Asianet Suvarna News Asianet Suvarna News

ಹಾಸನದಲ್ಲಿ ಅಕ್ಷರ ಕ್ರಾಂತಿ; ಇದು ಲೆಕ್ಚರರ್’ಗಳು ಕಟ್ಟಿದ ಪುಸ್ತಕ ಲೋಕ

ಅದು ಭಾನುವಾರದ ಒಂದು ಸಂಜೆ. ಹಾಸನದ ಕೆ.ಆರ್. ಪುರದಲ್ಲಿರುವ ‘ಅಕ್ಷರ ಬುಕ್ ಹೌಸ್’ ಮುಂದೆ ಜನ ಕಿಕ್ಕಿರಿದು ಸೇರಿದ್ದರು. ಅವರಲ್ಲಿ ಹೆಚ್ಚಿನವರು ಹೈಸ್ಕೂಲ್ ಹುಡುಗರು. ಹೊರಗಿನಿಂದ ನೋಡುವವರಿಗೆ
ಆಶ್ಚರ್ಯ! ಪುಸ್ತಕ ಅಂದ್ರೆ ಓಡಿಹೋಗುವ, ಮೊಬೈಲ್, ವೀಡಿಯೊ ಗೇಮ್'ಗಳಲ್ಲಿ ಮುಳುಗಿ ಹೋಗುವ ಹುಡುಗರು ಪುಸ್ತಕದಂಗಡಿಯಲ್ಲಿ ಕ್ಯೂ ನಿಂತು ಪುಸ್ತಕ ಖರೀದಿಸುತ್ತಾರೆ ಅಂದ್ರೆ.. ಯಥಾರ್ಥ ಹೀಗಿತ್ತು, ಹಾಸನದ ಅಕ್ಷರ ಬುಕ್ ಹೌಸ್‌ನವರು ಮಕ್ಕಳಿಗೆ ಪುಸ್ತಕ ವಿಮರ್ಶಾ ಸ್ಪರ್ಧೆ ಇಟ್ಟಿದ್ದರು. ಅಷ್ಟೇ ಮಾಡಿದ್ರೆ ಯಾವ ಹುಡುಗರೂ ಕಣ್ಣೆತ್ತಿ ನೋಡುತ್ತಿರಲಿಲ್ವೋ ಏನೋ, ಆದರೆ ಇವರು 10,000 ರು. ಕ್ಯಾಶ್‌ಪ್ರೈಸ್  ಇಟ್ಟಿದ್ದರು. ಅದನ್ನು ಕಂಡು ವಿದ್ಯಾರ್ಥಿಗಳು, ಪೋಷಕರು ಪುಸ್ತಕ ಖರೀದಿಸಿದರು, ಆಸಕ್ತಿಯಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡರು.

Akshara Kranthi in Hassana

ಬೆಂಗಳೂರು (ಫೆ. 17): ಅದು ಭಾನುವಾರದ ಒಂದು ಸಂಜೆ. ಹಾಸನದ ಕೆ.ಆರ್. ಪುರದಲ್ಲಿರುವ ‘ಅಕ್ಷರ ಬುಕ್ ಹೌಸ್’ ಮುಂದೆ ಜನ ಕಿಕ್ಕಿರಿದು ಸೇರಿದ್ದರು. ಅವರಲ್ಲಿ ಹೆಚ್ಚಿನವರು ಹೈಸ್ಕೂಲ್ ಹುಡುಗರು. ಹೊರಗಿನಿಂದ ನೋಡುವವರಿಗೆ
ಆಶ್ಚರ್ಯ! ಪುಸ್ತಕ ಅಂದ್ರೆ ಓಡಿಹೋಗುವ, ಮೊಬೈಲ್, ವೀಡಿಯೊ ಗೇಮ್'ಗಳಲ್ಲಿ ಮುಳುಗಿ ಹೋಗುವ ಹುಡುಗರು ಪುಸ್ತಕದಂಗಡಿಯಲ್ಲಿ ಕ್ಯೂ ನಿಂತು ಪುಸ್ತಕ ಖರೀದಿಸುತ್ತಾರೆ ಅಂದ್ರೆ.. ಯಥಾರ್ಥ ಹೀಗಿತ್ತು, ಹಾಸನದ ಅಕ್ಷರ ಬುಕ್ ಹೌಸ್‌ನವರು ಮಕ್ಕಳಿಗೆ ಪುಸ್ತಕ ವಿಮರ್ಶಾ ಸ್ಪರ್ಧೆ ಇಟ್ಟಿದ್ದರು. ಅಷ್ಟೇ ಮಾಡಿದ್ರೆ ಯಾವ ಹುಡುಗರೂ ಕಣ್ಣೆತ್ತಿ ನೋಡುತ್ತಿರಲಿಲ್ವೋ ಏನೋ, ಆದರೆ ಇವರು 10,000 ರು. ಕ್ಯಾಶ್‌ಪ್ರೈಸ್  ಇಟ್ಟಿದ್ದರು. ಅದನ್ನು ಕಂಡು ವಿದ್ಯಾರ್ಥಿಗಳು, ಪೋಷಕರು ಪುಸ್ತಕ ಖರೀದಿಸಿದರು, ಆಸಕ್ತಿಯಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡರು.

‘ಇದರಿಂದ ನಮ್ಮ ಅಂಗಡಿಯಲ್ಲಿ ಸಾಕಷ್ಟು ಪುಸ್ತಕಗಳು ಖರೀದಿಯಾದವು. ಲಾಭವಾಯಿತೋ, ನಷ್ಟವಾಯಿತೋ ಅದು ಎರಡನೇ ಪ್ರಶ್ನೆ. ಆದರೆ ಆ ಎಳೆಯ ಕೈಗಳು ಪುಸ್ತಕ ಎತ್ತಿಕೊಂಡು ಓದತೊಡಗಿದರಲ್ಲ, ಅದು ಖುಷಿ. ಒಮ್ಮೆ ಅವರಿಗೆ
ಪುಸ್ತಕದ ರುಚಿ ಹತ್ತಿಸಿದರೆ, ಆಮೇಲೆ ಪುಸ್ತಕ ಪ್ರೀತಿ ತನ್ನಿಂತಾನೆ ಬೆಳೆಯುತ್ತದೆ’ ಎನ್ನುತ್ತಾರೆ ಗಂಗಾಧರ್. ಇಂಥದ್ದೊಂದು ಬುಕ್‌ಹೌಸ್ ನಿರ್ಮಿಸಿ ಹಾಸನದ ಜನತೆಯಲ್ಲಿ ಓದಿನ ಅಭಿರುಚಿ ಬೆಳೆಸಿದ್ದಾರೆ ಗಂಗಾಧರ್. ಇವರು ಸ್ಥಳೀಯ ಕಾಲೇಜೊಂದರಲ್ಲಿ ಫಿಸಿಕ್ಸ್ ಲೆಕ್ಚರರ್. ಅಕ್ಷರ ಬುಕ್‌ಹೌಸ್ ನಿರ್ಮಾಣದಲ್ಲಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಶಿವ ಕುಮಾರ್ ಕೈಜೋಡಿಸಿದ್ದಾರೆ. ಶ್ರೀನಾಥ್, ಸುರೇಂದ್ರ ಕುಮಾರ್ ಎಂಬಿಬ್ಬರು ಉಪನ್ಯಾಸಕರ ಸಹಕಾರವೂ ಇದೆ. 

‘ನಮ್ಮಲ್ಲಿ ಊರಿಗೆ ಕನಿಷ್ಠ ಒಂದಾದರೂ ಬಾರ್ ಇದ್ದೇ ಇರುತ್ತೆ. ಆದರೆ ಇಡೀ ಜಿಲ್ಲೆಯ ಮಟ್ಟಕ್ಕೆ ಒಂದೇ ಒಂದು ಪುಸ್ತಕದಂಗಡಿ ಇರಲ್ಲ. ಹಾಸನದಲ್ಲೂ ಹಾಗೇ ಆಗಿತ್ತು. ಇಲ್ಲಿ ಒಂದೇ ಒಂದು ಪುಸ್ತಕದಂಗಡಿ ಇರಲಿಲ್ಲ. ಪುಸ್ತಕ ಖರೀದಿಗೆ ಮೈಸೂರು ಅಥವಾ ಬೆಂಗಳೂರಿಗೆ ಹೋಗಬೇಕಿತ್ತು. ನಾವು ಲೆಕ್ಚರರ್ಸ್‌ ಎಲ್ಲ ಸೇರಿ ಒಂದು ತೀರ್ಮಾನಕ್ಕೆ ಬಂದು ಲಾಭವೋ, ನಷ್ಟವೋ ನಮ್ಮೂರಿಗೊಂದು ಪುಸ್ತಕದಂಗಡಿ ಬೇಕು, ಅದನ್ನು ನಾವೇ ಶುರು ಮಾಡಬೇಕು ಪುಸ್ತಕದ ಅಂಗಡಿ ಸ್ಥಾಪನೆ ಮಾಡಿದೆವು. ಆಗ ಹಾಸನದಂಥ ಜಿಲ್ಲಾ ಕೇಂದ್ರದಲ್ಲಿ ಯಾರು ಪುಸ್ತಕ ಖರೀದಿಸುತ್ತಾರೆ, ಇದೊಂದು ನಷ್ಟದ ಬಾಬ್ತು, ಎಂಬೆಲ್ಲ ಮಾತು, ಯೋಚನೆಗಳೂ ಬಂದವು. ಆದರೆ ನಷ್ಟವಾದರೂ  ಚಿಂತೆಯಿಲ್ಲ. ಜನರಲ್ಲಿ ಪುಸ್ತಕ ಪ್ರೀತಿಯನ್ನು ನಾವೇ ಬೆಳೆಸೋಣ ಎಂದು
ಅಕ್ಷರ ಬುಕ್‌ಹೌಸ್ ಆರಂಭಿಸಿದೆವು’ ಎನ್ನುತ್ತಾರೆ ಗಂಗಾಧರ್. ಅಕ್ಷರ ಬುಕ್ ಹೌಸ್‌ನಲ್ಲೀಗ 40,000 ಕ್ಕೂ ಹೆಚ್ಚು ಪುಸ್ತಕಗಳಿವೆ. ಕನ್ನಡ, ಇಂಗ್ಲೀಷ್ ಸಾಹಿತ್ಯಿಕ ಪುಸ್ತಕಗಳಿಗೆ ಮೊದಲ ಆದ್ಯತೆ. ಆಗಷ್ಟೇ ಬಿಡುಗಡೆಯಾದ ಪುಸ್ತಕಗಳಿಂದ ಹಿರಿಯ ಸಾಹಿತ್ಯಕೃತಿಗಳ ವರೆಗೆ ಹೆಚ್ಚಿನೆಲ್ಲ ಪುಸ್ತಕಗಳೂ ಇಲ್ಲಿ ಸಿಗುತ್ತವೆ. ಇದಲ್ಲದೇ ಮಕ್ಕಳ ಓದಿಗೆ ಪೂರಕವಾದ ಪುಸ್ತಕಗಳು, ವ್ಯಕ್ತಿತ್ವ ವಿಕಸನ, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕ, ಇಂಜಿನಿಯರಿಂಗ್‌ಗೆ ಸಂಬಂಧಿಸಿದ ಪುಸ್ತಕ ಹೀಗೆ ಹಲವಾರು ವಿಷಯಗಳ ಹೊತ್ತಿಗೆಗಳಿಲ್ಲಿ ಲಭ್ಯ. ಪುಸ್ತಕ ಮಳಿಗೆ ಇಟ್ಟಿರುವುದಕ್ಕಿಂತಲೂ ಇವರು ಹಾಸನದ ಜನರನ್ನು ಓದುವ ಪ್ರೀತಿಗೆ ಹಚ್ಚಿರುವುದು ಹೆಚ್ಚಿನ ಸಾಧನೆ ಎನಿಸುತ್ತದೆ. ಲೆಕ್ಚರರ್‌ಗಳು ಸೇರಿ ಕಟ್ಟಿದ ಪುಸ್ತಕ ಲೋಕ ದೊಡ್ಡವರಿಗಾದರೂ ಸ್ವಲ್ಪ ಪುಸ್ತಕ ಪ್ರೀತಿ ಇರುತ್ತದೆ. ಆದರೆ ಇಂದಿನ ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸುವುದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ ಗಂಗಾಧರ್ ಮತ್ತು ತಂಡದವರು. ಮಕ್ಕಳಿಗಾಗಿ ಪುಸ್ತಕ ಪ್ರೀತಿ ಹುಟ್ಟಿಸುವಂಥ ಸ್ಪರ್ಧೆ ಹಮ್ಮಿಕೊಳ್ಳೋದಷ್ಟೇ ಅಲ್ಲ, ಹಾಸನ ಸುತ್ತಮುತ್ತಲಿನ ಶಾಲೆಯ ಮಕ್ಕಳಿಗೆ ವಾರದಲ್ಲೊಂದು ದಿನ ಪುಸ್ತಕ ಮಳಿಗೆಗೆ ಭೇಟಿ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಪುಸ್ತಕಕ್ಕೆ ಮುಂಗಡ ಬುಕ್ಕಿಂಗ್:

ನಾಡಿನ ಹಿರಿಯ, ಖ್ಯಾತ ಬರಹಗಾರರ ಪುಸ್ತಕಕ್ಕೆ ಬಹಳ ಬೇಡಿಕೆ ಇದೆ. ಕೆಲವು ಲೇಖಕರ ಕೃತಿಗಳಿಗೆ ಮುಂಗಡ ಬುಕ್ಕಿಂಗ್ ಕೂಡ ಆಗುತ್ತದೆ. ಕನ್ನಡದ ಜನಪ್ರಿಯ ಲೇಖಕಕರ ಪುಸ್ತಕಕ್ಕೆ ಇಲ್ಲಿ ಅತೀ ಹೆಚ್ಚು ಬೇಡಿಕೆ ಇದೆ. ತುಸು ಲಘುವಾದ, ಮಕ್ಕಳೂ ಓದುವಂಥ ಕೃತಿಗಳನ್ನು ಮಕ್ಕಳು ಹೆಚ್ಚೆಚ್ಚು ಖರೀದಿಸಿ ಓದುತ್ತಾರೆ. ೫ ನೇ ಕ್ಲಾಸ್‌ನಿಂದಲೇ ಸ್ಪರ್ಧಾತ್ಮಕ ಐಐಎಂನಂಥ ಪರೀಕ್ಷೆಗೆ ತಯಾರಾಗಲು ಪೂರಕವಾದ ಪುಸ್ತಕಗಳು ಇಲ್ಲಿವೆ. ಸ್ವತಃ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇಲ್ಲಿಗೆ ಭೇಟಿ ನೀಡಿ, ಗಂಗಾಧರ ಅವರ ಪುಸ್ತಕ ಪ್ರೀತಿ ಬೆಳೆಸುವ ಕೈಂಕರ‌್ಯವನ್ನು ಪ್ರೋತ್ಸಾಹಿಸಿದ್ದಾರೆ. ಮುಂದಿನ ದಿನಳಗಲ್ಲಿ ಕಾಫಿ ಜೊತೆಗೆ ಪುಸ್ತಕ ಓದುವ ವಾತಾವರಣ ಕಲ್ಪಿಸುವ ಯೋಜನೆ ಹೊಂದಿರುವ ತಂಡ ಪ್ರಕಾಶನ ಸಂಸ್ಥೆಯೊಂದನ್ನು ಆರಂಭಿಸಿ,
ಕನ್ನಡದ ಜನಪ್ರಿಯ ಬರಹಗಾರರ ಪುಸ್ತಕಗಳನ್ನು ಈ ಪ್ರಕಾಶನದ ಮೂಲಕ ಹೊರತರುವ ಸಿದ್ಧತೆಯಲ್ಲಿದೆ.

Follow Us:
Download App:
  • android
  • ios