ಅಕ್ರಮ ಸಂಬಂಧ ತೀರ್ಪು: ಸುಪ್ರೀಂ ಜಡ್ಜ್ ತೀರ್ಪಿಗೆ ಸವಾಲು ಹಾಕಿದ ಹಿಂಜಾವೇ ಮುಖಂಡ
ಇದೊಂದು ನ್ಯಾಯಾಂಗ ನಿಂದನೆ ಆಗಿದೆಯೇ ಎಂಬ ಪ್ರಶ್ನೆ ಮೂಡಿದೆ. ಸುಪ್ರೀಂ ಕೋರ್ಟ್ ನೀಡಿದ ಇತ್ತೀಚಿನ ಕೆಲ ತೀರ್ಪುಗಳ ಕುರಿತಾಗಿ ಹಿಂದೂ ಜಾಗರಣ ವೇದಿಕೆ ಮುಖಂಡರೊಬ್ಬರು ಮಾತನಾಡಿದ್ದಾರೆ.
ಮಂಗಳೂರು[ನ.20] ಹಿಂದು ಜಾಗರಣ ವೇದಿಕೆ ಮುಖಂಡರೊಬ್ಬರಿಂದ ನ್ಯಾಯಾಂಗ ನಿಂದನೆ ಆಗಿದೆಯೇ ಎಂಬ ಮಾತು ವ್ಯಕ್ತವಾಗಿದೆ. ಮಂಗಳೂರಿನಲ್ಲಿ ಮಾತನಾಡುತ್ತ ಹಿಂಜಾವೆ ಮುಖಂಡರೊಬ್ಬರು ವಿವಾದ ಎಬ್ಬಿಸುವ ಹೇಳಿಕೆ ನೀಡಿದ್ದಾರೆ.
ಅಕ್ರಮ ಸಂಬಂಧ ಕಾನೂನು ಬಾಹಿರವಲ್ಲ ಅಂತಾ ತೀರ್ಪು ನೀಡಿದ್ದಾರೆ ತೀರ್ಪು ಕೊಟ್ಟ ನ್ಯಾಯಾಧೀಶನ ತಲೆ ಸರಿ ಇಲ್ವಾ? ಅವನ ಹೆಂಡತಿಯನ್ನು ಯಾರ ಜೊತೆ ಬೇಕಾದ್ರು ಕಳುಹಿಸುತ್ತಾನಾ? ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.
ಹಿಂದು ಜಾಗರಣಾ ವೇದಿಕೆ ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಾಂತಾಯ ಈ ರೀತಿ ಹೇಳಿದ್ದು, ಶಬರಿಮಲೆ ಉಳಿಸಿ ಪ್ರತಿಭಟನೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿದ್ದ ಪ್ರತಿಭಟನೆ ವೇಳೆ ಉಗ್ರ ಭಾಷಣ ಮಾಡಿದ್ದಾರೆ. ಕೇರಳದಲ್ಲಿ ಹಿಂದು ದೇವಾಲಯಗಳನ್ನು ಅಪವಿತ್ರಗೊಳಿಸಲು ಸುಪ್ರೀಂ ತೀರ್ಪುನ್ನು ಹಿಡಿದುಕೊಂಡಿದ್ದಾರೆ. ಹಿಂದುಗಳಿಗೆ ಸುಪ್ರೀಂ ಕೋರ್ಟ್ ಸುಪ್ರೀಂ ಅಲ್ಲ, ಧರ್ಮ ಸುಪ್ರೀಂ. ದೇವರಿಗೆ ಪೂಜೆ ಹೇಗಿರಬೇಕು ಅನ್ನೊದು ತಂತ್ರಿಗಳು ನಿರ್ಧರಿಸೋದು, ನ್ಯಾಯಾಧೀಶರಲ್ಲ ಎಂದು ವಾದಿಸಿದ್ದಾರೆ.
ಕೋರ್ಟ್ ಗಳು ಇಂತವರಿಗೆ ಬೆಂಬಲ ನೀಡುತ್ತಾ ಬಂದಿದೆ. ಧರ್ಮದ ವಿಚಾರದಲ್ಲಿ ತಲೆ ಹಾಕುವ ಹಕ್ಕು ಕೋರ್ಟ್ ಗಿಲ್ಲ ಅಂತಾ ನಿವೃತ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ಹೇಳಿದ್ದಾರೆ. ಕೋರ್ಟ್ ತೀರ್ಪುಗಳು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿವೆ ಎಂದು ಆರೋಪಿಸಿದ್ದಾರೆ.