ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಸಹೋದರ ಚಾಯ್ವಾಲಾ?
ಯೋಗಿ ಆದಿತ್ಯನಾಥ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಗೂಡಂಗಡಿಯೊಂದರಲ್ಲಿ ಟೀ ಮಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ, ‘ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹೋದರ ಟೀ ಅಂಗಡಿ ನಡೆಸುತ್ತಿದ್ದಾರೆ. ಇದು ನಿಜಾನಾ? ಈ ಫೋಟೋ ಹಿಂದಿನ ಸತ್ಯವೇನು? ಇಲ್ಲಿದೆ ವಿವರ
ಲಕ್ನೋ[ಫೆ.12]: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹೋದರ ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಹುತೇಕ ಯೋಗಿ ಆದಿತ್ಯನಾಥ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಗೂಡಂಗಡಿಯೊಂದರಲ್ಲಿ ಟೀ ಮಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ, ‘ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹೋದರ ಟೀ ಅಂಗಡಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರೊಬ್ಬರು ಹೀಗೆ ಗೂಡಂಗಡಿ ನಡೆಸುತ್ತಿದ್ದರೆ ಪೋಸ್ಟ್ ಮಾಡಿ’ ಎಂದು ವ್ಯಂಗ್ಯವಾಗಿ ವಿವರಣೆ ನೀಡಲಾಗಿದೆ.
ವಿದ್ಯಾನೀಲಂ ಚತುರ್ವೇದಿ ಹೆಸರಿನ ಫೇಸ್ಬುಕ್ ಖಾತೆಯಿಂದ ಮೊದಲಿಗೆ ಈ ಪೋಟೋವನ್ನು ಪೋಸ್ಟ್ ಮಾಡಲಾಗಿದ್ದು, ಈ ಫೇಸ್ಬುಕ್ ಬಳಕೆದಾರರು ಪ್ರೊಫೈಲ್ನಲ್ಲಿ ತಾವು ಶಾಸಕರೆಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋ 11,000 ಬಾರಿ ಶೇರ್ ಆಗಿದೆ. ‘ಮೋದಿ ಗವರ್ನಮೆಂಟ್’ ಪೇಜ್ ಕೂಡ ಶೇರ್ ಮಾಡಿದೆ.
ಆದರೆ ವೈರಲ್ ಆಗಿರುವ ಪೋಸ್ಟ್ ನಲ್ಲಿರುವ ವ್ಯಕ್ತಿ ಯೋಗಿ ಆದಿತ್ಯನಾಥ್ ಸಹೋದರನೇ ಎಂದು ಪರಿಶೀಲಿಸಿದಾಗ ಈ ಸುದ್ದಿ ಸುಳ್ಳೆಂದು ಬಯಲಾಗಿದೆ. ಕ್ವಿಂಟ್ ಸುದ್ದಿಸಂಸ್ಥೆಯು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಪರಿಶೀಲಿಸಿದಾಗ ವೈರಲ್ ಆಗಿರುವ ಫೋಟೋ ಜೊತೆಗೆ ಈ ರೀತಿಯ ಚಾಯ್ವಾಲಾರ ಹಲವು ಫೋಟೋಗಳು ಅಂತರ್ಜಾಲದಲ್ಲಿ ಪತ್ತೆಯಾಗಿವೆ. ಆದರೆ ಅವರೆಲ್ಲಾ ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ಅಲ್ಲಿ ಇರಲಿಲ್ಲ. ಆದರೆ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಅವರಿಗೆ 2 ಜನ ಅಣ್ಣಂದಿರು ಮತ್ತು ಒಬ್ಬ ತಮ್ಮ ಇರುವುದಾಗಿ ಮಾಧ್ಯಮವೊಂದು ವರದಿ ಮಾಡಿತ್ತು.
ಅದರಲ್ಲಿ ಕಿರಿಯ ಸಹೋದರ ಮಹೇಂದ್ರ ಸಿಂಗ್ ಬೀಸ್ತ್ ಸುದ್ದಿ ಮಾಧ್ಯಮವೊಂದರಲ್ಲಿ ಪತ್ರರ್ತರಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದೆ. ಹಿರಿಯ ಅಣ್ಣಂದಿರಲ್ಲಿ ಒಬ್ಬರು ಭಾರತೀಯ ಸೇನೆಯಲ್ಲಿ ಇನ್ನೊಬ್ಬರು ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೊಬ್ಬರು ಮನ್ವೇಂದ್ರ ಮೋಹನ್ ನೋಡಲು ವೈರಲ್ ಆಗಿರುವ ವ್ಯಕ್ತಿಯಂತಯೇ ಇದ್ದಾರಾದರೂ ಅವರು ಚಾಯ್ವಾಲಾ ಅಲ್ಲ. ಅವರೆಲ್ಲರ ಫೋಟೋ ಹಿಡಿದು ಪರಿಶೀಲಿಸಿದಾಗ ಇದು ಸ್ಪಷ್ಟವಾಗಿದೆ.