ಪೇದೆಯಿಂದ ಮನೆಗೆ ನುಗ್ಗಿ ಮಹಿಳಾ ಸಿಬ್ಬಂದಿ ಮೇಲೆ ರೇಪ್!
ಇತ್ತೀಚಿಗೆ ‘ಶತಕವೀರ ಸರಗಳ್ಳರ’ನನ್ನು ಸೆರೆ ಹಿಡಿದು ಬೈಕ್ ಬಹುಮಾನ ಪಡೆದಿದ್ದ ಜ್ಞಾನಭಾರತಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಚಂದ್ರಕುಮಾರ್ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಸೇರಿದ್ದಾರೆ.
ಬೆಂಗಳೂರು : ಇತ್ತೀಚಿಗೆ ‘ಶತಕವೀರ ಸರಗಳ್ಳರ’ನನ್ನು ಸೆರೆ ಹಿಡಿದು ಬೈಕ್ ಬಹುಮಾನ ಪಡೆದಿದ್ದ ಜ್ಞಾನಭಾರತಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಚಂದ್ರಕುಮಾರ್ ಅವರು, ತನ್ನ ಪರಿಚಿತ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಸೋಮವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.
ನಂದಿನಿಲೇಔಟ್ ಠಾಣಾ ವ್ಯಾಪ್ತಿಯ ನಿವಾಸಿ 27 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಚಂದ್ರಕುಮಾರ್ನನ್ನು ಬಂಧಿಸಿದ ಪೊಲೀಸರು, ಸೋಮವಾರ ನ್ಯಾಯಾಂಗ ಬಂಧನಕ್ಕೊಪಿಸಿದ್ದಾರೆ. ಮೂರು ದಿನಗಳ ಹಿಂದೆ ಕರ್ತವ್ಯ ಮುಗಿಸಿದ ಬಳಿಕ ಸಂತ್ರಸ್ತೆಯ ಮನೆಗೆ ನುಗ್ಗಿ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ದೂರಲಾಗಿದೆ.
ಒಂದೇ ಕಡೆ ಕೆಲಸ ಮಾಡುತ್ತಿದ್ದರಿಂದ ಗೃಹ ರಕ್ಷಕ ಸಿಬ್ಬಂದಿಗೆ ಹೆಡ್ ಕಾನ್ಸ್ಟೇಬಲ್ ಚಂದ್ರಕುಮಾರ್ ಪರಿಚಯವಿತ್ತು. ಈ ಗೆಳೆತನದಲ್ಲೇ ನ.2ರಂದು ಜ್ಞಾನಭಾರತಿ ವಿಶ್ವವಿದ್ಯಾಲಯದ ಆವರಣದಲ್ಲಿ ಭದ್ರತಾ ಕರ್ತವ್ಯ ಮುಗಿಸಿದ ಬಳಿಕ ಆಕೆಯನ್ನು ಮನೆಗೆ ಚಂದ್ರಕುಮಾರ್ ಡ್ರಾಪ್ ಮಾಡಿದ್ದ. ಹೀಗೆ ಅವರಿಬ್ಬರು ಮಧ್ಯೆ ಆತ್ಮೀಯತೆ ಮೂಡಿತ್ತು ಎನ್ನಲಾಗಿದೆ.
ಇದಾದ ನಂತರ ನ.16ರ ರಾತ್ರಿ 8.15ರಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಗೃಹ ರಕ್ಷಕ ಸಿಬ್ಬಂದಿಯನ್ನು ಅಡ್ಡಗಟ್ಟಿಚಂದ್ರಕುಮಾರ್ ಅಸಭ್ಯವಾಗಿ ನಡೆದುಕೊಂಡಿದ್ದ. ಈ ನಡವಳಿಕೆಯಿಂದ ಬೇಸರಗೊಂಡ ಸಂತ್ರಸ್ತೆ, ಜ್ಞಾನಭಾರತಿ ಠಾಣೆ ಇನ್ಸ್ಪೆಕ್ಟರ್ಗೆ ಚಂದ್ರಕುಮಾರ್ ವಿರುದ್ಧ ಮೌಖಿಕ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಇನ್ಸ್ಪೆಕ್ಟರ್ ಅವರು, ಇಬ್ಬರಿಗೂ ಬುದ್ಧಿವಾದ ಹೇಳಿದ್ದರು. ಅಲ್ಲದೆ, ಮತ್ತೆ ಈ ರೀತಿ ವರ್ತನೆ ತೋರಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಕಾನ್ಸ್ಟೇಬಲ್ಗೆ ಎಚ್ಚರಿಕೆ ಕೊಟ್ಟಿದ್ದರು ಎಂದು ತಿಳಿದು ಬಂದಿದೆ.
ಇನ್ಸ್ಪೆಕ್ಟರ್ಗೆ ದೂರು ಕೊಟ್ಟಿದ್ದರಿಂದ ಕ್ರುದ್ಧನಾದ ಕಾನ್ಸ್ಟೇಬಲ್, ಅಂದು ರಾತ್ರಿ 9.30ಕ್ಕೆ ಗೃಹ ರಕ್ಷಕಿ ಮನೆಗೆ ತೆರಳಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ವಿವಾಹಿತೆಯಾದ ಸಂತ್ರಸ್ತೆ, ಪತಿ ಬಂದಿರಬೇಕು ಎಂದು ಬಾಗಿಲು ತೆರೆದಾಗ ಬಲವಂತವಾಗಿ ಒಳ ಪ್ರವೇಶಿಸಿದ ಆರೋಪಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಅಂದು ಹೀರೊ, ಇಂದು ಜೀರೊ
ಇದೇ ವರ್ಷದ ಜೂನ್ 18ರಂದು 100ಕ್ಕೂ ಅಧಿಕ ಸರಗಳ್ಳತನ ಕೃತ್ಯ ಎಸಗಿದ್ದ ಕುಖ್ಯಾತ ಸರಗಳ್ಳ ಅಚ್ಯುತ್ಕುಮಾರ್ ಗಣಿ ಎಂಬುವನನ್ನು ಬೆನ್ನಟ್ಟಿಚಂದ್ರಕುಮಾರ್ ಬಂಧಿಸಿದ್ದ. ಈ ಕಾರ್ಯವನ್ನು ಶ್ಲಾಘಿಸಿದ್ದ ಪಶ್ಚಿಮ ವಿಭಾಗದ ಡಿಸಿಪಿ ರವಿ.ಡಿ.ಚೆನ್ನಣ್ಣನವರ್, ಚಂದ್ರಕುಮಾರ್ಗೆ .1 ಲಕ್ಷ ನಗದು, ಪಲ್ಸರ್ ಬೈಕ್ ಬಹುಮಾನ ಹಾಗೂ 6 ತಿಂಗಳು ವೇತನಸಹಿತ ರಜೆ ಮತ್ತು ದಕ್ಷಿಣ ಭಾರತ ಪ್ರವಾಸಕ್ಕೆ ಉಡುಗೊರೆ ಕೊಟ್ಟು ಅಭಿನಂದಿಸಿದ್ದರು. ಈಗ ಅದೇ ಹೆಡ್ ಕಾನ್ಸ್ಟೇಬಲ್ ಅತ್ಯಾಚಾರ ಆರೋಪ ಹೊತ್ತು ಜೈಲು ಸೇರುವಂತಾಗಿದೆ.