ತನಿಖಾಧಿಕಾರಿಗಳಿಗೆ ಮೊಬೈಲ್ ನೀಡದ ಬಿಎಸ್ವೈ ಆಪ್ತ
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಧ್ಯಮ ಸಂಚಾಲಕ ವಿನಯ್ ಅಪಹರಣ ಯತ್ನ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ತನಿಖಾಧಿಕಾರಿಗಳಿಗೆ ತಮ್ಮ ಮೊಬೈಲನ್ನು ನೀಡಲು ಮತ್ತೆ ನಿರಾಕರಿಸಿದ್ದಾರೆ.
ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಧ್ಯಮ ಸಂಚಾಲಕ ವಿನಯ್ ಅಪಹರಣ ಯತ್ನ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ತನಿಖಾಧಿಕಾರಿಗಳಿಗೆ ತಮ್ಮ ಮೊಬೈಲನ್ನು ನೀಡಲು ಮತ್ತೆ ನಿರಾಕರಿಸಿದ್ದಾರೆ.
ಪ್ರಕರಣದ ಸಂಬಂಧ ಮಂಗಳವಾರ 5 ತಾಸುಗಳ ವಿಚಾರಣೆ ಎದುರಿಸಿದ ಸಂತೋಷ್, ಈ ಸಂದರ್ಭದಲ್ಲಿ ಮೊಬೈಲ್ ವಶಕ್ಕೆ ನೀಡುವಂತೆ ತನಿಖಾಧಿಕಾರಿಗಳ ಸೂಚನೆಯನ್ನು ಧಿಕ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಎಸಿಪಿ ಆನಂದ್.ಆರ್.ಬಡಿಗೇರ್, ತನಿಖೆ ಸಲುವಾಗಿ ತಮ್ಮ ಮೊಬೈಲನ್ನು ಸುಪರ್ದಿಗೆ ಕೊಡುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ. ಈ ನೋಟಿಸ್ಗೆ ಅವರಿಂದ ಪ್ರತಿಕ್ರಿಯೆ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತನಿಖೆ ಭಾಗಶಃ ಮುಕ್ತಾಯವಾಗಿದ್ದು, ಸಂತೋಷ್ ಅವರ ಮೊಬೈಲ್ ಪರಿಶೀಲನೆ ಮಾತ್ರ ಬಾಕಿ ಉಳಿದಿದೆ. ಈ ಮೊಬೈಲ್ನಲ್ಲಿ ಕೃತ್ಯಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿ ಇದೆ ಎಂಬ ಅನುಮಾನವಿದೆ.