ಭಾರತದ ಗಡಿಗಳ ಇತಿಹಾಸ ಬರೆಯಲು ರಾಜನಾಥ್ ಸಿಂಗ್ ಅನುಮತಿ!
ದೇಶದ ಗಡಿಗಳ ಇತಿಹಾಸ ಬರೆಯುವ ಕಾರ್ಯಕ್ಕೆ ಚಾಲನೆ| ಇತಿಹಾಸ ಬರೆಯುವ ಕಾರ್ಯಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮತಿ| ಗಡಿಗಳ ಇತಿಹಾಸ ಹಾಗೂ ಕಾಲಕಾಲಕ್ಕೆ ಆದ ಬದಲಾವಣೆಗಳ ಕುರಿತು ಮಾಹಿತಿ ಸಂಗ್ರಹ| ಗಡಿ ಭಾಗದ ಜನಾಂಗೀಯತೆ ಹಾಗೂ ಸಂಸ್ಕೃತಿಯ ಇತಿಹಾಸ ಕೆದಕಲು ರಕ್ಷಣಾ ಇಲಾಖೆ ಸಜ್ಜು| ಮುಂದಿನ ಎರಡು ವರ್ಷಗಳಲ್ಲಿ ಕಾರ್ಯ ಸಾಧಿಸುವಂತೆ ಅಧಿಕಾರಿಗಳಿಗೆ ರಾಜನಾಥ್ ಸಿಂಗ್ ಸೂಚನೆ|
ನವದೆಹಲಿ(ಸೆ.18): ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದ ಗಡಿಗಳ ಇತಿಹಾಸ ಬರೆಯುವ ಕಾರ್ಯಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಪ್ಪಿಗೆ ನೀಡಿದ್ದಾರೆ.
ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ, ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ, ಗೃಹ ವ್ಯವಹಾರಗಳ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯದ ಸಭೆಯ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ.
ಭಾರತದ ಗಡಿಗಳ ಇತಿಹಾಸ, ಕಾಲಕಾಲಕ್ಕೆ ಅದರಲ್ಲಾದ ಬದಲಾವಣೆ, ಗಡಿ ನಿರ್ಮಾಣ, ಸ್ಥಳಾಂತರದಲ್ಲಿ ಭದ್ರತಾ ಪಡೆಗಳ ಪಾತ್ರಗಳ ಕುರಿತು ಮಾಹಿತಿ ಸಂಗ್ರಹಿಸಲಾಗುವುದು ಎಂದು ರಕ್ಷಣಾ ಇಲಾಖೆ ತಿಳಿಸಿದೆ.
ಗಡಿ ಭಾಗದ ಜನಾಂಗೀಯತೆ, ಸಂಸ್ಕೃತಿ ಹಾಗೂ ಕಾಲ ಕಾಲಕ್ಕೆ ಅದರಲ್ಲಾದ ಬದಲಾವಣೆಗಳು ಮತ್ತು ಪರಿಣಾಮಗಳು ಕುರಿತೂ ಸಂಶೋಧನೆ ನಡೆಯಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.