ಸಿದ್ದರಾಮಯ್ಯ ಅಧಿಕಾರದ ದರ್ಪ 50 ದಿನ ಮಾತ್ರ
ಸಿದ್ದರಾಮಣ್ಣ ಇನ್ನು ಐವತ್ತೇ ದಿನ ನಿಮ್ಮ ಅಧಿಕಾರದ ದರ್ಪ, ಮುಂದಿನ ಸರ್ಕಾರ ರೈತರ ಸರ್ಕಾರ’ ಎಂದು ಗುಡುಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಸುಳ್ಳು ಲೆಕ್ಕಾಚಾರ ನೀಡಿ ಜನರನ್ನು ವಂಚಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು : ‘ಸಿದ್ದರಾಮಣ್ಣ ಇನ್ನು ಐವತ್ತೇ ದಿನ ನಿಮ್ಮ ಅಧಿಕಾರದ ದರ್ಪ, ಮುಂದಿನ ಸರ್ಕಾರ ರೈತರ ಸರ್ಕಾರ’ ಎಂದು ಗುಡುಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಸುಳ್ಳು ಲೆಕ್ಕಾಚಾರ ನೀಡಿ ಜನರನ್ನು ವಂಚಿಸುತ್ತಿದೆ ಎಂದು ಆರೋಪಿಸಿದ್ದಾರೆ.
ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಅರೇಮಲ್ಲೇನಹಳ್ಳಿಯಲ್ಲಿ ಭಾನುವಾರ ನಡೆದ ಜೆಡಿಎಸ್ ವಿಕಾಸಪರ್ವದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ವಾಗ್ದಾಳಿ ನಡೆಸಿದ ಅವರು, ಇದುವರೆಗೂ ರೈತರಿಗೆ ಸಿದ್ದರಾಮಯ್ಯ ಮಾಡಿರುವ ಮೋಸಗಳಿಗೆ ಜನರು ಸರಿಯಾದ ಬುದ್ಧಿ ಕಲಿಸಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರು.
ಸಾವಿರಾರು ಕೋಟಿ ಖರ್ಚು ಮಾಡಿ ರಾಜ್ಯದಲ್ಲಿ ನೀರಾವರಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಲಿಪ್ಸ್ಟಿಕ್, ಪೌಡರ್ ಹಚ್ಚಿಕೊಂಡ ಮಂತ್ರಿ ಪಾಟೀಲ್ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ ಜನರು ಕೆರೆಗಳಿಗೆ ನೀರಿಲ್ಲ, ಕುಡಿಯಲು ನೀರಿಲ್ಲ ಅಂತ ಪ್ರತಿದಿನ ಪ್ರತಿಭಟನೆ ಮಾಡುತ್ತಲೇ ಇದ್ದಾರೆ. 15 ಲಕ್ಷ ಮನೆಗಳನ್ನು ಕಟ್ಟಿಸಿಕೊಡಲಾಗಿದೆ ಎಂದು ಸರ್ಕಾರ ಸುಳ್ಳು ವರದಿ ನೀಡಿ ಜನರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.
ಮುಂಬರುವ ಜೆಡಿಎಸ್ ಸರ್ಕಾರದಲ್ಲಿ ಸುಮಾರು 25,000 ಕೋಟಿ ರು. ವೆಚ್ಚದ ಕೃಷಿ ನೀತಿಯನ್ನು ಜಾರಿಗೆ ತಂದು ರೈತರ ಸರ್ವತೋಮುಖ ಅಭಿವೃದ್ಧಿಗೆ ಕಂಕಣತೊಡುವುದಾಗಿ ಹೇಳಿದರು.