ಎಚ್.ಡಿ.ರೇವಣ್ಣ, ಸಿಎಂ ಎಚ್ಡಿಕೆಗೆ ಕೇಂದ್ರ ಸಚಿವ ಗಡ್ಕರಿ ಭರವಸೆ
ಮುಖ್ಗಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದು, ಶೀಘ್ರದಲ್ಲೇ ಮೇಕೆದಾಟು ಸಂಬಂಧ ಸಭೆ ಕರೆಯುವುದಾಗಿ ಹೇಳಿದ್ದಾರೆ.
ನವದೆಹಲಿ : ಮೇಕೆದಾಟು ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳ ಸಭೆ ಕರೆಯಲು ಕೇಂದ್ರ ಭೂಸಾರಿಗೆ, ಹೆದ್ದಾರಿ ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರು ಒಪ್ಪಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ಮೇಕೆದಾಟು, ಮಹದಾಯಿ ಮತ್ತು ವಿವಿಧ ಹೆದ್ದಾರಿ ಕಾಮಗಾರಿಗಳ ಬಗ್ಗೆ ಗಡ್ಕರಿ ಅವರನ್ನು ಬುಧವಾರ ಭೇಟಿಯಾಗಿ ಮನವಿ ಮಾಡಿಕೊಂಡ ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ನೇತೃತ್ವದ ನಿಯೋಗಕ್ಕೆ ಗಡ್ಕರಿ ಅವರು ಈ ಭರವಸೆ ನೀಡಿದ್ದಾರೆ.
ಸಭೆ ನಡೆಯುತ್ತಿದ್ದಂತೆಯೇ ತಮ್ಮ ಕಾರ್ಯದರ್ಶಿಯೊಬ್ಬರನ್ನು ಕರೆದು ಆದಷ್ಟುಬೇಗ ಮೇಕೆದಾಟು ಯೋಜನೆ ಬಗ್ಗೆ ಸಭೆ ಕರೆಯಬೇಕು, ತಮಿಳುನಾಡಿನ ಮುಖ್ಯಮಂತ್ರಿಗಳಿಗೂ ವಿಷಯ ತಿಳಿಸಿ ದಿನಾಂಕ ನಿಗದಿಪಡಿಸುವಂತೆ ಗಡ್ಕರಿ ಸೂಚಿಸಿದ್ದಾರೆ ಎಂದು ಸಭೆಯಲ್ಲಿ ಭಾಗಿಯಾಗಿದ್ದ ಸರ್ಕಾರದ ಹಿರಿಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.
ಮೇಕೆದಾಟು ಯೋಜನೆಯಿಂದ ಕರ್ನಾಟಕ ಮತ್ತು ತಮಿಳುನಾಡಿಗೆ ಲಾಭವಾಗಲಿದೆ. ತಮಿಳುನಾಡಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂಬ ಅಂಶದ ಬಗ್ಗೆ ಗಡ್ಕರಿ ಅವರಿಗೆ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲು ಗಡ್ಕರಿ ಒಪ್ಪಿರುವುದಾಗಿ ತಿಳಿದು ಬಂದಿದೆ.
ಮಹದಾಯಿ ನದಿ ವಿವಾದಕ್ಕೆ ಸಂಬಂಧಿಸಿ ಪ್ರಕರಣ ಇನ್ನೂ ಇತ್ಯರ್ಥಗೊಂಡಿಲ್ಲ. ಮಹದಾಯಿ ನ್ಯಾಯಾಧಿಕರಣದ ಅಂತಿಮ ಐ ತೀರ್ಪನ್ನು ಪ್ರಶ್ನಿಸಿ ಕೊಳ್ಳದ ರಾಜ್ಯಗಳು ನ್ಯಾಯಾಧಿಕರಣದಲ್ಲಿ ಸ್ಪಷ್ಟೀಕರಣ ಅರ್ಜಿ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿವೆ. ಆದ್ದರಿಂದ ನ್ಯಾಯಾಧಿಕರಣದ ಅಂತಿಮ ಐ ತೀರ್ಪಿನ ಅಧಿಸೂಚನೆ ಹೊರಡಿಸಲು ಈಗ ಸಾಧ್ಯವಿಲ್ಲ ಎಂದು ಗಡ್ಕರಿ ರಾಜ್ಯಕ್ಕೆ ತಿಳಿಸಿದ್ದಾರೆ.
ಇಂದು ಪ್ರಧಾನಿ ಭೇಟಿ?: ಗುರುವಾರವೂ ದೆಹಲಿಯಲ್ಲೇ ಉಳಿಯಲಿರುವ ಕುಮಾರಸ್ವಾಮಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಬರ ಪರಿಹಾರದ ಬಗ್ಗೆ ಚರ್ಚಿಸುವ ಇರಾದೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ಪ್ರಧಾನಿ ಕಚೇರಿಯಿಂದ ಸಮಯಾವಕಾಶ ಇನ್ನೂ ನಿಕ್ಕಿಯಾಗಿಲ್ಲ. ಆದರೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿ ಬರ ಪರಿಹಾರ ನೀಡುವಂತೆ ಕುಮಾರಸ್ವಾಮಿ ಮನವಿ ಮಾಡಿಕೊಳ್ಳಲಿದ್ದಾರೆ. ರೈಲ್ವೆ ಸಚಿವ ಪೀಯೂಷ್ ಗೋಯೆಲ… ಅವರಲ್ಲಿ ರಾಜ್ಯದ ವಿವಿಧ ರೈಲ್ವೆ ಕಾಮಗಾರಿಗಳು ಮತ್ತು ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಯಾಗಿ ರಾಜ್ಯದ ವಿಮಾನ ನಿಲ್ದಾಣಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದಾರೆ.
ಉತ್ತರ ಪ್ರದೇಶದ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಸಿದ್ಧಾರ್ಥ ನಾಥ್ ಸಿಂಗ್ ಅವರು ಕುಮಾರಸ್ವಾಮಿ ಅವರನ್ನು ಕರ್ನಾಟಕ ಭವನದಲ್ಲಿ ಭೇಟಿಯಾಗಲಿದ್ದಾರೆ.
ರಾಹುಲ್ ಕರೆದರೆ ಭೇಟಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ದೆಹಲಿಗೆ ಒಂದೇ ವಿಮಾನದಲ್ಲಿ ಬಂದಿದ್ದಾರೆ. ಒಂದು ವೇಳೆ ಗುರುವಾರ ಕುಮಾರಸ್ವಾಮಿ ಅವರನ್ನು ರಾಹುಲ್ ಗಾಂಧಿ ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದರೆ ಮಾತ್ರ ರಾಹುಲ್ ಕುಮಾರಸ್ವಾಮಿ ಭೇಟಿ ನಡೆಯಲಿದೆ ಎಂದು ಕುಮಾರಸ್ವಾಮಿ ಆಪ್ತರು ಹೇಳಿದ್ದಾರೆ.