ಪ್ರತ್ಯೇಕ ಧರ್ಮ: ಹೆಸರ ಹೇಳಲು ತಡವರಿಸಿದ ಕಾನೂನು ಸಚಿವ!
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಸಂಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಿದ್ದು, ಪ್ರತ್ಯೇಕ ಲಿಂಗಾಯತ ಧರ್ಮವನ್ನು ಅಂಗೀಕರಿಸಲು ಶಿಫಾರಸು ಕಳುಹಿಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಸಂಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಿದ್ದು, ಪ್ರತ್ಯೇಕ ಲಿಂಗಾಯತ ಧರ್ಮವನ್ನು ಅಂಗೀಕರಿಸಲು ಶಿಫಾರಸು ಕಳುಹಿಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಸಂಪುಟ ಸಭೆಯ ನಿರ್ಧಾರವನ್ನು ಓದಿ ಹೇಳಿದ ಟಿ.ಬಿ.ಜಯಚಂದ್ರ, 'ಅಲ್ಪಸಂಖ್ಯಾತ ಮಾನ್ಯತೆಗೆ ಯಾವುದೇ ತೊಂದರೆಯಾಗದಂತೆ ಪ್ರತ್ಯೇಕ ಲಿಂಗಾಯತ ಧರ್ಮವನ್ನು ಅಂಗೀಕರಿಸಲಾಗುವುದು,' ಎಂದರು.
ಬಸವತತ್ವಗಳನ್ನು ಪಾಲಿಸುವವರಿಗೆ ಇಂಥದ್ದೊಂದನ್ನು ಧರ್ಮವನ್ನು ಸ್ವೀಕರಿಸುವ ಅವಕಾಶವಿರಲಿದೆ. ನ್ಯಾ.ನಾಗಮೋಹನ್ ದಾಸ್ ಸಮಿತಿ ವರದಿ ಒಪ್ಪಿಕೊಳ್ಳಲು ಸಮಿತಿ ತೀರ್ಮಾನಿಸಿದ್ದು, ಲಿಂಗಾಯತ, ವೀರಶೈವ ಹಾಗೂ ಬಸ ತತ್ವಗಳನ್ನು ಒಪ್ಪುವವರು ಲಿಂಗಾಯತ ಧರ್ಮದವರಾಗುತ್ತಾರೆ ಎಂದು ಶಿಫಾರಸು ಮಾಡಲು ತೀರ್ಮಾನಿಸಿರುವುದಾಗಿ ಹೇಳಿದರು.
ಅಲ್ಪಸಂಖ್ಯಾತ ಆಯೋಗದ ನಿಯಮಗಳನ್ವಯ ಈ ಶಿಫಾರಸು ಮಾಡಲಾಗುವುದು. ರಾಜ್ಯದಲ್ಲಿ ಈಗಾಗಲೇ ಇರುವ ಅಲ್ಪಸಂಖ್ಯಾತರ ಹಕ್ಕಿಗೆ ಯಾವುದೇ ಚ್ಯುತಿ ಬರಬಾರದು ಎಂಬ ಷರತ್ತಿಗೊಳಪಟ್ಟು ಈ ಶಿಫಾರಸು ಮಾಡಲಾಗುವುದು, ಎಂದು ಭರವಸೆ ನೀಡಿದರು.
ಪತ್ರಕರ್ತರು ಧರ್ಮದ ಹೆಸರೇನು ಎಂದು ಕೇಳಿದ ಪ್ರಶ್ನೆಗೆ ತಬ್ಬಿಬ್ಬಾದ ಜಯಚಂದ್ರ ತುಸು ಕಾಲದ ನಂತರ, 'ಲಿಂಗಾಯತ ಧರ್ಮ'ವೆಂದು ಕರೆಯಲಾಗುವುದು ಎಂದು ಹೇಳಿದರು.