“ಗುಜರಾತ್’ನಲ್ಲಿ ನಿಮಗೆಲ್ಲಾ ಕಾದಿದೆ ಒಂದು ಅಚ್ಚರಿ”
ಗುಜರಾತ್ ಚುನಾವಣೆಯ ಮತ ಎಣಿಕೆ ದಿನವಾದ ಡಿ.18ರಂದು ಪ್ರತಿಯೊಬ್ಬರಿಗೂ ಅಚ್ಚರಿ ಕಾದಿದೆ. ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಲಿದ್ದು, ಎಲ್ಲರನ್ನೂ ಚಕಿತಗೊಳಿಸಲಿದೆ ಎಂದು ಕಾಂಗ್ರೆಸ್ಸಿನ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಅದಮ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಹಮದಾಬಾದ್ (ಡಿ.11): ಗುಜರಾತ್ ಚುನಾವಣೆಯ ಮತ ಎಣಿಕೆ ದಿನವಾದ ಡಿ.18ರಂದು ಪ್ರತಿಯೊಬ್ಬರಿಗೂ ಅಚ್ಚರಿ ಕಾದಿದೆ. ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಲಿದ್ದು, ಎಲ್ಲರನ್ನೂ ಚಕಿತಗೊಳಿಸಲಿದೆ ಎಂದು ಕಾಂಗ್ರೆಸ್ಸಿನ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಅದಮ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, `ಗುಜರಾತಿನಲ್ಲಿ ನಾನು ನನ್ನ ಕೆಲಸ ಮಾಡಿ ಆಗಿದೆ. ಫಲಿತಾಂಶದ ಬಗ್ಗೆ ಚಿಂತೆ ಮಾಡದೇ ಕೆಲಸ ಮಾಡಬೇಕು ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಹೀಗಾಗಿ ಫಲಿತಾಂಶದ ಬಗ್ಗೆ ನನಗೆ ಚಿಂತೆ ಇಲ್ಲ' ಎಂದೂ ತಿಳಿಸಿದ್ದಾರೆ.
ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ವಿವಿಧ ವಾಹಿನಿಗಳಿಗೆ ಸಂದರ್ಶನ ನೀಡಿರುವ ಅವರು, `ಮೋದಿ ಅವರ ಬಗ್ಗೆ ನನಗೆ ದ್ವೇಷವಿಲ್ಲ. ಅವರಿಂದಾಗಿ ನನಗೆ ಸಹಾಯವಾಗಿದೆ' ಎಂದು ವ್ಯಂಗ್ಯವಾಗಿ ನುಡಿದಿದ್ದಾರೆ.
ರಾಹುಲ್ ಸಂದರ್ಶನದ ಆಯ್ದ ಭಾಗ: ಮೂರು ತಿಂಗಳಿಂದ ನಾನು ಗುಜರಾತಿನ ಧ್ವನಿಯನ್ನು ಎತ್ತಿದ್ದೇನೆ. ಬಿಜೆಪಿಯವರಿಗೆ ನನ್ನ ಬಗ್ಗೆ ಭಯವಿಲ್ಲ. ಗುಜರಾತಿನ ಧ್ವನಿಯ ಬಗ್ಗೆ ಆತಂಕವಿದೆ. ಈ ಚುನಾವಣೆ ರಾಹುಲ್ ಗಾಂಧಿ ಅಥವಾ ನರೇಂದ್ರ ಮೋದಿ ಅವರ ಚುನಾವಣೆಯಲ್ಲ. ಗುಜರಾತಿನ ಧ್ವನಿಗೆ ಸಂಬಂಧಿಸಿದ್ದಾಗಿದೆ. ಕಳೆದ 22 ವರ್ಷಗಳಲ್ಲಿ ಗುಜರಾತಿನ ಆದ್ಯತೆ ಕೇವಲ 10 ವ್ಯಕ್ತಿಗಳಾಗಿತ್ತು.
ನಮ್ಮ ಆದ್ಯತೆ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳಾಗಿವೆ. ನಮ್ಮ ಸರ್ಕಾರ ಜನರ ಮನ್ ಕೀ ಬಾತ್ ಆಲಿಸಲಿದೆ. ಜನರನ್ನು ಕೇಳದೇ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಾನು ಸುಧಾರಿಸಿದ್ದೇನೆ ಎಂದರೆ ತಪ್ಪಾದೀತು. ಬಿಜೆಪಿಯೇ ಸಂಚು ರೂಪಿಸಿ ನನ್ನ ಹೆಸರು ಕೆಡಿಸಿತ್ತು ಎಂದು ರಾಹುಲ್ ದೂರಿದರು.
ಕಾಂಗ್ರೆಸ್ನಿಂದ ಪ್ರತಿದೂರು: ರಾಹುಲ್ ಸಂದರ್ಶನದ ವಿರುದ್ಧ ಚುನಾವಣಾ ಆಯೋಗಕ್ರಮ ಕೈಗೊಂಡಿರುವ ನಡುವೆಯೇ, ಗುಜರಾತ್ ಚುನಾವಣೆ ಕುರಿತು ಬುಧವಾರ ಮಾತನಾಡಿರುವ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಪೀಯೂಶ್ ಗೋಯಲ್ ವಿರುದ್ಧ ಕಾಂಗ್ರೆಸ್ ಪಕ್ಷಚುನಾವಣಾ ಆಯೋಗಕ್ಕೆ ದೂರು ನೀಡಿದೆ.