ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ದೇವೇಗೌಡರಿಂದ ಭರ್ಜರಿ ದಸರಾ ಗಿಫ್ಟ್
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರಿಗೆ ಆಯುಧಪೂಜೆಗೂ ಮುನ್ನಾದಿನ ಪಕ್ಷದ ವತಿಯಿಂದ ಹೊಸ ಗಿಫ್ಟ್ ಒಂದು ಜೆಡಿಎಸ್ ಕಡೆಯಿಂದ ದೊರಕಿದೆ.
ಬೆಂಗಳೂರು : ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರಿಗೆ ಆಯುಧಪೂಜೆಗೂ ಮುನ್ನಾದಿನ ಪಕ್ಷದ ವತಿಯಿಂದ ಹೊಸ ಕಾರು ದೊರೆತಿದೆ.
ಪಕ್ಷದ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ವಿಶ್ವನಾಥ್ ಅವರಿಗೆ ಇನ್ನೋವಾ ಕ್ರಿಸ್ಟಾಕಾರು ನೀಡಲಾಗಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪಕ್ಷದ ಕಚೇರಿಯಲ್ಲಿ ಕಾರಿಗೆ ಪೂಜೆ ಸಲ್ಲಿಸಿದರು. ಆದರೆ, ಪೂಜೆಗೆ ವಿಶ್ವನಾಥ್ ಗೈರಾಗಿದ್ದರು. ದೇವೇಗೌಡರು ಕಾರಿನ ಕೀಗಳನ್ನು ಪಕ್ಷದ ಕಚೇರಿಯಲ್ಲಿಟ್ಟಿದ್ದಾರೆ.
ರಾಜ್ಯಾಧ್ಯಕ್ಷರಿಗೆ ಹೊಸ ಕಾರು ಖರೀದಿಸುವ ಬಗ್ಗೆ ಈ ಹಿಂದೆ ದೇವೇಗೌಡರೇ ಪ್ರಸ್ತಾಪಿಸಿದ್ದರು. ಮೊದಲಿಗೆ ಟೊಯೋಟಾ ಫಾರ್ಚೂನರ್ ಕಾರ್ ನೀಡುವ ಬಗ್ಗೆ ದೇವೇಗೌಡ ಇಚ್ಛಿಸಿದ್ದರು. ಇದಕ್ಕಾಗಿ ಶಾಸಕರು ಕೈಲಾದಷ್ಟುಆರ್ಥಿಕ ನೆರವು ನೀಡುವಂತೆಯೂ ಮನವಿ ಮಾಡಿದ್ದರು. ಆದರೆ ಆ ಕಾರಿನ ಬೆಲೆ ಹೆಚ್ಚಿರುವುದರಿಂದ ವಿಶ್ವನಾಥ್ ತಮಗೆ ಇನ್ನೋವಾ ಕ್ರಿಸ್ಟಾಸಾಕು ಎಂದಿದ್ದರು. ಅದರಂತೆ ಕ್ರಿಸ್ಟಾಕಾರ್ ನೀಡಲಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಿಗೆ ಪಕ್ಷದ ವತಿಯಿಂದ ಕಾರು ಕೊಡಲಾಗುತ್ತದೆ. ಆದರೆ ಜೆಡಿಎಸ್ನಿಂದ ನೀಡುತ್ತಿರಲಿಲ್ಲ. ನಮ್ಮ ಪಕ್ಷದಲ್ಲೂ ರಾಜ್ಯಾಧ್ಯಕ್ಷರಿಗೆ ಕಾರು ನೀಡಬೇಕು ಎಂದು ದೇವೇಗೌಡ ಅವರು ಹಲವು ಬಾರಿ ಹೇಳಿದ್ದರು. ಈಗ ಅವರ ಆಸೆ ಈಡೇರಿದೆ.