‘ನೀರ್ದೋಸೆ’ ಕೇಸಲ್ಲಿ ರಮ್ಯಾಗೆ ಮುಖಭಂಗ
ನೀರ್ದೋಸೆ ಚಿತ್ರದ ಚಿತ್ರಿಕರಣದಲ್ಲಿ ಅನುಮತಿ ಇಲ್ಲದೆ ತೆಗೆದ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಮೂಲಕ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಮಾಜಿ ಸಂಸದೆ ನಟಿ ರಮ್ಯಾ ದಾಖಲಿಸಿದ್ದ ಪ್ರಕರಣವನ್ನು ನಗರದ 1ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ರದ್ದುಪಡಿಸಿದೆ.
ಬೆಂಗಳೂರು : ನೀರ್ದೋಸೆ ಚಿತ್ರದ ಚಿತ್ರಿಕರಣದಲ್ಲಿ ಅನುಮತಿ ಇಲ್ಲದೆ ತೆಗೆದ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಮೂಲಕ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಮಾಜಿ ಸಂಸದೆ ನಟಿ ರಮ್ಯಾ ದಾಖಲಿಸಿದ್ದ ಪ್ರಕರಣವನ್ನು ನಗರದ 1ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ರದ್ದುಪಡಿಸಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ 2013ರಲ್ಲಿ ಪತ್ರಕರ್ತರ ವಿರುದ್ಧ ನಟಿ ರಮ್ಯಾ ದೂರು ದಾಖಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪದಲ್ಲಿ ಯಾವುದೇ ಹುರಳಿಲ್ಲ. ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ 16 ಸಾಕ್ಷ್ಯಗಳಲ್ಲಿ ಯಾವುದೂ ಸಹ ಆರೋಪವನ್ನು ಪುರಸ್ಕರಿಸುವಂತಹದ್ದಿಲ್ಲ ಎಂದು ಪ್ರಕರಣ ರದ್ದು ಮಾಡಿದ್ದಾರೆ.
ರಮ್ಯಾ ವಿರುದ್ಧ ಮತ್ತೊಂದು ದೂರು : ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ ಕಾಂಗ್ರೆಸ್ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ದಿವ್ಯಸ್ಪಂದನಾ (ರಮ್ಯಾ) ವಿರುದ್ಧ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತೀಚೆಗಷ್ಟೇ ಇದೇ ಪ್ರಕರಣ ಸಂಬಂಧ ರಮ್ಯಾ ವಿರುದ್ಧ ಉತ್ತರ ಪ್ರದೇಶದಲ್ಲಿ ದೇಶದ್ರೋಹದ ಕೇಸ್ ದಾಖಲಾಗಿತ್ತು.
ರಮ್ಯಾ ತಮ್ಮ ಟ್ವೀಟ್ನಲ್ಲಿ ಪ್ರಧಾನಿಯನ್ನು ಅವಹೇಳನ ಮಾಡಿರುವುದಲ್ಲದೆ, ಧಾರ್ಮಿಕ ಭಾವನೆಯನ್ನು ಕೆರಳಿಸಿದ್ದಾರೆ. ಒಮ್ಮೆ ಸಂಸದೆಯಾಗಿ ಆಯ್ಕೆಯಾಗಿ, ಈಗ ಕ್ಷೇತ್ರವನ್ನೂ ಬಿಟ್ಟುಹೋಗಿರುವ ರಮ್ಯಾ ಅವರಿಗೆ ಪ್ರಧಾನಿಯನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ಮೈಸೂರಿನ ವಕೀಲ ಬಿ.ಆರ್. ದಿನೇಶ್ ಗೌಡ ದೂರು ನೀಡಿದ್ದಾರೆ. ಈ ಬಗ್ಗೆ ದೂರು ಸ್ವೀಕರಿಸಿರುವ ಲಕ್ಷ್ಮೀಪುರಂ ಪೊಲೀಸರು, ಟ್ವೀಟರ್ನ ದಾಖಲೆಯನ್ನು ಕೋರಿದ್ದಾರೆ. ಬಳಿಕ ಈ ಪ್ರಕರಣವನ್ನು ಸೈಬರ್ ಕ್ರೈಂಗೆ ವರ್ಗಾಯಿಸಲಾಗುವುದು ಎಂದಿದ್ದಾರೆ.