ಕಳ್ಳತನವಾಗಿ ವಿದೇಶ ಸೇರಿದ್ದ ಪಾಂಡ್ಯರ ಕಾಲದ ನಟರಾಜ ಮತ್ತೆ ತವರಿಗೆ
1982ರಲ್ಲಿ ಕಳ್ಳತನವಾಗಿದ್ದ ವಿಗ್ರಹ ಮತ್ತೆ ಸ್ವದೇಶಕ್ಕೆ/ ಭಾರತದಿಂದ ಆಸ್ಟ್ರೇಲಿಯಾ ಸೇರಿದ್ದ ಪುರಾತನ ವಿಗ್ರಹ/ 37 ವರ್ಷಗಳ ನಂತರ ಮತ್ತೆ ತಮಿಳುನಾಡಿಗೆ
ಚೆನ್ನೈ[ಸೆ. 15] ತಮಿಳುನಾಡಿನ ದೇವಾಲಯದಿಂದ ಕಳ್ಳತನವಾಗಿ ಆಸ್ಟ್ರೇಲಿಯಾ ಸೇರಿದ್ದ ನಟರಾಜನ ಪಂಚಲೋಹದ ವಿಗ್ರಹವೊಂದು ಬರೋಬ್ಬರಿ 37 ವರ್ಷಗಳ ನಂತರ ತಾಯ್ನಾಡಿಗೆ ಮರಳಲಿದೆ. ಪಾಂಡ್ಯರ ಕಾಲಕ್ಕೆ ಸೇರಿದ್ದ 700 ವರ್ಷ ಹಳೆಯ ವಿಗ್ರಹ ಶುಕ್ರವಾರ ತಮಿಳುನಾಡಿಗೆ ಬರಲಿದೆ.
ಕಳೆದ 19 ವರ್ಷಗಳಿಂದ ವಿಗ್ರಹ ಅಡಿಲೇಡ್ ನ ಪ್ರೆಸ್ಟಿಜೀಯಸ್ ಆರ್ಟ್ ಗ್ಯಾಲರಿಯಲ್ಲಿ ಇತ್ತು. ತಿರನಲ್ವೆಲ್ಲಿಯ ಕಲ್ಲಿಡೈಕುರುಚ್ಚಿ ಕುಲಸೇಖರ್ ಮುಡೆಯಾರ್ ಅರಮ್ ವಲರ್ತ್ ನಾಯಗಿ ದೇವಾಲಯದಿಂದ 1982ರಲ್ಲಿ ಕಳ್ಳತನ ಮಾಡಲಾಗಿತ್ತು. ನಟರಾಜನ ವಿಗ್ರಹದ ಜತೆ ಮತ್ತೆರಡು ವಿಗ್ರಹ ಕಳ್ಳತನ ಮಾಡಲಾಗಿತ್ತು. ಯಾವುದೆ ಮಾಹಿತಿ ಸಿಗದ ಕಾರಣ 1984ರಲ್ಲಿ ಪೊಲೀಸರು ಪ್ರಕರಣಕ್ಕೆ ತಿಲಾಂಜಲಿ ಹೇಳಿದ್ದರು.
ಮೈಸೂರು: 150 ವರ್ಷಗಳ ಹಿಂದಿನ ಬೃಹತ್ ನಂದಿ ವಿಗ್ರಹ ಪತ್ತೆ, ಗ್ರಾಮಸ್ಥರ ಮಾದರಿ ಕೆಲಸ
ಐಜಿಪಿ ಪೋನ್ ಮಣಿಕಾವೇಲ್ ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದ್ದ ಮದ್ರಾಸ್ ಹೈಕೋರ್ಟ್ ವಿಗ್ರಹವನ್ನು ಸ್ವದೇಶಕ್ಕೆ ತರುವಂತೆ ಮಾಡಿತು.
ಎಜಿಎಸ್ಎದ ಕ್ಯುರೆಟರ್ ಜಾನ್ ರಾಬಿನ್ ಸನ್ ಭಾರತಕ್ಕೆ ವಿಗ್ರಹ ಮರಳಿ ತಂದಿದ್ದು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳ ಕೈಗೆ ನೀಡಿದ್ದಾರೆ. ವಿಮಾನ ಪ್ರಯಾಣ ವೆಚ್ಚವನ್ನು ಸಹ ಜಾನ್ ರಾಬಿನ್ ಸನ್ ಅವರೇ ಭರಿಸಿಕೊಂಡಿದ್ದಾರೆ.
ನವದೆಹಲಿಯಿಂದ ಚೆನ್ನೈಗೆ ರೈಲ್ವೆ ಮುಖಾಂತರ ವಿಗ್ರಹ ಬರಲಿದೆ. 2.5 ಅಡಿ ಎತ್ತರದ ನಟರಾಜ 100 ಕೆಜಿ ತೂಕವಿದ್ದು ವಾಪಸ್ ಬಂದ ನಂತರ ಪೂಜೆಗೆ ಮತ್ತೆ ಇಡಲಾಗುತ್ತದೆ.