ರಮೇಶ್ ಜಾರಕಿಹೊಳಿ ಜತೆ ಬಿಜೆಪಿ ಅಗ್ರ ನಾಯಕರ ಗುಪ್ತ್-ಗುಪ್ತ್ ಮೀಟಿಂಗ್
ಕಾಂಗ್ರೆಸ್ ನಿಂದ ಒಂದು ಕಾಲು ಹೊರಗೆ ಇಟ್ಟಿರುವ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಜತೆ ಬಿಜೆಪಿಯ ಅಗ್ರ ನಾಯಕರು ಗುಪ್ತ್-ಗುಪ್ತ್ ಮೀಟಿಂಗ್ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಬೆಂಗಳೂರು, [ಮೇ.14]: ಕಾಂಗ್ರೆಸ್ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿಯವರನ್ನು ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಭೇಟಿ ಮಾಡಿದ್ದಾರೆ.
ಬೆಂಗಳೂರಿನ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ ನಿವಾಸದಲ್ಲಿ ಇಂದು [ಮಂಗಳವಾರ] ಯೋಗೇಶ್ವರ್, ರಮೇಶ್ ಜಾರಕಿಹೊಳಿಯವರನ್ನು ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ಚರ್ಚಿಸಿದ್ದು ತೀವ್ರ ಕುತೂಹಲ ಮೂಡಿಸಿದೆ.
ಅಷ್ಟೇ ಅಲ್ಲದೇ ಸಿ.ಪಿ. ಯೋಗೇಶ್ವರ್ ಭೇಟಿಯ ಬಳಿಕ ನೆಲಮಂಗಲ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ನಾಗರಾಜು ಕೂಡ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ಫಲಿತಾಂಶದ ವೇಳೆಗೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದೇ ವೇಳೆ ರಮೇಶ್ ಜಾರಕಿಹೊಳಿ ಮತ್ತು ಬಿಜೆಪಿ ನಾಯಕರು ಭೇಟಿ ಮಾಡಿರುವುದು ಹಲವು ರಾಜಕೀಯ ಆಯಾಮಗಳಿಗೆ ಎಡೆಮಾಡಿಕೊಟ್ಟಿದೆ.
ಇನ್ನೊಂದು ಪ್ರಮುಖ ಅಂಶ ಅಂದ್ರೆ ರಾಜ್ಯ ಬಜೆಟ್ ಅಧಿವೇಶನ ಸಮಯದಲ್ಲಿ ಪಕ್ಷದ ವಿರುದ್ಧ ತೊಡೆ ತಟ್ಟಿ ಮುಂಬೈನ ಹೋಟೆಲ್ ನಲ್ಲಿ ಠಿಕಾಣಿ ಹೂಡಿದ್ದ ರಮೇಶ್ ಜಾರಕಿಹೊಳಿ ಹಾಗೂ ಟೀಮ್ ಜತೆ ಇದೆ ಸಿ.ಪಿ.ಯೋಗೇಶ್ವರ್ ಇದ್ದರು. ಈ ಹಿನ್ನೆಲೆಯಲ್ಲಿ ಯೊಗೇಶ್ವರ್ ಆಪರೇಷನ್ ಕಮಲದ ಕಿಂಗ್ ಪಿನ್ ಎನ್ನಲಾಗಿತ್ತು.
ಇದೀಗ ಮತ್ತೆ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿರುವುದು ನೋಡಿದ್ರೆ ಮತ್ತೊಮ್ಮೆ ಆಪರೇಷನ್ ಕಮಲ ಮುನ್ನೆಲೆಗೆ ಬಂತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.