ಕಾವೇರಿ ಅಣೆಕಟ್ಟು : ಮತ್ತೆ ತಮಿಳುನಾಡಿನಿಂದ ಖ್ಯಾತೆ
ಕಾವೇರಿ ನದಿಗೆ ಮತ್ತೊಂದು ಅಣೆಕಟ್ಟು ನಿರ್ಮಾಣ ಮಾಡುವ ಸಂಬಂಧ ಇದೀಗ ಮತ್ತೆ ತಮಿಳುನಾಡು ತನ್ನ ಖ್ಯಾತೆ ತೆಗೆದಿದೆ. ಮತ್ತೊಮ್ಮೆ ಸುಪ್ರೀಂಕೋರ್ಟ್ ಬಾಗಿಲು ಬಡಿದಿದೆ.
ನವದೆಹಲಿ: ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಾಣ ಮಾಡಲು ಉದ್ದೇಶಿಸಿರುವ ಮೇಕೆದಾಟು ಜಲಾಶಯ ಯೋಜನೆಯನ್ನು ಶತಾಯಗತಾಯ ತಡೆಯಲೇಬೇಕು ಎಂದು ನಿರ್ಧರಿಸಿರುವ ತಮಿಳುನಾಡು ಈ ಸಂಬಂಧ ಸುಪ್ರೀಂಕೋರ್ಟಿಗೆ ಮೂರನೇ ಅರ್ಜಿಯನ್ನು ಸಲ್ಲಿಕೆ ಮಾಡಿದೆ.
ಯೋಜನೆಗೆ ತಡೆ ನೀಡಬೇಕು, ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆ ನಡೆಸಬೇಕು ಎಂದು ಈ ಹಿಂದೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದ ತಮಿಳುನಾಡು ಇದೀಗ ಮೇಕೆದಾಟು ಯೋಜನೆ ಕುರಿತು ವಿಸೃತ ಯೋಜನಾ ವರದಿ ತಯಾರಿಸಲು ಅನುಮತಿ ನೀಡಿದ ಕೇಂದ್ರೀಯ ಜಲ ಆಯೋಗದ ಅಧ್ಯಕ್ಷ ಮಸೂದ್ ಹುಸೇನ್ ಅವರನ್ನು ಕಾವೇರಿ ನಿರ್ವಹಣ ಪ್ರಾಧಿಕಾರದಿಂದ ಕಿತ್ತೊಗೆಯಬೇಕು ಎಂದು ಕೋರಿಕೆ ಇಟ್ಟಿದೆ.
ಹುಸೇನ್ ಅವರು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಿಕೊಂಡಿದ್ದಾರೆ. ಅವರನ್ನು ಬದಲಿಸಿ ಸ್ವತಂತ್ರ ವ್ಯಕ್ತಿಯನ್ನು ನೇಮಕ ಮಾಡುವಂತೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಸಿದೆ.
ಎರಡು ದಿನಗಳ ಹಿಂದಷ್ಟೇ ಮೇಕೆದಾಟು ಕುರಿತು ಒಂದು ದಿನದ ಅವೇಶನವನ್ನು ತಮಿಳುನಾಡು ನಡೆಸಿತ್ತು. ಅಲ್ಲಿ ಮೇಕೆದಾಟು ಯೋಜನಾ ವರದಿ ತಯಾರಿಗೆ ಅನುಮತಿ ಕೊಟ್ಟ ಹುಸೇನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.