'ಮೋದಿ ಬೇಡ, ಗಡ್ಕರಿಯನ್ನು ಪ್ರಧಾನ ಮಂತ್ರಿ ಮಾಡಿ'
ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬಾರದು| ಮೋಹನ ಭಾಗವತ್ ಅವರಿಗೆ ಪತ್ರ
ಮುಂಬೈ[ಡಿ.19]: ‘2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬಾರದು’ ಎಂದು ಮಹಾರಾಷ್ಟ್ರ ಬಿಜೆಪಿ ಸರ್ಕಾರದ ಅಂಗವಾಗಿರುವ ರೈತ ನಾಯಕರೊಬ್ಬರು ಆರ್ಎಸ್ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ. ಇದು ಬಿಜೆಪಿಗೆ ಭಾರಿ ಮುಜುಗರ ಸೃಷ್ಟಿಸಿದೆ.
ಮಹಾರಾಷ್ಟ್ರ ಸರ್ಕಾರದ ಭಾಗವಾಗಿರುವ ‘ವಸಂತರಾವ್ ನಾಯಕ್ ಶೇಠಿ ಸ್ವಾವಲಂಬನ ಮಿಶನ್’ ಸಂಸ್ಥೆಯ ಮುಖ್ಯಸ್ಥ ಕಿಶೋರ್ ತಿವಾರಿ ಈ ಪತ್ರ ಬರೆದಿದ್ದು, 2019ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಬದಲಿಗೆ ಸಜ್ಜನ ರಾಜಕಾರಣಿಯಾಗಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಭಾಗವತ್ ಅವರಿಗೆ ಮನವಿ ಮಾಡಿದ್ದಾರೆ.
‘ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸರ್ವಾಧಿಕಾರಿ ನಡೆ, ಅವರ ತೀವ್ರವಾದಿ ಹಾಗೂ ಸರ್ವಾಧಿಕಾರಿ ನಡವಳಿಕೆಯಿಂದ ದೇಶಕ್ಕೆ ಅಪಾಯವಿದ್ದು, ಮೋದಿ ಬದಲು ನಿತಿನ್ ಗಡ್ಕರಿ ಪ್ರಧಾನಿ ಹುದ್ದೆಗೆ ಸೂಕ್ತ ವ್ಯಕ್ತಿ’ ಎಂದು ತಿವಾರಿ ಅಭಿಪ್ರಾಯಪಟ್ಟಿದ್ದಾರೆ.
‘ಮೋದಿ ಹಾಗೂ ಶಾ ಅವರಿಗೆ ಕೇವಲ ಬುಲೆಟ್ ರೈಲುಗಳು ಹಾಗೂ ಮೆಟ್ರೋ ಯೋಜನೆಗಳ ಮೇಲೆ ಆಸಕ್ತಿ ಇದೆ. ಇವರ ಆಳ್ವಿಕೆ ಜನರಲ್ಲಿ ಭಯ ಮೂಡಿಸಿದೆ. ಈ ಭಯದಿಂದ ಮುಕ್ತಿ ಪಡೆಯಲು ಗಡ್ಕರಿ ಅವರು ಪ್ರಧಾನಿ ಅಭ್ಯರ್ಥಿಯಾಗಬೇಕು’ ಎಂದು ಅವರು ಆಗ್ರಹಿಸಿದ್ದಾರೆ.