ದೀಪಾವಳಿ ಹಬ್ಬಕ್ಕೆ ಶುಭ ಸುದ್ದಿ: ಬಿಜೆಪಿ ಅಧ್ಯಕ್ಷರ ಹೇಳಿಕೆ
ರಾಜ್ಯ ಬಿಜೆಪಿ ಅಧ್ಯಕ್ಷರು ದೀಪಾವಳಿ ಹಬ್ಬಕ್ಕೆ ಶುಭ ಸುದ್ದಿಯೊಂದನ್ನು ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ರಾಮಮಂದಿರ ವಿಚಾರವಾಗಿ ಈ ಸುದ್ದಿ ಇರಲಿದೆ ಎಂದು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಮಹೇಂದ್ರನಾಥ್ ಪಾಂಡೆ ಹೇಳಿದ್ದಾರೆ.
ಲಖನೌ: ಅಯೋಧ್ಯೆ ಕುರಿತ ತೀರ್ಪು ವಿಳಂಬವಾದ ಬೆನ್ನಲ್ಲೇ, ರಾಮನ ಕುರಿತ ಮತ್ತೊಂದು ವಿಷಯವನ್ನು ಬಿಜೆಪಿ ತನ್ನ ದಾಳವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.
ಉತ್ತರಪ್ರದೇಶದಲ್ಲಿ ಅಯೋಧ್ಯೆ ಸಮೀಪವೇ ಹರಿಯುವ ಸರಯೂ ನದಿ ದಂಡೆಯಲ್ಲಿ 151 ಮೀಟರ್ ಎತ್ತರದ ರಾಮನ ವಿಗ್ರಹವನ್ನು ನಿರ್ಮಾಣ ಮಾಡುವ ಯೋಜನೆ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 4-5 ದಿನಗಳಲ್ಲಿಯೇ ಘೋಷಣೆ ಮಾಡುವ ಸಾಧ್ಯತೆ ಇದೆ. 336 ಕೋಟಿ ರು.ವೆಚ್ಚದ ಈ ಯೋಜನೆ, ರಾಮಮಂದಿರ ನಿರ್ಮಾಣ ವಿಳಂಬ ವಿಷಯವನ್ನು ಸ್ವಲ್ಪ ಮಟ್ಟಿಗೆ ತಣ್ಣಗೆ ಮಾಡಲಿದೆ ಎನ್ನಲಾಗಿದೆ.
ಈ ಸುದ್ದಿಗೆ ಪೂರಕವೆಂಬಂತೆ, ದೀಪಾವಳಿ ವೇಳೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಯೋಧ್ಯೆ ಕುರಿತು ಶುಭ ಸುದ್ದಿ ನೀಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಮಹೇಂದ್ರನಾಥ್ ಪಾಂಡೆ ಹೇಳಿದ್ದಾರೆ. ಆದಿತ್ಯನಾಥ್ ಅವರು ಬಹುದೊಡ್ಡ ಸಂತ. ಹೀಗಾಗಿ ಅವರೇ ಶುಭಸುದ್ದಿ ನೀಡಲಿದ್ದಾರೆ ಎಂದು ಪಾಂಡೆ ಹೇಳಿದ್ದಾರೆ.