ಹಿಡಿಯಲು ಹೋದ ಕಾರ್ಮಿಕನ ಕೊರಳಿಗೆ ಸುತ್ತಿಕೊಂಡ ಹೆಬ್ಬಾವು!
ಹಿಡಿಯಲು ಹೋದ ಕಾರ್ಮಿಕನ ಕೊರಳಿಗೆ ಸುತ್ತಿಕೊಂಡ ಹೆಬ್ಬಾವು| ಸಾವಿನ ದವಡೆಯಿಂದ ಪಾರಾಗಿ ಬಂದ ಕಾರ್ಮಿಕ, ವಿಡಿಯೋ ವೈರಲ್
ತಿರುವನಂತಪುರಂ[ಅ.17]: ಕಾಲೇಜು ಕ್ಯಾಂಪಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿನೋರ್ವ ಹೆಬ್ಬಾವು ಹಿಡಿಯಲು ಹೋಗಿ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾರೆ. ಇಲ್ಲಿನ ನೈಯರ್ನಲ್ಲಿರುವ ಕೇರಳ ಇನ್ಸಿ$್ಟಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆವರಣದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದ ಭುವಚಂದ್ರನ್ ನಾಯರ್ ಪೊದೆಗಳನ್ನು ಕತ್ತರಿಸುತ್ತಿರುವ ವೇಳೆ ದೂರದಲ್ಲಿ ಬಟ್ಟೆಯ ತುಂಡೊಂದು ಗೋಚರಿಸಿದೆ. ಅದನ್ನು ತೆರವುಗೊಳಿಸಲೆಂದು ಸನಿಹಕ್ಕೆ ಹೋದಾಗ ಅದು ಬೃಹತ್ ಗಾತ್ರದ ಹೆಬ್ಬಾವು ಎಂದು ತಿಳಿದು ಬಂದಿತ್ತು.
ಹೆಬ್ಬಾವನ್ನು ಹಿಡಿದು ಗೋಣಿ ಚೀಲಕ್ಕೆ ತುಂಬಿಸಲು ಹೊರಟಾಗ, ಕೆರಳಿದ ಹೆಬ್ಬಾವು ನಾಯರ್ ಕೊರಳಿಗೆ ಬಿಗಿಯಾಗಿ ಸುತ್ತಿಕೊಂಡಿದೆ. ಕೂಡಲೇ ಸಹಾಯಕ್ಕಾಗಿ ಬೊಬ್ಬೆ ಹಾಕಿದರೂ ಹೆಬ್ಬಾವಿನ ಬೃಹತ್ ಗಾತ್ರ ಕಂಡು ಹತ್ತಿರ ಬರಲೂ ಹೆದರಿದ್ದಾರೆ. ಒಟ್ಟು 55 ರಷ್ಟುಮಂದಿ ಕೂಲಿಯಾಳುಗಳು ಅಲ್ಲೇ ಇದ್ದರೂ ಅಸಹಾಯಕರಾಗಿ ನಿಂತಿದ್ದರು. ಕೊನೆಗೆ ಇಬ್ಬರು ಬಂದು ನಾಯರ್ ಅವರನ್ನು ಹಾವಿನ ಹಿಡಿತದಿಂದ ಕಾಪಾಡಿದ್ದಾರೆ.
ಹೆಬ್ಬಾವು ಬಿಗಿಯಾಗಿ ಸುತ್ತಿದ್ದರಿಂದ ನಾಯರ್ ಕತ್ತಲ್ಲಿ ನೋವು ಕಾಣಿಸಿಕೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹಾವನ್ನು್ನ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಒಪ್ಪಿಸಲಾಗಿದೆ.