ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕ : ಮುಂದುವರಿದ ಬಿಗಿಪಟ್ಟು
ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕರ ಮನವೊಲಿಸುವಲ್ಲಿ ಡಿ.ಕೆ. ಶಿವಕುಮಾರ್ ವಿಫಲವಾಗಿದೆ ಎನ್ನಲಾಗಿದ್ದು ಇದೀಗ ಎಂಟಿಬಿ ನಾಗರಾಜ್ ಮನವೊಲಿಸುವ ಹೊಣೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ
ಬೆಂಗಳೂರು: ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಮಾಧಾನಗೊಂಡ ಹೊಸಕೋಟೆ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್ ಶನಿವಾರ ತಡರಾತ್ರಿ ನಿವಾಸಕ್ಕೆ ವಾಪಸಾಗಿದ್ದು, ಸಚಿವ ಡಿ.ಕೆ. ಶಿವಕುಮಾರ್ ಎರಡು ಹಂತದಲ್ಲಿ ಮಾತುಕತೆ ನಡೆಸಿ ಮನವೊಲಿಸಲು ಪ್ರಯತ್ನಿಸಿದರೂ ಸಚಿವ ಸ್ಥಾನಕ್ಕಾಗಿ ಪಟ್ಟು ಮುಂದುವರೆಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಎಂಟಿಬಿ ನಾಗರಾಜ್ ಮನವೊಲಿಸುವ ಹೊಣೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ. ಸಮ್ಮಿಶ್ರ ಸರ್ಕಾರದ ಮೇಲಿನ ಅತೃಪ್ತಿಯಿಂದ ಚೆನ್ನೈನತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದ್ದ ಎಂಟಿಬಿ ನಾಗರಾಜ್ ಶನಿವಾರ ತಡರಾತ್ರಿ ನಿವಾಸಕ್ಕೆ ವಾಪಸಾಗಿದ್ದರು. ಇದರ ಬೆನ್ನಲ್ಲೇ ಭಾನುವಾರ ಸಚಿವ ಶಿವಕುಮಾರ್ ಅವರು ದೊಡ್ಡನೆಕ್ಕುಂದಿಯ ಅವರ ನಿವಾಸಕ್ಕೆ ತೆರಳಿ ಉಪಾಹಾರ ನೆಪದಲ್ಲಿ ಒಂದೂವರೆ ತಾಸು ಚರ್ಚೆ ನಡೆಸಿದರು. ಆದರೆ, ಈ ವೇಳೆ ಎಂಟಿಬಿ ನಾಗರಾಜ್ ಮನವೊಲಿಕೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ನಂತರ ಖುದ್ದು ಎಂಟಿಬಿ ನಾಗರಾಜ್ ಅವರೇ ಸಂಜೆ ವೇಳೆ ಕುಮಾರಕೃಪಾ ಅತಿಥಿಗೃಹಕ್ಕೆ ಆಗಮಿಸಿ ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಸಚಿವ ಶಿವಕುಮಾರ್, ಪಕ್ಷದಲ್ಲಿ ಕೆಲವೊಮ್ಮೆ ಅಧಿಕಾರ ಕಾಯಿಸುತ್ತದೆ. ನಾನು ಸಹ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಏಳು ತಿಂಗಳು ಅಧಿಕಾರ ವಂಚಿತನಾಗಿದ್ದೆ. ಆದ ಮಾತ್ರಕ್ಕೆ ಅಸಮಾಧಾನ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.