ಉಗ್ರರ ನುಸುಳುವಿಕೆ ತಡೆಯಲು ಸೇನೆ ಸಿದ್ಧ: ಅರುಣ್ ಜೇಟ್ಲಿ
ಕಾಶ್ಮೀರ ಕಣಿವೆಯನ್ನು ನುಸುಳಿ ಬರುವ ಉಗ್ರಗಾಮಿಗಳನ್ನು ಸದೆ ಬಡಿಯಲು ಭಾರತೀಯ ಸೇನೆ ಸಂಪೂರ್ಣವಾಗಿ ತಯಾರಾಗಿದೆ ಎಂದು ಹೆಚ್ಚುವರಿ ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನವದೆಹಲಿ (ಮೇ.19): ಕಾಶ್ಮೀರ ಕಣಿವೆಯನ್ನು ನುಸುಳಿ ಬರುವ ಉಗ್ರಗಾಮಿಗಳನ್ನು ಸದೆ ಬಡಿಯಲು ಭಾರತೀಯ ಸೇನೆ ಸಂಪೂರ್ಣವಾಗಿ ತಯಾರಾಗಿದೆ ಎಂದು ಹೆಚ್ಚುವರಿ ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಉಗ್ರಗಾಮಿಗಳಿಂದ ಒಳನುಸುಳುವಿಕೆ ಕಂಡು ಬಂದಲ್ಲಿ ಅವರನ್ನು ಹೊಡೆದುರುಳಿಸಲು ನಮ್ಮ ಸೇನೆ ಸನ್ನದ್ಧವಾಗಿದೆ. ಭಾರತದ ಸಾರ್ವಭೌಮತ್ವ ಭೂಪ್ರದೇಶದೊಳಗೆ ನುಸುಳಲು ಅವಕಾಶ ನೀಡಲಾಗುವುದಿಲ್ಲವೆಂದು ಜೇಟ್ಲಿ ಹೇಳಿದ್ದಾರೆ.
ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬರುವವರ ಬಗ್ಗೆ ನಾವು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅವರಿಂದಲೇ ರಾಜ್ಯದ ಪರಿಸ್ಥಿತಿ ಹದಗೆಡುವುದು ಎಂದು ಜೇಟ್ಲಿ ಹೇಳಿದ್ದಾರೆ.
ಶ್ರೀನಗರದಲ್ಲಿ ನಡೆಯುತ್ತಿರುವ ಸರಕು ಮತ್ತು ಸೇವಾ ತೆರಿಗೆಯ 14ನೇ ಸಭೆಯಲ್ಲಿ ಭಾಗವಹಿಸಲು ಜೇಟ್ಲಿ ಅಲ್ಲಿಗೆ ತೆರಳಿದ್ದು ಇದೇ ಸಂದರ್ಭದಲ್ಲಿ ಸೇನಾ ಹಿರಿಯ ಕಮಾಂಡರ್ ಗಳ ಜೊತೆ ಮಾತುಕತೆ ನಡೆಸಿದರು. ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರಗಾಮಿಗಳೇನಾದರೂ ಕೈಚಳಕ ತೋರಿಸಿದರೆ ಅವರಿಗೆ ಸರಿಯಾಗಿ ಬುದ್ಧಿ ಕಲಿಸಿ ಎಂದು ಕಮಾಂಡರ್ ಗಳಿಗೆ ಹೇಳಿದ್ದಾರೆ.