ಮಹದಾಯಿ ಬಗ್ಗೆ ನಿಲುವು ಪ್ರಕಟಿಸುತ್ತಾರಾ ರಾಹುಲ್..?
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫೆ.24ರಿಂದ ಕೈಗೊಳ್ಳಲಿರುವ ತಮ್ಮ ಎರಡನೇ ಹಂತದ ಜನಾಶೀರ್ವಾದ ಪ್ರವಾಸದ ವೇಳೆ ಮಹದಾಯಿ ವಿಚಾರದ ಬಗ್ಗೆ ತಮ್ಮ ನಿಲುವು ಪ್ರಕಟಪಡಿಸುವ ಸಾಧ್ಯತೆಯಿದೆ.
ಬೆಂಗಳೂರು : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫೆ.24ರಿಂದ ಕೈಗೊಳ್ಳಲಿರುವ ತಮ್ಮ ಎರಡನೇ ಹಂತದ ಜನಾಶೀರ್ವಾದ ಪ್ರವಾಸದ ವೇಳೆ ಮಹದಾಯಿ ವಿಚಾರದ ಬಗ್ಗೆ ತಮ್ಮ ನಿಲುವು ಪ್ರಕಟಪಡಿಸುವ ಸಾಧ್ಯತೆಯಿದೆ.
ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ತನ್ನಿಂದ ಆಗುವುದಿಲ್ಲ ಎಂದು ಕಾಂಗ್ರೆಸ್ ಹೇಳಲಿ, ಅನಂತರ ಬಿಜೆಪಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸುತ್ತದೆ ಎಂದು ಆ ಪಕ್ಷದ ಅಧ್ಯಕ್ಷ ಅಮಿತ್ ಶಾ ಸವಾಲು ಹಾಕಿದ ಬೆನ್ನಲ್ಲೇ ಗುರುವಾರ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಈ ಸುಳಿವು ನೀಡಿದರು.
‘ರಾಹುಲ್ ಗಾಂಧಿ ಫೆ. 24ರಿಂದ ಮೂರು ದಿನಗಳ ಕಾಲ ಮುಂಬೈ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವರು. ಈ ಪ್ರವಾಸದ ವೇಳೆ ಅವರು ಮಹದಾಯಿ ವಿಚಾರದಲ್ಲಿ ತಮ್ಮ ನಿಲುವು ಪ್ರಕಟಪಡಿಸುವ ಸಾಧ್ಯತೆಯೂ ಇದೆ’ ಎಂದು ಅವರು ಹೇಳಿದರು. ರಾಹುಲ್ ರಾಜ್ಯ ಪ್ರವಾಸದ ವೇಳೆ ಹುಬ್ಬಳ್ಳಿ, ಬೆಳಗಾವಿ ಭೇಟಿ ವೇಳೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸುವುದಾಗಿ ಮಹಾದಾಯಿ ಹೋರಾಟಗಾರರು ಬುಧವಾರ ಹೇಳಿದ್ದರು. ಈ ನಡುವೆ ಬಿಜೆಪಿ ಅಧ್ಯಕ್ಷರು ಕೂಡ ಕಾಂಗ್ರೆಸ್ಗೆ ಸವಾಲು ಹಾಕಿದ್ದರು.