ಸ್ವಚ್ಛತೆ ಕಾಪಾಡದ ಸದಸ್ಯೆ ಬೇಕಾ? ಮಂಡ್ಯದಿಂದ ಮೋದಿಗೆ ಮಾದೇಗೌಡ ಪತ್ರ
ಸ್ವಚ್ಛ ಭಾರತ ಕಲ್ಪನೆ ವಿಚಾರ ಈಗ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅಂಗಳಕ್ಕೆ ಮತ್ತೆ ಹೋಗಿದೆ. ಅದು ನಮ್ಮ ರಾಜ್ಯದ ಮಂಡ್ಯ ಜಿಲ್ಲೆಯಿಂದ.. ಏನಪ್ಪಾ ಕತೆ ಅಂತೀರಾ?
ಮಂಡ್ಯ(ಡಿ.11) ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡದ ಜಿಲ್ಲಾ ಪಂಚಾಯತ್ ಸದಸ್ಯೆಯ ಸದಸ್ಯತ್ವವನ್ನು ರದ್ದು ಮಾಡಿ ಎಂದು ಮಂಡ್ಯದಲ್ಲಿ ವ್ಯಕ್ತಿಯೋರ್ವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾನೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯೆ ಸುಜಾತ, ಸ್ವಚ್ಛತಾ ಆಂದೋಲನಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಮನೆಯ ಸುತ್ತಮುತ್ತ ಕಸವನ್ನು ಹಾಕುತ್ತಿದ್ದಾರೆ. ಇದರಿಂದ ನಮಗೆ ತೊಂದರೆ ಆಗುತ್ತಿದೆ ಎಂದು ಅದೇ ಗ್ರಾಮದ ಕೆ.ಸಿ.ಮಾದೇಗೌಡ ಆರೋಪಿಸಿದ್ದಾನೆ.
12 ತಿಂಗಳಲ್ಲಿ ಈ ದೇಶ ಸ್ವಚ್ಛಗೊಳಿಸಲು ಸಾಧ್ಯ; ಹೇಗೆ
ಇನ್ನು ಅಕ್ಟೋಬರ್ 15ರಂದೇ ಪ್ರಧಾನಿ ನಿವಾಸಕ್ಕೆ ದೂರಿನ ಪತ್ರ ಕಳುಹಿಸಿರುವ ಮಾದೇಗೌಡ, ಮಾಜಿ ಶಾಸಕರಾದ ಕೆ.ಎಂ.ಪುಟ್ಟು ಅವರ ಪುತ್ರಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯೆ ಸುಜಾತ ವಿರುದ್ಧ ದೂರು ನೀಡಿದ್ದಾನೆ. ಪತ್ರದಲ್ಲಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಸಿಎಂಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕಸವನ್ನು ಸರ್ಕಾರಿ ಜಮೀನಿನಲ್ಲಿ ಸುರಿದು ಶುಚಿತ್ವಕ್ಕೆ ಭಂಗ ತರುತ್ತಿದ್ದಾರೆ. ಇದರಿಂದ ನಮ್ಮ ಕುಟುಂಬಕ್ಕೆ ಅನಾರೋಗ್ಯದ ಸಮಸ್ಯೆ ಎದುರಾಗಿದ್ದು, ಕ್ರಮ ಕೈಗೊಳ್ಳಬೇಕು ಪ್ರಧಾನಿ ಅವರಿಗೆ ಒತ್ತಾಯಿಸಿದ್ದಾನೆ.