ಇದೇನಿದು! ವಾಲಿಬಾಲ್’ನಲ್ಲಿ ಸಿಎಂ ಫೋಟೋ
ಕ್ರೀಡಾ ಇಲಾಖೆಯು ಯುವಕರಿಗೆ ವಿತರಿಸುವ ವಾಲಿಬಾಲ್ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋ ಇರುವುದು ವಿವಾದಕ್ಕೀಡಾಗಿದೆ. ಆಡುವಾಗ ಕೆಳಗೆ ಬೀಳುವ ಹಂತರುವ ವಾಲಿಬಾಲನ್ನು
ಕಾಲಿನಿಂದ ಮೇಲೆತ್ತಬಹುದಾಗಿದ್ದು, ಅಂಥ ಚೆಂಡಿನ ಮೇಲೆ ಮುಖ್ಯಮಂತ್ರಿಗಳ ಚಿತ್ರ ಇರುವುದು ಸರಿಯೇ ಎಂಬುದು ಈಗ ವಿವಾದದ ಕೇಂದ್ರಬಿಂದು.
ಬೆಂಗಳೂರು (ಫೆ. 17): ಕ್ರೀಡಾ ಇಲಾಖೆಯು ಯುವಕರಿಗೆ ವಿತರಿಸುವ ವಾಲಿಬಾಲ್ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋ ಇರುವುದು ವಿವಾದಕ್ಕೀಡಾಗಿದೆ. ಆಡುವಾಗ ಕೆಳಗೆ ಬೀಳುವ ಹಂತರುವ ವಾಲಿಬಾಲನ್ನು
ಕಾಲಿನಿಂದ ಮೇಲೆತ್ತಬಹುದಾಗಿದ್ದು, ಅಂಥ ಚೆಂಡಿನ ಮೇಲೆ ಮುಖ್ಯಮಂತ್ರಿಗಳ ಚಿತ್ರ ಇರುವುದು ಸರಿಯೇ ಎಂಬುದು ಈಗ ವಿವಾದದ ಕೇಂದ್ರಬಿಂದು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ರಾಜ್ಯಾದ್ಯಂತ ಯುವ ಚೈತನ್ಯ ಯೋಜನೆಯಡಿ ಸುಮಾರು 5 ಸಾವಿರ ಗ್ರಾಮಗಳಲ್ಲಿ ಕ್ರೀಡಾ ಸಾಮಗ್ರಿ ವಿತರಣೆ ಪ್ರಕ್ರಿಯೆ ಆರಂಭಿಸಿದೆ. ಇದಕ್ಕಾಗಿ ₹ 20 ಕೋಟಿ ವ್ಯಯಿಸುತ್ತಿದೆ.
ಈ ಯೋಜನೆಯಡಿ ಪ್ರತಿ ಗ್ರಾಮದ ಯುವಕ ಸಂಘಕ್ಕೆ ₹ 40 ಸಾವಿರ ಮೊತ್ತದ ಕ್ರೀಡಾ ಸಾಮಗ್ರಿಗಳಿರುವ ಕಿಟ್ ಅನ್ನು ವಿತರಿಸಲಾಗುತ್ತದೆ. ಇದರಲ್ಲಿ ಫುಟ್ಬಾಲ್, ವಾಲಿಬಾಲ್, ಕ್ರಿಕೆಟ್ ಕಿಟ್, ವಾಲಿಬಾಲ್ ಕಂಬ ಇನ್ನಿತರ ಸಾಮಗ್ರಿಗಳು ಸೇರಿವೆ.
ಆದರೆ, ಈ ಪೈಕಿ ವಾಲಿಬಾಲ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರ ಫೋಟೋಗಳನ್ನು ಅಳವಡಿಸಿರುವುದು ಈಗ ಎಡವಟ್ಟಿಗೆ ಕಾರಣವಾಗಿದೆ. ಒಂದು ವಾರದಿಂದ ರಾಜ್ಯಾದ್ಯಂತ ಈ ಕ್ರೀಡಾ ಕಿಟ್ಗಳನ್ನು ಕ್ರೀಡಾ ಇಲಾಖೆಯಿಂದ ಕಾರ್ಯಕ್ರಮ ಆಯೋಜಿಸಿ ವಿತರಿಸಲಾಗುತ್ತಿದ್ದು, ಕೊಪ್ಪಳದಲ್ಲೂ ವಿತರಿಸಲಾಗುತ್ತಿದೆ. ಈ ವೇಳೆ ಕ್ರೀಡಾ ಇಲಾಖೆಯ ಈ ಎಡವಟ್ಟು ಬೆಳಕಿಗೆ ಬಂದಿದೆ.
ಮತ್ತೊಂದು ವಿಶೇಷವೆಂದರೆ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರೇ ಸ್ವತಃ ಈ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಆದರೂ, ಈ ಅಭಾಸ ಗಮನಕ್ಕೆ ಬಂದಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರದ್ದು. ಇನ್ನು ಕ್ರೀಡಾ ಯೋಜನೆಯಲ್ಲಿ ವಿತರಿಸಿರುವ ಸಾಮಗ್ರಿಗಳಲ್ಲಿ ಫುಟ್ಬಾಲ್ ಸಹ ಇದೆ. ಆದರೆ, ಅದಕ್ಕೆ ಯಾವುದೇ ಫೋಟೋಗಳನ್ನು ಅಂಟಿಸಿಲ್ಲ. ವಾಲಿಬಾಲ್ ಸೇರಿದಂತೆ ಕೆಲವು ಸಾಮಗ್ರಿಗಳಿಗೆ ಮಾತ್ರ ಫೋಟೋ ಅಂಟಿಸಲಾಗಿದೆ. ಸದ್ಯ ಬದಲಾದ ವಾಲಿಬಾಲ್ ಆಟದ ನಿಯಮದ ಪ್ರಕಾರ ಕಾಲಿನಿಂದ ಚೆಂಡನ್ನು ತಡೆದು ಮೇಲೆತ್ತಬಹುದು. ಹೀಗಾಗಿ, ವಾಲಿಬಾಲ್ ಆಡುವ ಸಮಯದಲ್ಲಿ ತೂರಿ ಬರುವ ಚೆಂಡನ್ನು ಕಾಲಿನಿಂದ ಮೇಲೆತ್ತಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋಕ್ಕೆ ಒದ್ದಂತಾಗುತ್ತದೆ ಎಂಬುದು ಕ್ರೀಡಾಳುಗಳು ಆಕ್ಷೇಪಿಸಿದ್ದಾರೆ.
ಸಂಸ್ಕಾರವಲ್ಲ- ಕ್ರೀಡಾಳುಗಳು: ಯಾರದ್ದೇ ಫೋಟೋ ಇರಲಿ ಬೂಟುಗಾಲಿನಿಂದ ಒದೆಯುವುದು ಸಂಸ್ಕಾರವಲ್ಲ. ಆದರೆ, ಕ್ರೀಡಾ ಇಲಾಖೆ ವಾಲಿಬಾಲ್ಗೆ ಸಿಎಂ ಮತ್ತು ಕ್ರೀಡಾ ಸಚಿವರ ಫೋಟೋ ಹಾಕಿದೆ. ಆಟವಾಡುವಾಗ ಅದನ್ನು ನೋಡಿಕೊಂಡು ಸಹಿಸಲು ಸಾಧ್ಯವೇ ಎಂಬುದು ಕ್ರೀಡಾಪಟುಗಳ ಅಳಲು. ಈ ಬಗ್ಗೆ ಸಾರ್ವಜನಿಕರೂ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರ ನೀಡುವ ಸಾಮಗ್ರಿಯಲ್ಲಿ ಯಾವುದೇ ವ್ಯಕ್ತಿಯ ಫೋಟೋ ಹಾಕುವುದು ನಿಯಮಾನುಸಾರ ಸರಿಯಲ್ಲ. ಸರ್ಕಾರದ ಅನುದಾನದ
ಸಾಮಗ್ರಿಗಳಿಗೆ ಫೋಟೋ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.