‘ಪವನಪುತ್ರ’ರಿಗೆ ವಿಜಯದಶಮಿ ಅರ್ಪಣೆ: ಮೋದಿ ಮಾಡಿಸಿದರು ಆಣೆ!
ದೇಶಾದ್ಯಂತ ವಿಜೃಂಭಣೆಯ ವಿಜಯದಶಮಿ ಆಚರಣೆ| ನವದೆಹಲಿಯ ರಾಮಲೀಲಾ ಮೈದಾನದಲ್ಲಿ ವಿಜಯದಶಮಿ ಕಾರ್ಯಕ್ರಮ| ವಿಜಯದಶಮಿ ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ ವಿಜಯದಶಮಿಯನ್ನು ಭಾರತೀಯ ವಾಯುಸೇನೆಗೆ ಸಮರ್ಪಿಸಿದ ಪ್ರಧಾನಿ ಮೋದಿ| ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್ ಬಳಸದಿರುವ ಸಂಕಲ್ಪ ಮಾಡುವಂತೆ ಜನತೆಗೆ ಕರೆ| ಸಾಮಾಜಿಕ ಏಕತೆಯಲ್ಲಿ ಬಹುದೊಡ್ಡ ಶಕ್ತಿ ಇದೆ ಎಂದ ಪ್ರಧಾನಿ ಮೋದಿ|
ನವದೆಹಲಿ(ಅ.08): ದೇಶಾದ್ಯಂತ ವಿಜಯದಶಮಿ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈ ಶುಭ ದಿನವನ್ನು 87ನೇ ಜನ್ಮ ದಿನಾಚರಣೆ ಆಚರಿಸುತ್ತಿರುವ ಭಾರತೀಯ ವಾಯುಸೇನೆಗೆ ಅರ್ಪಿಸಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ವಿಜಯದಶಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಆಂತರ್ಯದಲ್ಲಿ ಹುದುಗಿರುವ ಕೆಟ್ಟದನ್ನು ಸುಟ್ಟು ಒಳ್ಳೆಯದನ್ನು ಸ್ವೀಕರಿಸುವ ಸಂಕಲ್ಪ ಮಾಡೋಣ ಎಂದು ಜನತೆಗೆ ಮನವಿ ಮಾಡಿದರು.
ಭಾರತದ ಸಾಂಸ್ಕೃತಿಕ ಇತಿಹಾಸ ಸದಾಕಾಲ ಒಳ್ಳೆಯದನ್ನು ಪೋಷಿಸುತ್ತಾ ಬಂದಿದ್ದು, ಕೆಟ್ಟದ್ದನ್ನು ಸದಾಕಾಲ ಮೆಟ್ಟಿ ನಿಂತಿದೆ ಎಂದು ಈ ವೇಳೆ ಪ್ರಧಾನಿ ಮೋದಿ ನುಡಿದರು.
ವಿಜಯದಶಮಿಯ ಈ ವಿಶಿಷ್ಟ ದಿನದಂದು ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್ ಬಳಸದಿರುವ ಸಂಕಲ್ಪ ಮಾಡುವಂತೆ ಪ್ರಧಾನಿ ಮೋದಿ ದೇಶದ ಜನರಲ್ಲಿ ಮನವಿ ಮಾಡಿದರು.
ಇಂದು ಭಾರತೀಯ ವಾಯುಸೇನೆ ತನ್ನ 87ನೇ ಜನ್ಮಜಯಂತಿ ಆಚರಿಸುತ್ತಿದ್ದು, ಈ ವಿಜಯದಶಮಿಯನ್ನು ವಾಯುಸೇನೆಯ ಧೀರ ಯೋಧರಿಗೆ ಅರ್ಪಿಸೋಣ ಎಂದು ಪ್ರಧಾನಿ ಮೋದಿ ಹೇಳಿದರು.
ಸಾಮಾಜಿಕ ಏಕತೆಯಲ್ಲಿ ಬಹುದೊಡ್ಡ ಶಕ್ತಿ ಇದ್ದು, ಈ ಏಕತೆ ನಮ್ಮನ್ನು ಮತ್ತಷ್ಟು ಬಲಿಷ್ಠ ಸಮಾಜ ನಿರ್ಮಾಣ ಮಾಡಲು ಪ್ರೇರೆಪಿಸುತ್ತದೆ ಎಂದು ಪ್ರಧಾನಿ ನುಡಿದರು.
ಇನ್ನು ಪ್ರಧಾನಿ ಮೋದಿ ಭಾಷಣದ ಬಳಿಕ ರಾಮಲೀಲಾ ಮೈದಾನದಲ್ಲಿ ರಾಮಾಯಣ ನಾಟಕವನ್ನು ಪ್ರದರ್ಶಿಸಲಾಯಿತು.