'ಹಿಂದುತ್ವವನ್ನು ವಿರೋಧಿಸುವ ಮೂಲಕ ಪ್ರತಿಪಕ್ಷಗಳು ಅಭಿವೃದ್ಧಿಯನ್ನು ವಿರೋಧಿಸುತ್ತಿವೆ'
ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹಿಂದುತ್ವವನ್ನು ವಿರೋಧಿಸುವುದೆಂದರೆ ಅಭಿವೃದ್ಧಿ ಹಾಗೂ ಭಾರತೀಯತೆಯನ್ನು ವಿರೋಧಿಸಿದಂತೆ ಎಂದು ಹೇಳಿದ್ದಾರೆ.
ಲಕ್ನೋ: ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹಿಂದುತ್ವವನ್ನು ವಿರೋಧಿಸುವುದೆಂದರೆ ಅಭಿವೃದ್ಧಿ ಹಾಗೂ ಭಾರತೀಯತೆಯನ್ನು ವಿರೋಧಿಸಿದಂತೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂಬರುವ ಸ್ಥಳೀಯಾಡಳಿತ ಚುನಾವಣೆಗಳಿಗೆ ಪ್ರಚಾರಕ್ಕೆ ಅಯೋಧ್ಯೆಗೆ ಹೊರಡುವ ಸಂದರ್ಭದಲ್ಲಿ ಮಾತನಾಡಿದ ಯೋಗಿ, ಹಿಂದುತ್ವವು ಯಾವುದೇ ಸಮುದಾಯಗಳಿಗೆ ಸೀಮಿತವಾದುದಲ್ಲ, ಬದಲಾಗಿ ರಾಷ್ಟ್ರೀಯತೆಗೆ ಸಂಬಂಧಪಟ್ಟದ್ದು, ಎಂದು ಪ್ರತಿಪಾದಿಸಿದ್ದಾರೆ.
ಹಿಂದುತ್ವ ಹಾಗೂ ಅಭಿವೃದ್ಧಿಯು ಒಂದಕ್ಕೊಂದು ಪೂರಕವಾದುದ್ದು. ಹಿಂದುತ್ವವನ್ನು ವಿರೋಧಿಸುವ ಮೂಲಕ ಪ್ರತಿಪಕ್ಷಗಳು ಅಭಿವೃದ್ಧಿಯನ್ನು ವಿರೋಧಿಸುತ್ತಿವೆ ಎಂದು ಅವರು ಹೇಳಿದ್ದಾರೆ.
ಸಮಾಜವಾದಿ ಪಕ್ಷ ಹಾಗೂ ಅಖಿಲೇಶ್ ಯಾದವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆದಿತ್ಯನಾಥ್, ಕುಟುಂಬ ರಾಜಕಾರಣವನ್ನು ಬೆಳೆಸಿದ ಹಾಗೂ ಜಾತ್ಯತೀತತೆ ಹೆಸರಿನಲ್ಲಿ ಜಾತಿ ರಾಜಕಾರಣ ಮಾಡಿ ಭ್ರಷ್ಟಾಚಾರ ನಡೆಸಿದವರು ಇಂದು ನನ್ನನ್ನು ಟೀಕಿಸುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಉತ್ತರ ಪ್ರದೇಶ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಬಿಜೆಪಿಯು ಜಯಭೇರಿ ಬಾರಿಸುವ ವಿಶ್ವಾಸವನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.