Asianet Suvarna News Asianet Suvarna News

’ಅಂಬ್ರೀಶಣ್ಣ ಬೈದ್ರು’ ಎಂದು ಖುಷಿ ಪಡುತ್ತಿದ್ದ ಅಭಿಮಾನಿಗಳು!

ತಮ್ಮದೇ ಆದ ಗತ್ತು, ಗೈರತ್ತುಗಳನ್ನು ಹೊಂದಿದ್ದ ಅಂಬರೀಶ್ ಮೇಲ್ನೋಟಕ್ಕೆ ಒರಟಾದರೂ ಮೃದು ಮನಸ್ಸು ಹೊಂದಿದ್ದರು. ಒರಟು ಭಾಷೆಯಿಂದಲೇ ಅಭಿಮಾನಿಗಳಿಗೆ ಪ್ರೀತಿಪಾತ್ರರಾಗಿದ್ದರು. ಅಂಬಿ ಬೈದಷ್ಟುಅಭಿಮಾನಿಗಳು ಮತ್ತಷ್ಟುಹತ್ತಿರವಾಗುತ್ತಿದ್ದರು. ನೆಚ್ಚಿನ ನಟ ಬೈದರೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತೋಷ. ಅಂಬ್ರೀಷಣ್ಣ ಬೈದ್ರು ಎಂದು ಬೇರೆಯವರ ಬಳಿ ಹೇಳಿಕೊಂಡು ಹೆಮ್ಮೆ ಪಡುತ್ತಿದ್ದರು.

Fans Loved Sandalwood Actor For His Rough Language
Author
Bangalore, First Published Nov 25, 2018, 8:29 AM IST

ಮಂಡ್ಯ[ನ.25]: ಅದು 1952ರ ಮೇ 29. ಅಂಬರೀಶ್ ಜನುಮ ದಿನ. ಮೈಸೂರಿನ ಚಾಮರಾಜಪುರಂನಲ್ಲಿ ನೆಲೆಸಿದ್ದ ಹುಚ್ಚೇಗೌಡ ಮತ್ತು ಪದ್ಮಮ್ಮ ದಂಪತಿ ವೈವಾಹಿಕ ಜೀವನದ ಅಂಗಳದಲ್ಲಿ ಅರಳಿದ ಏಳು ಪುಷ್ಪಗಳಲ್ಲಿ ಅಂಬರೀಷ್‌(ಅಮರನಾಥ್‌) ಒಬ್ಬರು.ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿರುವ ದೊಡ್ಡರಸಿನಕೆರೆ ಗ್ರಾಮದವರಾದ ತಂದೆ ಹುಚ್ಚೇಗೌಡ ಸಬ್‌ ರಿಜಿಸ್ಟ್ರಾರ್‌ ಆಗಿದ್ದವರು. ತಾಯಿ ಪದ್ಮಮ್ಮ ಮೈಸೂರಿನ ಹೆಸರಾಂತ ಪಿಟೀಲು ಮಾಂತ್ರಿಕ ಪಿಟೀಲು ಚೌಡಯ್ಯರ ಮಗಳು.

ಹುಚ್ಚೇಗೌಡ ಮತ್ತು ಪದ್ಮಮ್ಮ ದಂಪತಿಗೆ ಏಳು ಮಂದಿ ಮಕ್ಕಳಲ್ಲಿ ಅಂಬರೀಷ್‌ ಆರನೇ ಮಗುವಾಗಿ ಜನಿಸಿದರು. ಇವರಿಗೆ ಮೂವರು ಸಹೋದರರು ಮತ್ತು ಮೂವರು ಸಹೋದರಿಯರು. ಇಂತಹ ಸಂಪ್ರದಾಯಸ್ಥ ಕುಟುಂಬದಲ್ಲಿ ಅಂಬರೀಶ್ ಎಲ್ಲರ ಪ್ರೀತಿ ವಾತ್ಸಲ್ಯದಿಂದ ಬೆಳೆದವರು. ಜಾತಕದ ಪ್ರಕಾರ ಮೊದಲ ಹೆಸರು ಅಮರನಾಥ್‌. ಮನೆಯವರು ಪ್ರೀತಿಯಿಂದ ಅಂಬರೀಶ್ ಎಂದು ಕರೆಯುತ್ತಿದ್ದರು. ಶಾಲೆಗೆ ಅಂಬರೀಶ್ ಎಂಬ ಹೆಸರಿನಲ್ಲೇ ಸೇರಿಸಲಾಯಿತು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೈಸೂರಿನ ಲಕ್ಷ್ಮೀಪುರಂ ಸರ್ಕಾರಿ ಶಾಲೆಯಲ್ಲಿ ಮುಗಿಸಿ ಪ್ರೌಢ ವಿದ್ಯಾಭ್ಯಾಸವನ್ನು ಮೈಸೂರಿನ ಶಾರದಾ ವಿಲಾಸ್‌ನಲ್ಲಿ ಮಾಡಿದರು.

Fans Loved Sandalwood Actor For His Rough Language

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಅಂಬರೀಷ್‌, ಪಿಯುಸಿಯಲ್ಲಿ ವಿಜ್ಞಾನ ವಿಷಯದ ಬಗ್ಗೆ ವ್ಯಾಸಂಗಕ್ಕಾಗಿ ಶಾರದಾ ವಿಲಾಸ್‌ ಕಾಲೇಜಿಗೆ ಸೇರಿದರು. ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಅಂಬಿಗೆ ಸರಸ್ವತಿ ಒಲಿಯದಿದ್ದರೂ ಕಲಾದೇವಿ ತನ್ನ ತೋಳ್ತೆಕ್ಕೆಯಲ್ಲಿಟ್ಟು ಬೆಳೆಸಿದಳು. ಅಂಬರೀಶ್ರ ಜೀವನದಲ್ಲೂ ಯಾರೂ ಊಹಿಸದ ರೀತಿಯಲ್ಲಿ ಕೆಲ ತಿರುವುಗಳು ದೊರೆತು ಖ್ಯಾತ ಕಲಾವಿದರಾದರು.

18 -19ನೇ ವಯಸ್ಸಿನಲ್ಲಿ ಕನ್ನಡ ಚಿತ್ರರಂಗಕ್ಕೆ ಅಂಬರೀಶ್ ಅವರು ಪದಾರ್ಪಣೆ ಮಾಡಿದರು. 1970ರಲ್ಲಿ ಬಂಗಾರದ ಕಳ್ಳ ಚಿತ್ರದಲ್ಲಿ ಇನ್ಸ್‌ಪೆಕ್ಟರ್‌ ಪಾತ್ರದ ಮೂಲಕ ಅಂಬರೀಶ್ ಬೆಳ್ಳಿತೆರೆಗೆ ಕಾಲಿಟ್ಟರು. ಆದರೆ, ಕಾರಣಾಂತರದಿಂದ ಈ ಚಿತ್ರ ತಡವಾಗಿ ತೆರೆಕಂಡಿತ್ತು. ಮೊದಲಿಗೆ ತೆರೆಕಂಡ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ ನಿರ್ದೇಶನದ ನಾಗರಹಾವು ಚಿತ್ರ.

ಈ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಅಂಬರೀಶ್ ಆಯ್ಕೆಯಾದರೆ, ವಿಷ್ಣುವರ್ಧನ್‌ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು. ಅಂಬಿ ಮತ್ತು ವಿಷ್ಣು ಅಭಿನಯದ ಪ್ರಥಮ ಚಿತ್ರವೂ ಇದಾಗಿತ್ತು. ಜಲೀಲ್‌ನ ಪಾತ್ರದಲ್ಲಿ ಅಂಬರೀಶ್ ನಾಯಕಿಯನ್ನು ಬುಲ್‌ ಬುಲ್‌ ಮಾತಡಕಿಲ್ವಾ... ಎಂಬ ಡೈಲಾಗ್‌ನಿಂದ ಪ್ರೇಕ್ಷಕರ ಮನಗೆದ್ದಿದ್ದರು.

Fans Loved Sandalwood Actor For His Rough Language

ಮೊದಲ ಚಿತ್ರದಲ್ಲೇ ಅಂಬರೀಶ್ ತಮ್ಮ ಪಾಲಿಗೆ ಬಂದ ಪಾತ್ರಕ್ಕೆ ಜೀವ ತುಂಬಿದರು. ಈ ಚಿತ್ರದ ಯಶಸ್ಸಿನಿಂದ ಅವರ ಅದೃಷ್ಟ ತೆರೆದುಕೊಂಡಿತು. ಅವಕಾಶಗಳು ಹೆಚ್ಚು ಹೆಚ್ಚು ಅವರನ್ನು ಹುಡುಕಿಕೊಂಡು ಬರತೊಡಗಿದವು. ವಿಭಿನ್ನ ಪಾತ್ರಗಳಲ್ಲಿ ಅಂಬರೀಶ್ ಕಾಣಿಸಿಕೊಂಡು ಪ್ರೇಕ್ಷಕರ ಮನದಲ್ಲಿ ಉಳಿದರು.

ಅಂಬರೀಶ್ ಪಾಲಿಗೆ ಕಲೆಯೇ ಸರ್ವಸ್ವ , ಕಲೆಯೇ ಬದುಕು, ಕಲೆಯನ್ನು ಕಾಯಕವಾಗಿ ಆರಿಸಿಕೊಂಡು ಅಪಾರ ಪರಿಶ್ರಮದಿಂದ, ನಿರಂತರ ಸಾಧನೆಯಿಂದ ಕಲಾತಪಸ್ವಿ ಎನಿಸಿದವರು. ಸ್ವಾರ್ಥವಿರದ ಅವರ ತೆರದಿಟ್ಟ ಬದುಕಿನುದ್ದಕ್ಕೂ, ನಡೆದು ಬಂದ ದಾರಿ ಉದ್ದಕ್ಕೂ ತ್ಯಾಗದ ಹೆಜ್ಜೆ ಗುರುತುಗಳಿವೆ.

ನೂರಾರು ಕನ್ನಡ ಚಿತ್ರಗಳಲ್ಲಿ ನಟಿಸಿರುವ ರೆಬಲ್‌ಸ್ಟಾರ್‌ ಅಂಬರೀಶ್ಗೆ ಇದುವರೆಗೆ ಕನ್ನಡದಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಸಿಗಲಿಲ್ಲ. ಆದರೆ, ಮಲಯಾಳಂನಲ್ಲಿ ‘ಗಾನಂ’ ಚಿತ್ರಕ್ಕೆ ಅಂಬರೀಶ್ ಅವರಿಗೆ ಶ್ರೇಷ್ಠನಟ ಪ್ರಶಸ್ತಿ ಸಿಕ್ಕಿರುವುದು ವಿಶೇಷ. ಅದರಲ್ಲಿ ಸಂಗೀತ ವಿದ್ವಾಂಸನ ಪಾತ್ರದಲ್ಲಿ ಅಂಬರೀಷ್‌ ಕಾಣಿಸಿಕೊಂಡಿದ್ದರು.

ತಮ್ಮದೇ ಆದ ಗತ್ತು, ಗೈರತ್ತುಗಳನ್ನು ಹೊಂದಿದ್ದ ಅಂಬರೀಷ್‌ ಮೇಲ್ನೋಟಕ್ಕೆ ಒರಟಾದರೂ ಮೃದು ಮನಸ್ಸು ಹೊಂದಿದ್ದರು. ಒರಟು ಭಾಷೆಯಿಂದಲೇ ಅಭಿಮಾನಿಗಳಿಗೆ ಪ್ರೀತಿಪಾತ್ರರಾಗಿದ್ದರು. ಅಂಬಿ ಬೈದಷ್ಟುಅಭಿಮಾನಿಗಳು ಮತ್ತಷ್ಟುಹತ್ತಿರವಾಗುತ್ತಿದ್ದರು. ನೆಚ್ಚಿನ ನಟ ಬೈದರೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತೋಷ. ಅಂಬ್ರೀಶಣ್ಣ ಬೈದ್ರು ಎಂದು ಬೇರೆಯವರ ಬಳಿ ಹೇಳಿಕೊಂಡು ಹೆಮ್ಮೆ ಪಡುತ್ತಿದ್ದರು.

Fans Loved Sandalwood Actor For His Rough Language

ಮೈಸೂರು ಸಂಸ್ಥಾನದಲ್ಲಿ ವಿದ್ವಾಂಸರಾಗಿದ್ದ ಪಿಟೀಲು ಚೌಡಯ್ಯ ಅವರನ್ನು ಬಿಟ್ಟರೆ ಹುಚ್ಚೇಗೌಡರ ವಂಶದಲ್ಲಿ ಹೆಚ್ಚು ಕೀರ್ತಿ ಶಾಲಿಗಳಾದವರು ಅಂಬರೀಶ್ ಮಾತ್ರ. ಓದಿ ವಿದ್ಯಾವಂತರಾಗದಿದ್ದರೂ ತಮ್ಮ ಕಲಾಕೌಶಲದಿಂದ ಜನಪರ ಕಾಳಜಿಯಿಂದ ಅವರ ಮನೆತನಕ್ಕೆ ಅಪಾರ ಕೀರ್ತಿಯನ್ನು ತಂದರು.

ಸಿನಿಮಾರಂಗದಲ್ಲಿ ತಮ್ಮ ಕಲಾನೈಪುಣ್ಯದಿಂದ ಅತ್ಯಂತ ಪ್ರಭಾವಶಾಲಿಯಾಗಿ ಕರ್ನಾಟಕದ ಜನಮನದಲ್ಲಿ ನೆಲೆ ನಿಲ್ಲುವಂತಹ ಅಭಿನಯದಿಂದ ರೆಬಲ್‌ಸ್ಟಾರ್‌, ಕಲಿಯುಗ ಕರ್ಣ ಎಂದು ಅಭಿಮಾನಿಗಳಿಂದ ಅಭಿಧಾನ ಪಡೆದ ಅಂಬರೀಶ್ ಮಂಡ್ಯ ಜಿಲ್ಲೆಯ ಮಣ್ಣಿನ ಸೊಗಡಿನಲ್ಲಿ ಅರಳಿದ ಸುಗಂಧ ಪುಷ್ಪ.

Follow Us:
Download App:
  • android
  • ios