BSY ಜತೆ ಗೌಡರು ನಿಜಕ್ಕೂ ಮಾತನಾಡಿದ್ರಾ? ಎಚ್ಡಿಡಿ ಖಡಕ್ ಸ್ಪಷ್ಟನೆ
ದೇವೇಗೌಡರಿಂದ ಸರಣಿ ಟ್ವೀಟ್/ ಹಲವು ಅನುಮಾನಗಳಿಗೆ ತೆರೆ ಎಳೆದ ಮಾಜಿ ಪ್ರಧಾನಿ/ ಬಿಜೆಪಿ ವಿರುದ್ಧ ಹೋರಾಟ ನಿರಂತರ ಎಂದ ಎಚ್ಡಿಡಿ/ ನವೆಂಬರ್ 15 ರಂದು ಸಿಎಂ ಮನೆ ಮುಂದೆ ಜೆಡಿಎಸ್ ಪ್ರತಿಭಟನೆ
ಬೆಂಗಳೂರು(ನ. 05) ರಾಜ್ಯದ ಬಿಜೆಪಿ ಸರ್ಕಾರಕ್ಕೆ ಒಂದು ವೇಳೆ ಉಪಚುನಾವಣೆ ನಂತರ ಸಂಖ್ಯಾ ಬಲದ ಸಮಸ್ಯೆ ಎದುರಾದರೆ ಜೆಡಿಎಸ್ ಬೆಂಬಲಕ್ಕೆ ನಿಲ್ಲಲಿದೆ ಎಂಬುದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದೆ. ಆದರೆ ಇದೆಲ್ಲದರ ನಡುವೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಎಎರಡು ಟ್ವೀಟ್ ಮಾಡಿದ್ದು ಹಲವಾರು ಅನುಮಾನಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.
ಯಾದಗಿರಿ ಜೆಡಿಎಸ್ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ನಡೆಸುತ್ತಿರುವ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಇದೇ ತಿಂಗಳ 15 ರಂದು ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಟ್ವಿಟರ್ ಮೂಲಕ ದೇವೇಗೌಡರು ಗುಡುಗಿದ್ದಾರೆ.
ಉಪಚುನಾವಣೆಗೆ ಜೆಡಿಎಸ್ ಮಾಸ್ಟರ್ ಪ್ಲ್ಯಾನ್, ಅಧ್ಯಕ್ಷ ಗಾದಿಗೆ ಮಾಸ್ ಲೀಡರ್
ಇದರ ಜತೆ ಇನ್ನೊಂದು ಟ್ವೀಟ್ ಮಾಡಿದ್ದು, ಇಂದು ಕೆಲವು ಮಾಧ್ಯಮಗಳಲ್ಲಿ ನಾನು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರು ದೂರವಾಣಿ ಮುಖೇನ ಸಂಭಾಷಣೆ ನಡೆಸಿದ್ದೇವೆ ಎಂದು ಪ್ರಸಾರವಾಗಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು. ಆ ರೀತಿಯ ಯಾವ ಸಂಭಾಷಣೆಯೂ ನಡೆದಿರುವುದಿಲ್ಲ ಎಂಬ ಸ್ಪಷ್ಟನೆಯನ್ನು ನೀಡಿದ್ದಾರೆ.
ಅಲ್ಲಿಗೆ ಒಂದು ಕಡೆ ಬಿಜೆಪಿ ವಿರುದ್ಧ ನಮ್ಮ ಅಂದರೆ ಜೆಡಿಎಸ್ ಸಮರ ನಿರಂತರ ಎಂಬ ಸಂದೇಶವನ್ನು ದೇವೇಗೌಡರು ರವಾನಿಸಿದ್ಸಾರೆ. ಅದರೊಂದಿಗೆ ಎದ್ದುಕೊಂಡಿದ್ದ ಹಲವು ಊಹಾಪೋಹದ ಸುದ್ದಿಗೆ ತೆರೆ ಎಳೆಯುವ ಕೆಲಸವನ್ನು ಮಾಡಿದ್ದಾರೆ.
ಹಿಂದೆ ಮಾತನಾಡುತ್ತ ಎಚ್.ಡಿ.ಕುಮಾರಸ್ವಾಮಿ ಸಹ ಈ ಸರ್ಕಾರ ಇರಬೇಕು ಎಂಬ ದಾಟಿಯಲ್ಲಿ ಮಾತನಾಡಿದ್ದರು. ಸರ್ಕಾರಕ್ಕೆ ದೊಡ್ಡ ಗೌಡರ ಅಭಯ ಸಿಕ್ಕಿದೆ ಎಂಬ ಅರ್ಥದಲ್ಲಿಯೂ ಸುದ್ದಿಗಳು ಪ್ರಸಾರವಾಗಿದ್ದವು.