ಜಪಾನ್ ಪ್ರಧಾನಿ ಶಿಂಜೋ ಅಬೆ ಭಾರತಕ್ಕೆ ಆಗಮನ; ಬೌದ್ಧ ಪ್ರಾರ್ಥನೆಯೊಂದಿಗೆ ಸ್ವಾಗತ
ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್ ಪ್ರಧಾನ ಮಂತ್ರಿ ಶಿಂಜೋ ಅಬೆ ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ಇಂದು ಮಧ್ಯಾಹ್ಯ ಅಹ್ಮದಾಬಾದ್’ಗೆ ಆಗಮಿಸಿದ್ದಾರೆ.
ನವದೆಹಲಿ (ಸೆ.13): ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್ ಪ್ರಧಾನ ಮಂತ್ರಿ ಶಿಂಜೋ ಅಬೆ ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ಇಂದು ಮಧ್ಯಾಹ್ಯ ಅಹ್ಮದಾಬಾದ್’ಗೆ ಆಗಮಿಸಿದ್ದಾರೆ.
ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಿಂಜೋ ಅಬೆಯನ್ನು ಕೆಂಪುಹಾಸಿನ ಮೂಲಕ ಸ್ವಾಗತಿಸಿ, ಪ್ರಧಾನಿ ನರೇಂದ್ರ ಮೋದಿ ಅಪ್ಪುಗೆಯ ಮೂಲಕ ಬರ ಮಾಡಿಕೊಂಡರು. ಬಳಿಕ ಮಹಾತ್ಮ ಗಾಂಧಿಯವರ ಸಾಬರಮತಿ ಆಶ್ರಮದವರೆಗೆ 8 ಕಿಮೀ ರೋಡ್’ಶೋ ನಡೆಸಲಾಯಿತು. ಅದಕ್ಕಾಗಿ ಶಿಬೆಯವರು ಭಾರತೀಯ ಶೈಲಿಯ ನೀಲಿ ಬಣ್ಣದ ನೆಹರು ಜಾಕೇಟ್ ಧರಿಸಿ ಮೋದಿಯೊಂದಿಗೆ ರೋಡ್ ಶೋ ನಡೆಸಿದರು. ಸುಮಾರು 8 ಕಿಮೀ ಉದ್ದಕ್ಕೂ ಸಾವಿರಾರು ಜನರು ನಿಂತು ಇವರನ್ನು ಸ್ವಾಗತಿಸಿದರು. ಶಿಬೆ ಭೇಟಿ ಪ್ರಯುಕ್ತ ಅಹ್ಮದಾವಾದ್ ಹಾಗೂ ಗಾಂಧಿನಗರ ರಸ್ತೆಗಳನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಲಾಗಿತ್ತು. ದಾರಿಯುದ್ಧಕ್ಕೂ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಸುಮಾರು 9 ಸಾವಿರ ಪೊಲೀಸರನ್ನು ಎರಡೂ ನಗರಗಳನ್ನು ನಿಯೋಜಿಸಲಾಗಿದ್ದು ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.
ಜಪಾನಿನ ಹಣಕಾಸು ನೆರವಿನಲ್ಲಿ ನಿರ್ಮಿಸಲಾಗುತ್ತಿರುವ ಮುಂಬೈ-ಅಹ್ಮದಾಬಾದ್ ನಡುವಿನ ಭಾರತದ ಮೊದಲ ಬುಲೆಟ್ ರೈಲಿಗೆ ನಾಳೆ ಶಿಂಜೋ ಅಬೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಭಾರತದ ಅತೀ ವೇಗದ ಮೊದಲ ಬುಲೆಟ್ ಟ್ರೇನ್ ಇದಾಗಿದೆ. 508 ಕಿಮೀ ಉದ್ದದ ರೈಲು ಯೋಜನೆ ಇದಾಗಿದ್ದು, ಅಂದಾಗು 1,10,000 ಕೋಟಿ ರೂಗಳನ್ನು ಖರ್ಚು ಮಾಡಲಾಗುತ್ತಿದೆ. 2022-23 ರಲ್ಲಿ ಈ ಯೋಜನೆ ಮುಕ್ತಾಯವಾಗುವ ನಿರೀಕ್ಷೆಯಿದೆ. ಶೇ. 0.1 ಬಡ್ಡಿದರದಲ್ಲಿ ಜಪಾನ್’ನಿಂದ ರೂ. 88 ಸಾವಿರ ಕೋಟಿ ಸಾಲವನ್ನು ಪಡೆಯಲಾಗಿದೆ.
ಉಭಯ ದೇಶಗಳ ನಾಯಕರಿಗೆ ಇದು 12 ನೇ ವಾರ್ಷಿಕ ಶೃಂಗಸಭೆಯಾಗಿದ್ದು, ಉಭಯ ದೇಶಗಳ ನಡುವಿನ ಬಹುಮುಖ ಸಹಕಾರದ ಬಗ್ಗೆ, ಪ್ರಗತಿಯ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಶಿಬೆಯವರಿಗೆ ಇದು ಭಾರತದ 4 ನೇ ಭೇಟಿಯಾಗಿದ್ದು, ಅವರು ಹಾಗೂ ಅವರ ಪತ್ನಿ ಎರಡು ದಿನಗಳ ಕಾಲ ಅಹ್ಮದಾಬಾದ್’ನಲ್ಲಿ ತಂಗಲಿದ್ದಾರೆ.