ಹೆಂಡತಿ, ಮಗಳನ್ನು ರೇಪ್ ಮಾಡಿ, ಕೊಲೆ ಮಾಡಿದ್ದಾರೆಂದು ಪೊಲೀಸರಿಗೆ ಕರೆ: ಸ್ಥಳಕ್ಕೆ ಹೋದಾಗ ಕಾದಿತ್ತು ಶಾಕ್!
ಬೆಳ್ಳಂಬೆಳಿಗ್ಗೆ ಪೊಲೀಸರಿಗೆ ವ್ಯಕ್ತಿಯೊಬ್ಬ ಕರೆ ಮಾಡಿ ಶಾಕ್ ನೀಡಿರುವ ಘಟನೆ ಯಲಹಂಕದ ಸುರಭಿ ಲೇಔಟ್ ನಲ್ಲಿ ನಡೆದಿದೆ.
ಬೆಂಗಳೂರು (ಜ.21): ಬೆಳ್ಳಂಬೆಳಿಗ್ಗೆ ಪೊಲೀಸರಿಗೆ ವ್ಯಕ್ತಿಯೊಬ್ಬ ಕರೆ ಮಾಡಿ ಶಾಕ್ ನೀಡಿರುವ ಘಟನೆ ಯಲಹಂಕದ ಸುರಭಿ ಲೇಔಟ್ ನಲ್ಲಿ ನಡೆದಿದೆ.
"ಹೆಂಡತಿ ಮಗಳನ್ನು ರೇಪ್ ಮಾಡಿ, ಕೊಲೆ ಮಾಡಿದ್ದಾರೆ. ಬೇಗ ಬಂದು ಮೃತದೇಹ ತೆಗುದುಕೊಂಡು ಹೋಗಿ" ಎಂದು ರಾಮಕೃಷ್ಣ ಎಂಬುವವರು 108 ಮತ್ತು 100 ಕ್ಕೆ ಕರೆ ಮಾಡಿ ವಿಷ್ಯ ತಿಳಿಸಿದ್ದಾರೆ. ಕೂಡಲೇ ಸುರಭಿ ಲೇಔಟ್'ಗೆ ಗಾಬರಿಯಿಂದ ಯಲಹಂಕ ಪೊಲೀಸರು ತಂಡ ತಂಡವಾಗಿ ಧಾವಿಸಿದ್ದಾರೆ. ಅಲ್ಲಿ ಘಟನೆ ಬಗ್ಗೆ ಸ್ಥಳೀಯರನ್ನು ವಿಚಾರಿಸಿದ್ದಾರೆ. ಈ ವೇಳೆ ಕರೆ ಮಾಡಿದ್ದ ರಾಮಕೃಷ್ಣ ಪತ್ನಿ ಗಾಯತ್ರಿಯನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಆಗ ಪತಿಯ ಮಾತಿನಿಂದ ಕಂಗಾಲಾದ ಗಾಯತ್ರಿ "ಸರ್..ಹಾಗೇನು ಇಲ್ಲ, ನನ್ನ ಪತಿ ಮಾನಸಿಕ ಅಸ್ವಸ್ಥ. ಆಗಾಗ ಹೀಗೆ ಸುಳ್ಳು ಹೇಳಿಕೊಂಡು ಓಡಾಡುತ್ತಾರೆ" ಎಂದು ಗಾಯತ್ರಿ ಯಲಹಂಕ ಪೊಲೀಸರ ಕ್ಷಮೆ ಕೇಳಿದ್ದಾರೆ.
ಬೆಳ್ಳಂಬೆಳಿಗ್ಗೆ ಚಳ್ಳೆ ಹಣ್ಣು ತಿನ್ನಿಸಿದ ರಾಮಕೃಷ್ಣನ ಅವಾಂತರ ನೆನೆಯುತ್ತಾ ಪೊಲೀಸರು ಅಲ್ಲಿಂದ ಕಾಲ್ಕಿತ್ತಿದ್ದಾರೆ.