ಸಹಾರ ಡೈರಿ ಹಗರಣದಿಂದ ಮೋದಿಗೆ ರಿಲೀಫ್,ತನಿಖೆಗೆ ಆದೇಶಿಸಲು ಸುಪ್ರೀಂ ನಕಾರ, ಅರ್ಜಿ ವಜಾ
ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಸಹರಾ ಬಿರ್ಲಾ ಡೈರಿಯಿಂದ ಲಂಚವನ್ನು ಸ್ವೀಕರಿಸಿದ್ದಾರೆನ್ನುವ ಆರೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ನವದೆಹಲಿ (ಜ.11): ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಸಹರಾ ಬಿರ್ಲಾ ಡೈರಿಯಿಂದ ಲಂಚವನ್ನು ಸ್ವೀಕರಿಸಿದ್ದಾರೆನ್ನುವ ಆರೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿರುವ ಸರ್ವೋಚ್ಚ ನ್ಯಾಯಾಲಯ, ಈ ದಾಖಲೆಗಳು ನಂಬಲರ್ಹವಾಗಿಲ್ಲ. ಹಾಗಾಗಿ ಪ್ರಧಾನಿ ಸೇರಿದಂತೆ ಇತರರ ಮೇಲೆ ತನಿಖೆ ನಡೆಸುವಂತೆ ಹೇಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಒಂದು ವೇಳೆ ಈ ದಾಖಲೆಗಳನ್ನು ಆಧರಿಸಿ ತನಿಖೆಗೆ ಆದೇಶಿಸಿದರೆ ಕಾನೂನನ್ನು ಸ್ವಾರ್ಥ ಸಾಧನೆಗೆ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ನ್ಯಾಯಾಲಯದ ತೀರ್ಪಿಗೆ ಪ್ರಶಾಂತ್ ಭೂಷಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2013-14 ರಲ್ಲಿ ಎರಡು ಉದ್ಯಮಗಳ ಮೇಲೆ ಐಟಿ ದಾಳಿ ನಡೆದಿದ್ದು,ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ರಾಜಕಾರಣಿಗಳು ಆ ಕಾರ್ಪೋರೇಟ್ ಕಂಪನಿಗಳಿಂದ ಲಂಚ ಪಡೆದಿದ್ದರು. ಇದರ ಬಗ್ಗೆ ವಿಶೇಷ ತನಿಖಾ ತಂಡ (ಎಸ್ ಐಟಿ) ತನಿಖೆ ನಡೆಸುವಂತೆ ಕೋರಿ ಕಾಮನ್ ಕಾಸ್ ಎನ್ನುವ ಎನ್ ಜಿಓ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.
ವಿಚಾರಣೆ ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯ ಪ್ರಧಾನಿ ವಿರುದ್ಧ ತನಿಖೆಗೆ ಆದೇಶಿಸಲು ನಿರಾಕರಿಸಿದೆ. ಇದು ಕಾಂಗ್ರೆಸ್ ಗೆ ಹಿನ್ನೆಡೆಯಾಗಿದೆ.