‘ಭಗವಾನ್ ಹನುಮಾನ್ ಮನುವಾದಿಗಳ ಗುಲಾಮನಾಗಿದ್ದ'
ಉತ್ತರ ಪ್ರದೇಶದ ಕೆಲ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಎತ್ತಿದ ಕೈ. ಅಂಥದ್ದೇ ಒಂದು ಹೇಳಿಕೆ ಇದೀಗ ಬಿಜೆಪಿ ಸಂಸದರಿಂದ ಬಂದಿದ್ದು ಇದು ನೇರವಾಗಿ ರಾಮಾಯಣಕ್ಕೆ ಸಂಬಂಧಿಸಿದೆ.
ಲಕ್ನೌ [ಡಿ.04] ಭಗವಾನ್ ಹುನಮಂತ ದಲಿತನಾಗಿದ್ದ ಮತ್ತು ಅವನು ಮನುವಾದಿ ಜನರ ಗುಲಾಮನಾಗಿದ್ದ ಎಂದು ಬಹರಾಯಿಚ್ ನ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ನೀಡಿರುವ ಹೇಳಿಕೆ ದೊಡ್ಡ ಸುದ್ದಿಯಾಗಿದೆ.
ಹನುಮಾನ್ ದಲಿತನಾಗಿದ್ದ ಎಂದು ಹೇಳಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮಾತಿಗೆ ಧ್ವನಿ ಸೇರಿಸಿರುವ ಸಾವಿತ್ರಿ ಬಾಯಿ ಪುಲೆ , ದಲಿತರು ಹಾಗೂ ಹಿಂದುಳಿದ ವರ್ಗದವರನ್ನು ಕೋತಿಗಳು ಮತ್ತು ರಾಕ್ಷಸರು ಎಂದು ಕರೆಯಲಾಗುತಿತ್ತು ಎಂದು ಹೇಳಿದ್ದಾರೆ.
ಶ್ರೀರಾಮನಿಗಾಗಿ ಹನುಮಾನ್ ಎಲ್ಲ ಸೇವೆಯನ್ನೂ ಮಾಡಿದ. ಆದರೂ ಅವನನ್ನು ಏಕೆ ವಾನರನನ್ನಾಗಿ ಮಾಡಲಾಯಿತು. ಅವನಿಗೇಕೆ ಬಾಲ ಇತ್ತು ಮತ್ತು ಅವನ ಮುಖವೇಕೆ ಕಪ್ಪಾಗಿತ್ತು? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆದಿದ್ದಾರೆ.
ಅಲ್ವಾರ್ ಜಿಲ್ಲೆಯ ಮಾಳಖೇಡಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್. ಹನುಮಾನ್ ದಲಿತನಾಗಿದ್ದು, ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಟಿಮಕ್ಕೆ ಎಲ್ಲಾ ಭಾರತೀಯ ಸಮುದಾಯವನ್ನು ಒಟ್ಟುಗೂಡಿಸುವ ಕೆಲಸ ಮಾಡಿದ್ದ ಎಂದು ಹೇಳಿದ್ದರು. ಈ ಹೇಳಿಕೆ ಸಹ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದೀಗ ಬಿಜೆಪಿಯ ಸಂಸದೆ ಒಬ್ಬರು ಸಹ ಅಭಿಪ್ರಾಯ ಹೊರಹಾಕಿದ್ದಾರೆ.