ಜ್ಞಾನೋದಯ ಆಗಿದೆ ಇನ್ನು ಜಗಳವಿಲ್ಲ : ಜಿ.ಟಿ.ದೇವೇಗೌಡ
ರಾಜ್ಯ ರಾಜಕೀಯದಲ್ಲಿ ವಾದ ಪ್ರತಿವಾದಗಳು ದಿನದಿನಕ್ಕೂ ಹೆಚ್ಚಾಗಿದ್ದು, ಸದ್ಯ ತಣ್ಣಗಾಗುವ ಲಕ್ಷಣ ಕಂದು ಬಂದಿದೆ.
ಶ್ರೀರಂಗಪಟ್ಟಣ : ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಹುದ್ದೆ ವಿಷಯವಾಗಿ ಮೈತ್ರಿ ಪಕ್ಷದ ಮುಖಂಡರೊಳಗೆ ನಡೆಯುತ್ತಿರುವ ಹೇಳಿಕೆ-ಪ್ರತಿಹೇಳಿಕೆಗಳ ಸಮರ ಇನ್ನು ಮುಂದುವರಿಯುವುದಿಲ್ಲ ಎಂದು ಸಚಿವ ಜಿ.ಡಿ.ದೇವೇಗೌಡ ತಿಳಿಸಿದ್ದಾರೆ. ಎರಡೂ ಪಕ್ಷಗಳ ನಾಯಕರಿಗೆ ಜ್ಞಾನೋದಯವಾಗಿದ್ದು ಇನ್ನು ಅವರಾರಯರೂ ಮಾತನಾಡುವುದಿಲ್ಲ. ಎಲ್ಲಾ ಹಿರಿಯರು ಈಗಾಗಲೇ ಕುಳಿತು ಮಾತನಾಡಿದ್ದಾರೆ. ನಾವೆಲ್ಲರು ಒಗ್ಗಾಟ್ಟಾಗಿದ್ದೇವೆ. ಈಗಾಗಲೇ ನಿರ್ಧರಿಸುವಂತೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಇನ್ನೂ ನಾಲ್ಕು ವರ್ಷಗಳ ಕಾಲ ಆಡಳಿತ ನಡೆಸಲಿದ್ದಾರೆ ಎನ್ನುವ ಮೂಲಕ ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ನಡುವೆ ನಡೆದ ವಾಕ್ಸಮರಕ್ಕೆ ತೆರೆ ಎಳೆದಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೀಗ ಒಂದೆ ತಟ್ಟೆಯಲ್ಲಿ ಊಟ ಮಾಡುವ ಸನ್ನಿವೇಶವಿದ್ದು ಸಣ್ಣ ಪುಟ್ಟತಪ್ಪುಗಳನ್ನು ಸರಿಪಡಿಸಿಕೊಂಡು ಹೋಗುವ ಬಗೆಗೆ ಮಾತನಾಡಿದ್ದಾರೆ ಎಂದು ತಿಳಿಸಿದರು. ರಾಜ್ಯ ಹಾಗೂ ಮಂಡ್ಯದಲ್ಲಿ ನಡೆಯುತ್ತಿರುವ ಎರಡೂ ಪಕ್ಷಗಳ ಮುಖಂಡರ ವಾಕ್ಸಮರ ಇಂದಿನಿಂದ ನಿಲ್ಲುತ್ತದೆ. ಮೈತ್ರಿ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಾಗಿರಲಿದ್ದಾರೆ. ಈ ವರ್ಷ ಮಳೆ, ಬೆಳೆ ಕೂಡ ಚೆನ್ನಾಗಿ ಆಗುತ್ತದೆ ಎಂದೂ ಭವಿಷ್ಯ ನುಡಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಬಿಜೆಪಿ ಪಕ್ಷದ ನಾಯಕರು ಸರ್ಕಾರ ಇವತ್ತು ಬೀಳುತ್ತೆ, ನಾಳೆ ಬಿಳುತ್ತೇ ಎಂದು ಹೇಳುತ್ತಾ ಬರುತ್ತಿದ್ದಾರೆ. ಆದರೆ ಕುಮಾರಸ್ವಾಮಿಯವರು ಈಗಾಗಲೇ ಒಂದು ವರ್ಷ ಉತ್ತಮ ಆಡಳಿತ ನಡೆಸಿದ್ದಾರೆ. ಇನ್ನೂ 4 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡುತ್ತಾರೆ ಭರವಸೆ ವ್ಯಕ್ತಪಡಿಸಿದರು.