ಸಿದ್ದು ಭೇಟಿ ಮಾಡಿದ ಸುಮಲತಾ, ಮಂಡ್ಯದ ‘ಬೆಲ್ಲ’ ಯಾರಿಗೆ?
ಮಹತ್ವದ ರಾಜಕಾರಣದ ಬೆಳವಣಿಗೆಯಲ್ಲಿ ಸುಮಲತಾ ಅಂಬರೀಶ್ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಹಾಗಾದರೆ ಭೇಟಿಯಲ್ಲಿ ಏನೇನಾಯ್ತು?
ಬೆಂಗಳೂರು[ಫೆ.20] ಮಂಡ್ಯ ಲೋಕಸಭಾ ಕ್ಷೇತ್ರದಿಂದ ದೋಸ್ತಿ ಅಭ್ಯರ್ಥಿಗಳ ವಿಚಾರ ಕಗ್ಗಂಟಾಗಿರುವ ಹೊತ್ತಿನಲ್ಲಿ ಸುಮಲತಾ ಅಂಬರೀಶ್ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಕಾವೇರಿ ನಿವಾಸಕ್ಕೆ ಸುಮಲತಾ ಬುಧವಾರ ಸಂಜೆ ಭೇಟಿ ನೀಡಿದ್ದರು.
ಭೇಟಿ ನಂತರ ಮಾತನಾಡಿದ ಸುಮಲತಾ, ಮಂಡ್ಯ ಜನರ ಆಸೆಯಂತೆ ಹಿರಿಯ ನಾಯಕರ ಜೊತೆ ಚರ್ಚಿಸಿದ್ದೇನೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಅಭಿಪ್ರಾಯ ಮುಖ್ಯ ಹೀಗಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ JDS ಜೆಡಿಎಸ್ ಸ್ಪರ್ಧೆ ವಿಚಾರ. JDS ಸ್ಪರ್ಧಿಸಿದ್ರೆ ನನ್ನ ಮುಂದಿನ ನಡೆ ಜನರ ಆಸೆಯಂತೆ ಇರುತ್ತೆ. ಜನರನ್ನೇ ನಾನು ಕೇಳ್ತೇನೆ ಎಂದರು.
ಮಂಡ್ಯದ ಜನ ಏನು ತೀರ್ಮಾನ ಮಾಡ್ತಾರೆ ಅದರಂತೆ ನಡೆಯುತ್ತೇನೆ. ನಾನು ಸ್ಪರ್ಧೆ ಮಾಡುವ ವಿಚಾರದಲ್ಲಿ ಮಂಡ್ಯದ ಜನರ ತೀರ್ಮಾನವೇ ಅಂತಿಮ ಎಂದು ಸುಮಲತಾ ಹೇಳಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸದ್ಯ ಸಂಸದರಾಗಿ ಜೆಡಿಎಸ್ನ ಶಿವರಾಮೇಗೌಡ ಇದ್ದಾರೆ. ಒಂದು ಕಡೆ ಜೆಡಿಎಸ್ನಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ದೋಸ್ತಿಗಳ ನಡುವೆ ಸೀಟು ಹಂಚಿಕೆ ಆಗಿಲ್ಲವಾದರೂ ಮಂಡ್ಯ ಕ್ಷೇತ್ರ ಮಾತ್ರ ಕಗ್ಗಂಟಾಗಿಯೇ ಇದೆ.