ಕ್ರೇಜಿಸ್ಟಾರ್ ಪುತ್ರನಿಗೆ ನಾಯಕಿ ಸಿಗುತ್ತಿಲ್ಲ
ನಿರ್ದೇಶಕ ನಾಗಶೇಖರ್ ಅವರು ‘ನವೆಂಬರ್ನಲ್ಲಿ ನಾನು ಅವಳು’ ಚಿತ್ರದ ಮೂಲಕ ಲಾಂಚ್ ಮಾಡುತ್ತಿದ್ದಾರೆ. ಈಗಾಗಲೇ ಟೀಸರ್ ಬೇಕಾಗುವಷ್ಟು ಚಿತ್ರೀಕರಣ ಕೂಡ ಮಾಡಿಕೊಂಡಿಕರುವ ನಾಗಶೇಖರ್, ನಾಯಕಿಗಾಗಿ ಹುಡುಕಾಟ ಮಾಡಿದ್ದೇ ಮಾಡಿದ್ದು. ಆದರೂ ಯಾರು ಸಿಗುತ್ತಿಲ್ಲ.
ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ನಾಯಕಿಯರನ್ನು ಕರೆತಂದ ಖ್ಯಾತ ಕ್ರೇಜಿಸ್ಟಾರ್ಗೆ ಸಲ್ಲುತ್ತದೆ. ಪರಭಾಷೆಗಳಲ್ಲಿ ಬೇಡಿಕೆಯಲ್ಲಿದ್ದುಕೊಂಡು ಕನ್ನಡದತ್ತ ನೋಡದ ನಟಿಯರನ್ನೂ ಗಾಂಧಿನಗರ ಸುತ್ತಾಡಿಸಿ ಕಳುಹಿಸಿದ ಕೀರ್ತಿ ಇವರದು. ಇಂಥ ಕಲರ್ಫುಲ್ ನಾಯಕ ನಟನ ಪುತ್ರ ಚಿತ್ರಕ್ಕೆ ಯಾರೋ ನಾಯಕಿಯರೇ ಸಿಗುತ್ತಿಲ್ಲ. ಹೌದು, ನಟ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಂ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವುದು ಗೊತ್ತೇ ಇದೆ.
ನಿರ್ದೇಶಕ ನಾಗಶೇಖರ್ ಅವರು ‘ನವೆಂಬರ್ನಲ್ಲಿ ನಾನು ಅವಳು’ ಚಿತ್ರದ ಮೂಲಕ ಲಾಂಚ್ ಮಾಡುತ್ತಿದ್ದಾರೆ. ಈಗಾಗಲೇ ಟೀಸರ್ ಬೇಕಾಗುವಷ್ಟು ಚಿತ್ರೀಕರಣ ಕೂಡ ಮಾಡಿಕೊಂಡಿಕರುವ ನಾಗಶೇಖರ್, ನಾಯಕಿಗಾಗಿ ಹುಡುಕಾಟ ಮಾಡಿದ್ದೇ ಮಾಡಿದ್ದು. ಆದರೂ ಯಾರು ಸಿಗುತ್ತಿಲ್ಲ.
ಆರಂಭದಲ್ಲಿ ತಾಪ್ಸಿ ಬರುತ್ತಾರೆ ಎನ್ನುವ ಗಾಸಿಪ್ ಹಬ್ಬಿತು. ಅದಕ್ಕೆ ಕಾರಣ ಇದೇ ನಾಗಶೇಖರ್ ನಿರ್ದೇಶಿಸಬೇಕಿದ್ದ ಗಡಿಯಾರ’ ಚಿತ್ರಕ್ಕೆ ತಾಪ್ಸಿ ಅವರನ್ನು ಬುಕ್ ಮಾಡಿಕೊಂಡಿದ್ದು ಮಾತ್ರವಲ್ಲ, ಅಡ್ವಾನ್ಸ್ ಕೂಡ ಮಾಡಿದ್ದರು. ಆದರೆ, ‘ಗಡಿಯಾರ’ ಸಿನಿಮಾ ಶುರುವಾಗಲಿಲ್ಲ. ಹೀಗಾಗಿ ಆ ಚಿತ್ರಕ್ಕೆ ಬುಕ್ ಆದ ನಟಿಯೇ ವಿಕ್ರಂ ಜತೆ ಹೆಜ್ಜೆ ಹಾಕುತ್ತಾರೆನ್ನುವ ಅಂದಾಜು ಇತ್ತು. ಆದರೆ, ವಯಸ್ಸಿನ ಅಂತರವೋ ಏನೋ ತಾಪ್ಸಿ ವಿಕ್ರಂ ಚಿತ್ರಕ್ಕೆ ಬರಲಿಲ್ಲ. ಇದಾದ ಕೂಡಲೇ ಗಟ್ಟಿಯಾಗಿ ಕೇಳಿ ಬಂದ ಹೆಸರು ಅಕ್ಷರಾ ಹಾಸನ್. ಕಮಲ್ ಹಾಸನ್ ಪುತ್ರಿ ಅಕ್ಷರಾ ಕನ್ನಡಕ್ಕೆ ಬರುತ್ತಾರೆಂಬ ಸುದ್ದಿ ಗಟ್ಟಿಯಾಗಿಯೇ ಸದ್ದು ಮಾಡಿತು.
ಹಾಗೆ ನೋಡಿದರೆ ನಿರ್ದೇಶಕ ನಾಗಶೇಖರ್ ಕೂಡ ಅಕ್ಷರಾ ಹಾಸನ್ ಜತೆ ಮಾತುಕತೆ ಮಾಡಿಕೊಂಡು ಬಂದಿದ್ದರು. ಆದರೆ, ಅಕ್ಷರಾ ಮತ್ತು ವಿಜಯ್ ಕಾಂಬಿನೇಷನ್ನ ತಮಿಳು ಚಿತ್ರದ ಬಿಡುಗಡೆ ಮುಂದಕ್ಕೆ ಹೋಯಿತು. ಈ ಸಿನಿಮಾ ಬಿಡುಗಡೆ ನಂತರ ನೋಡೋಣ ಎಂದಿದ್ದ ಅಕ್ಷರಾ ಅಲ್ಲಿಗೆ ಸುಮ್ಮನಾದರು. ಈಗ ತಮನ್ನಾ, ಆಲಿಯಾ ಭಟ್ ಹಾಗೂ ಶ್ರದ್ಧಾ ಕಪೂರ್ ಅವರ ಹಿಂದೆ ಬಿದ್ದಿದೆ ಚಿತ್ರತಂಡ. ಇದರ ನಡುವೆ ಕೇರಳಾ ಕುಟ್ಟಿ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿದೆ. ಆದರೆ, ಮೊದಲ ಮೂವರು ನಾಯಕಿಯರ ಪೈಕಿ ಯಾರಾದರೂ ಒಬ್ಬರು ಗ್ಯಾರಂಟಿಯಂತೆ.
ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ಮಾದಕ ನಟಿಯರನ್ನು ಕರೆತಂದ ನಾಯಕನ ಪುತ್ರನಿಗೇ ನಾಯಕಿ ಸಿಗದಿರುವ ಬಗ್ಗೆ ನಾಗಶೇಖರ್ ಹೇಳುವುದೇನು? ‘ನವೆಂಬರ್ ಅದ್ಭುತವಾದ ರೋಮ್ಯಾಂಟಿಕ್ ತಿಂಗಳು. ಈ ಒಂದು ತಿಂಗಳಲ್ಲಿ ನಾಯಕ ಮತ್ತು ನಾಯಕಿ ನಡುವೆ ಏನೆಲ್ಲ ಆಗುತ್ತವೆ ಎಂಬುದೇ ಚಿತ್ರದ ಕತೆ. ಹೀಗಾಗಿ ಪಕ್ಕಾ ಕ್ರೇಜಿ ಕ್ವೀನ್ನಂತಿರುವ ನಾಯಕಿಯೇ ಬೇಕು. ಈ ಕಾರಣಕ್ಕಾಗಿ ನಾವು ಅಂದುಕೊಳ್ಳುತ್ತಿರುವ ನಾಯಕಿಯರೇ ಸಿಗುತ್ತಿಲ್ಲ. ಅಲ್ಲದೆ ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಈ ಚಿತ್ರ ಬರುವುದರಿಂದ ನಾಲ್ಕೂ ಭಾಷೆಗಳಿಗೂ ಪರಿಚಿತ ಮುಖ ಬೇಕಿರುವುರುವುದು ನಮ್ಮ ಚಿತ್ರಕ್ಕೆ ನಾಯಕಿಯ ಆಯ್ಕೆ ದೊಡ್ಡ ಸಾಹಸವಾಗುತ್ತಿದೆ’ ಎನ್ನುತ್ತಾರೆ ನಾಗಶೇಖರ್. ಸದ್ಯಕ್ಕೆ ಇದೇ ತಿಂಗಳು 16ಕ್ಕೆ ವಿಕ್ರಂ ಅವರ ಹುಟ್ಟು ಹಬ್ಬ. ಅಂದು ಒಂದು ಲಾಂಚಿಂಗ್ ಟೀಸರ್ ಬಿಡುಗಡೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿರುವ ನಾಗಶೇಖರ್, ನಟ ಸುದೀಪ್ ಅವರಿಂದ ಟೀಸರ್ ಬಿಡುಗಡೆ ಮಾಡಿಸುವ ಯೋಚನೆಯಲ್ಲಿದ್ದಾರೆ. ಟೀಸರ್ ಬಂದ ಮೇಲೆ ನಾಯಕಿ ಶಿಕಾರಿಗೆ ಹೊರಡುವ ಯೋಚನೆ ನಿರ್ದೇಶಕರದ್ದು.
(ಕನ್ನಡಪ್ರಭ ವಾರ್ತೆ)