ಅನುರಾಗ್ ತಿವಾರಿ ಸಾವು; ಯಾವುದೇ ತನಿಖೆಗೆ ಸರ್ಕಾರ ಸಿದ್ಧ
ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅನುಮಾನಾಸ್ಪದ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಬಿಜೆಪಿ ಒತ್ತಾಯಿಸುತ್ತಿದ್ದು ಯಾವುದೇ ತನಿಖೆಗೆ ಸರ್ಕಾರ ಸಹಕಾರ ನೀಡಲಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಬೆಂಗಳೂರು (ಮೇ.19): ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅನುಮಾನಾಸ್ಪದ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಬಿಜೆಪಿ ಒತ್ತಾಯಿಸುತ್ತಿದ್ದು ಯಾವುದೇ ತನಿಖೆಗೆ ಸರ್ಕಾರ ಸಹಕಾರ ನೀಡಲಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಅನುರಾಗ್ ತಿವಾರಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದು ಆಹಾರ, ನಾಗರೀಕ ಸರಬರಾಜು ಇಲಾಖೆಯಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಮೇ.17 ರ ಮುಂಜಾನೆ ಲಕ್ನೋದ ಹಜರತ್’ಗಂಜ್’ನ ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.
ಅನುರಾಗ್ ತಿವಾರಿ ಕರ್ನಾಟಕದ ಐಎಎಸ್ ಅಧಿಕಾರಿ. ಲಕ್ನೋದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕಾರಣಗಳೇನು ಎಂದು ತಿಳಿದಿಲ್ಲ. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಪೋಸ್ಸ್ ಮಾರ್ಟಂ ವರದಿ ಹೇಳುತ್ತದೆ. ಲಕ್ನೋ ಪೊಲೀಸರು ತನಿಖೆ ನಡೆಸಲಿ. ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಆಹಾರ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಅನುರಾಗ್ ತಿವಾರಿ ತನಿಖೆ ನಡೆಸುತ್ತಿದ್ದಾರೆಂದು ಅವರನ್ನು ಸಾಯಿಸಲಾಗಿದೆ ಎನ್ನುವ ಸಂಶಯವಿದೆಯಲ್ಲಾ ಎನ್ನುವ ಸುದ್ಧಿಗಾರರ ಪ್ರಶ್ನೆಗೆ, ಯಾರೋ ಹೇಳುತ್ತಾರೆಂದು ನೀವು ಹೀಗೆಲ್ಲಾ ಮಾತನಾಡಬೇಡಿ. ಪೊಲೀಸರು ತನಿಖೆ ನಡೆಸಲಿ. ಬಳಿಕ ಸತ್ಯ ಗೊತ್ತಾಗುತ್ತದೆ ಎಂದು ಸಿಎಂ ಹೇಳಿದರು.
ಆಹಾರ ಇಲಾಖೆಯಲ್ಲಿ ನಡೆಯುತ್ತಿದ್ದ 2 ಸಾವಿರ ಕೋಟಿ ಅಕ್ರಮವನ್ನು ಬಯಲಿಗೆಳೆಯಲು ತಿವಾರಿ ರೆಡಿಯಾಗಿದ್ದರು. ಹಾಗಾಗಿ ಅವರನ್ನು ಹತ್ಯೆ ಮಾಡಿದ್ದಾರೆ.ಮುಖ್ಯಮಂತ್ರಿಯವರೇ ಅವರ ಸಾವಿಗೆ ನೇರ ಹೊಣೆ ಹೊರಬೇಕು. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ತಿವಾರಿಯವರ ತಮ್ಮ ಮಯಾಂಕ್ ಒತ್ತಾಯಿಸಿದ್ದಾರೆ.