ಕೆಲಸ ಮಾಡಿದೆ. ‘777 ಚಾರ್ಲಿ’ ಚಿತ್ರಕ್ಕೆ ಕೆಲಸ ಮಾಡುವಾಗ ಹೊಳೆದ ಕತೆ ಇದು.

Follow Us:
Download App:
  • android
  • ios