ಬೀಫ್ ತಿನ್ನಿ, ಕಿಸ್ ಮಾಡಿ ಆದರೆ ‘ಫೆಸ್ಟಿವಲ್’ಗಳೇಕೆ? ವೆಂಕಯ್ಯ ನಾಯ್ಡು ಪ್ರಶ್ನೆ
- ಆರ್.ಎ. ಪೊಡ್ಡರ್ ಕಾಲೇಜಿನ ಅಮೃತ ಮಹೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೆಂಕಯ್ಯ ನಾಯ್ಡು
- ಈ ಹಿಂದೆಯೂ ‘ಬೀಫ್’ ಬಗ್ಗೆ ಮಾತನಾಡಿದ್ದ ನಾಯ್ಡು, ಆಹಾರವು ವೈಯುಕ್ತಿಕ ಆಯ್ಕೆ ಎಂದಿದ್ದರು
ಮುಂಬೈ: ‘ಬೀಫ್ ಫೆಸ್ಟಿವಲ್’ಗಳಂತ ಆಚರಣೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಯಾರಾದರು ಗೋಮಾಂಸ ಸೇವಿಸಬಯಸಿದರೆ ಸೇವಿಸಲಿ, ಆದರೆ ಅದನ್ನು ಸಂಭ್ರಮಿಸುವ ಅಗತ್ಯವೇನಿದೆಯೆಂದು ಪ್ರಶ್ನಿಸಿದ್ದಾರೆ.
ಆರ್.ಎ. ಪೊಡ್ಡರ್ ಕಾಲೇಜಿನ ಅಮೃತ ಮಹೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೆಂಕಯ್ಯ ನಾಯ್ಡು, ಬೀಫ್ ತಿನ್ನಲು ಇಷ್ಟವಿದೆಯೇ? ತಿನ್ನಿ, ಆದರೆ ‘ಸಂಭ್ರಮಿಸುವ ಅಗತ್ಯವೇನಿದೆ? ಅದೇ ರೀತಿ, ಕಿಸ್ ಮಾಡಲು ‘ಕಿಸ್ ಫೆಸ್ಟಿವಲ್’ ಗಳಂಥ ಅಚರಣೆಗಳ ಅಗತ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ಜುಲೈಯಲ್ಲಿ ಐಐಟಿ ಮದ್ರಾಸ್’ನಲ್ಲಿ ವಿದ್ಯಾರ್ಥಿಗಳು ಬೀಫ್ ಫೆಸ್ಟಿವಲ್’ನ್ನು ಹಮ್ಮಿಕೊಂಡಿದ್ದರು.
ಅದೇ ರೀತಿ ಪಾರ್ಲಿಮೆಂಟ್ ಮೇಲಿನ ದಾಳಿ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೀಡಾದ ಅಫ್ಜಲ್ ಗುರುವಿನ ಸಾವಿನ ವಾರ್ಷಿಕಾಚರಣೆ ಮಾಡುವುದನ್ನು ಕೂಡಾ ನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಫೆ.9ರಂದು ಅಫ್ಜಲ್ ಗುರುವಿನ ಸ್ಮರಣಾರ್ಥ ಕಾಶ್ಮೀರ ಪ್ರತ್ಯೇಕವಾದಿಗಳು ಪ್ರತಿಭಟನೆ ನಡೆಸಲು ಕರೆಕೊಟ್ಟಿರುವುದನ್ನು ಸ್ಮರಿಸಬಹುದು.
ಈ ಹಿಂದೆಯೂ ‘ಬೀಫ್’ ಬಗ್ಗೆ ಮಾತನಾಡಿದ್ದ ನಾಯ್ಡು, ಆಹಾರವು ವೈಯುಕ್ತಿಕ ಆಯ್ಕೆ, ತಾನು ಸಸ್ಯಹಾರಿಯಾಗಿದ್ದು, ಆದರೆ ನಾನೇನು ತಿನ್ನಬೇಕು ಎಂದು ಯಾರು ನನಗೆ ಹೇಳಿಲ್ಲ, ಎಂದಿದ್ದರು.