ಹೈಕಮಾಂಡ್ ಹೇಳಿದ್ರೆ ಸಿಎಂ ಆಗಲು ನಾನು ಸಿದ್ಧ: ಪರಂ
ಅವಕಾಶ ಸಿಕ್ಕರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುತ್ತೇನೆ. ಕಾಂಗ್ರೆಸ್ ವರಿಷ್ಠರು ನನಗೆ ಮುಖ್ಯಮಂತ್ರಿ ಆಗುವಂತೆ ಸೂಚನೆ ನೀಡಿದರೆ ನಾನು ಅದನ್ನು ಸ್ವಾಗತಿಸುತ್ತೇನೆ- ಪರಮೇಶ್ವರ್
ಬೆಳಗಾವಿ[ನ.18]: ಹಿಂದೆ ಹಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿ ಆಗುವ ಇಂಗಿತ ಹೊರಹಾಕಿದ್ದ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಇದೀಗ ಮತ್ತೊಮ್ಮೆ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ. ಅವಕಾಶ ಸಿಕ್ಕರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುವುದಾಗಿ ಅವರು ಹೇಳಿದ್ದಾರೆ. ಕಾಂಗ್ರೆಸ್ ವರಿಷ್ಠರು ನನಗೆ ಮುಖ್ಯಮಂತ್ರಿ ಆಗುವಂತೆ ಸೂಚನೆ ನೀಡಿದರೆ ನಾನು ಅದನ್ನು ಸ್ವಾಗತಿಸುತ್ತೇನೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಾಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಪರಮೇಶ್ವರ್ ಸಮರ್ಥರಿದ್ದಾರೆ. ಅವರ ಬಯಕೆಯಲ್ಲಿ ತಪ್ಪೇನಿದೆ ಎಂದಿದ್ದಾರೆ.
ನಾನು ರೆಡಿ:
ಶನಿವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳು ಯಾರೂ ಇಲ್ಲ. ಒಂದು ವೇಳೆ ಹೈಕಮಾಂಡ್ ನನಗೆ ಮುಖ್ಯಮಂತ್ರಿಯಾಗುವಂತೆ ತಿಳಿಸಿದರೆ ನಾನು ಸಿದ್ಧನಾಗಿದ್ದೇನೆ. ಈಗಾಗಲೇ ಹೈಕಮಾಂಡ್ ನನ್ನನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದೆ. ಈ ಹುದ್ದೆಯನ್ನು ಪ್ರಾಮಾಣಿಕತೆ ಹಾಗೂ ದಕ್ಷೆಯಿಂದ ನಿಭಾಯಿಸುತ್ತಿದ್ದೇನೆ. ಮುಂದೆ ಮುಖ್ಯಮಂತ್ರಿಯಾಗಲು ತಿಳಿಸಿದರೆ ನಿಭಾಯಿಸುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಚ್ಡಿಕೆ ಸಮರ್ಥನೆ: ಹೈಕಮಾಂಡ್ ಸೂಚಿಸಿದರೆ ಮುಖ್ಯಮಂತ್ರಿ ಆಗಲು ಸಿದ್ಧ ಎಂದಿರುವ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದು, ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಸಾಕಷ್ಟುಜನರು ಸಮರ್ಥರಿದ್ದಾರೆ. ಅದರಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೂಡ ಒಬ್ಬರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಅವಕಾಶವಿದ್ದಾಗ ತಾವೂ ಒಬ್ಬ ಅಪೇಕ್ಷಿತನೆಂದ ಡಾ.ಪರಮೇಶ್ವರ್ ಅವರ ಹೇಳಿಕೆಯಲ್ಲಿ ತಪ್ಪೇನಿಲ್ಲ. ಅದನ್ನು ಬೇರೆ ರೀತಿ ವ್ಯಾಖ್ಯಾನಿಸುವ ಅಗತ್ಯವೂ ಇಲ್ಲ. ಮುಖ್ಯಮಂತ್ರಿ ಸ್ಥಾನ ಶಾಶ್ವತವಲ್ಲ. ಸ್ವಾತಂತ್ರ್ಯ ಬಂದ ನಂತರ ಅದೆಷ್ಟೋ ಮುಖ್ಯಮಂತ್ರಿಗಳು ಬಂದು ಹೋದರು. ಮುಖ್ಯಮಂತ್ರಿಯಾಗಲು ಪರಮೇಶ್ವರ್ ಅವರು ಸಮರ್ಥರಿದ್ದಾರೆ ಎಂದಿದ್ದಾರೆ.