ಅಂಬಿ-ಸುಮಲತಾ ಮದುವೆ ಸ್ವಾರಸ್ಯಕರ ಪ್ರಸಂಗ ಬಿಚ್ಚಿಟ್ಟ ಡಿಕೆಶಿ
ಅಂಬರೀಷ್ ಹಾಗೂ ಸುಮಲತಾ ಅವರ ವಿವಾಹದ ಬಗ್ಗೆ ಸಚಿವ ಡಿ.ಕೆ ಶಿವಕುಮಾರ್ ಅವರು ಸ್ವಾರಸ್ಯಕರ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
ಬೆಂಗಳೂರು : ಮದುವೆಯಾಗಲು ಹಿಂಜರಿಯುತ್ತಿದ್ದ ಅಂಬರೀಷ್ ಅವರನ್ನು ಮದುವೆಯಾಗಲು ಮಾಜಿ ಸಚಿವ ದಿವಂಗತ ಎಚ್.ಸಿ. ಶ್ರೀಕಂಠಯ್ಯ ಅವರು ಮನವೊಲಿಸಿದರಂತೆ. ಆದಿಚುಂಚನಗಿರಿ ಶ್ರೀಗಳ ಸೂಚನೆಯೂ ಇದೆ. ಇಡೀ ಸಮುದಾಯ ನೀನು ಸುಮಲತಾ ಅವರನ್ನು ಮದುವೆಯಾಗಬೇಕು ಎಂದು ಬಯಸುತ್ತಿದೆ ಎಂದು ಒತ್ತಡ ನಿರ್ಮಾಣ ಮಾಡಿದ್ದರಂತೆ.
ಇಂತಹದೊಂದು ಸ್ವಾರಸ್ಯಕರ ಘಟನೆಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಭಾನುವಾರ ಸ್ಮರಿಸಿದರು.
ಅಂಬರೀಷ್ ಅವರ ಪಾರ್ಥಿವ ಶರೀರ ಇಡಲಾಗಿದ್ದ ಕಂಠೀರವ ಕ್ರೀಡಾಂಗಣದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಕುಮಾರ್ ಅವರು, ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂಬರೀಷ್ ಹಾಗೂ ಸುಮಲತಾ ಮದುವೆಗೆ ನಡೆದ ರಾಜಿ-ಖಬೂಲಿಯಲ್ಲಿ ತಾವೂ ಬಾಗಿಯಾಗಿದ್ದನ್ನು ವಿವರಿಸಿದ್ದು ಹೀಗೆ.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಸಂಪುಟದಲ್ಲಿ ಸಚಿವನಾಗಿದ್ದ ಅವಧಿ. ಕಾರ್ಯಕ್ರಮವೊಂದರ ಪ್ರಯುಕ್ತ ಎಲ್ಲರು ಮಂಗಳೂರಿಗೆ ಹೊರಟಿದ್ದರು. ದಿವಂಗತ ಮಾಜಿ ಸಚಿವ ಎಚ್.ಸಿ. ಶ್ರೀಕಂಠಯ್ಯ ಅವರೊಂದಿಗೆ ಮಂಗಳೂರಿಗೆ ಸಚಿವನಾಗಿದ್ದರಿಂದ ನಾನು ಹೇಳಿ ಹೋಗಿದ್ದೆ. ಅಂದು ಸಾಯಂಕಾಲ ಶ್ರೀಕಂಠಯ್ಯ ಅವರು, ಅಂಬರೀಶ್, ಅಪ್ಪಾಜಿ ನಾಯಕರ್, ಶ್ರೀಪತಿರಾಯ ಸೇರಿ ನಾಲ್ಕೈದು ಜನ ಮಾತನಾಡುತ್ತಾ ಕುಳಿತಿದ್ದೆವು.
ಆಗ ಶ್ರೀಕಂಠಯ್ಯ ಅವರು ಅಂಬರೀಷ್ ಮದುವೆ ವಿಚಾರ ಪ್ರಸ್ತಾಪಿಸಿದರು. ನಿನಗೆ 39 ವರ್ಷ ವಯಸ್ಸಾಯ್ತು. ಯಾವಾಗ ಮದುವೆ ಆಗ್ತೀಯಾ ಹೇಳು ಎಂದು ಗದರಿಸುವ ಧ್ವನಿಯಲ್ಲಿಯೇ ಕೇಳಿದರು. ಯಾಕೆ ಆ ಹುಡುಗಿ (ಸುಮಾಲತಾ)ಯನ್ನು ಕಾಡಿಸ್ತೀಯಾ? ಆದಷ್ಟುಬೇಗ ಮದುವೆ ಆಗು ಎಂದು ಗದರಿಸಿದರು. ನಿನ್ನ ಮದುವೆ ವಿಚಾರ ಮಾತನಾಡೋಕೆ ಎಲ್ಲರನ್ನು ಇಲ್ಲಿಗೆ ಕರೆಸಿದ್ದೇನೆ. ಇವತ್ತು ಎರಡಲ್ಲಿ ಒಂದು ತೀರ್ಮಾನ ಆಗಬೇಕು. ಆದಿಚುಂಚನಗಿರಿ ಸ್ವಾಮಿಗಳು ಕೂಡ ಹೇಳಿದ್ದಾರೆ. ಆದ್ದರಿಂದ ನಾವೆಲ್ಲಾ ಇಲ್ಲಿ ಸೇರಿದ್ದೇವೆ ಎಂದು ಒತ್ತಾಯಿಸಿದರು.
ಶ್ರೀಕಂಠಯ್ಯ ಅವರ ಮಾತಿಗೆ ಒಪ್ಪಿಗೆ ಸೂಚಿಸಿದ ಅಂಬರೀಶ್ ‘ಆಯ್ತು ಅಣ್ಣಯ್ಯ ಮದುವೆ ಆಗ್ತೇನೆ’ ಎಂದು ಒಪ್ಪಿಗೆ ಸೂಚಿಸಿ ಒಂದು ವಾರದಲ್ಲಿ ಅಂತಿಮ ತೀರ್ಮಾನ ತಿಳಿಸುವುದಾಗಿ ಹೇಳಿದರು. ಅಂದು ನನಗೆ ಅಂಬರೀಶ್ ಅವರ ಬಳಿ ಜೋರು ಮಾಡಿ ಮಾತನಾಡುವ ಶಕ್ತಿ ಇರಲಿಲ್ಲ. ಆದರೆ ಶ್ರೀಕಂಠಯ್ಯನವರು ದೊಡ್ಡ ಜಗಳವನ್ನೇ ಮಾಡಿದ್ದರು. ತಮ್ಮ ಹಾಗೂ ಸುಮಲತಾ ಮದುವೆಗೆ ಇಡೀ ಸಮಾಜ ಬಯಸುತ್ತಿದೆ ಎಂಬುದನ್ನು ಅರಿತ ಅಂಬಿ ಮದುವೆಗೆ ಅಂತಿಮವಾಗಿ ಒಪ್ಪಿಗೆ ನೀಡಿದರು ಎಂದು ಶಿವಕುಮಾರ್ ವಿವರಿಸಿದರು.