‘ಮುಖಂಡರ ಭವಿಷ್ಯ : ಮತ್ತೆ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ’
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು, ಸಂಪುಟ ವಿಸ್ತರಣೆಯೇ ಸರ್ಕಾರ ಉರುಳಲು ಅಡಿಗಲ್ಲಾಗಲಿದೆ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಕೊಟ್ಟೂರು: ರಾಜ್ಯ ಸಚಿವ ಸಂಪುಟ ಪುನರ್ ರಚನೆಯಲ್ಲಿ ಕಾಂಗ್ರೆಸ್ನಲ್ಲಿ ಕಂಡು ಬಂದಿರುವ ಅಸಮಾಧಾನದ ಕಿಚ್ಚು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಲಿದೆ. ಈ ಸರ್ಕಾರ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎಂದು ಶಾಸಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ತಾಲೂಕಿನ ಉಜ್ಜಯಿನಿ ಸದ್ಧರ್ಮ ಪೀಠದಲ್ಲಿ ಮಾತನಾಡಿದ ಅವರು, ಬಿಜೆಪಿ ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ಮಾಡುವುದಿಲ್ಲ. ತನ್ನಿಂದ ತಾನೆ ಸಮ್ಮಿಶ್ರ ಸರ್ಕಾರ ಪತನವಾಗಲಿದ್ದು, ಬಳಿಕ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಸಮಸ್ಯೆಗಳ ನಿವಾರಣೆಗೆ ಅಧಿವೇಶನದಲ್ಲಿ ಚರ್ಚೆ ನಡಯಬೇಕಿತ್ತು. ಆದರೆ, ಸರ್ಕಾರ ಇಂತಹ ಚರ್ಚೆಗೆ ಅವಕಾಶ ನೀಡಿದೆ ಅಧಿವೇಶನವನ್ನು ಮುಗಿಸಿದೆ. ಐದು ಬಾರಿ ಶಾಸಕನಾಗಿರುವ ನಾನು ಇಂತಹ ಕೆಟ್ಟಸರ್ಕಾರವನ್ನು ನೋಡಿರಲಿಲ್ಲ. ಸಾಲಮನ್ನಾದ ಬಗ್ಗೆ ಸ್ವಷ್ಟತೆ ತಿಳಿಸುವಂತೆ ಅಧಿವೇಶನದಲ್ಲಿ ಧರಣಿ ನಡೆಸಿದರೂ ಮುಖ್ಯಮಂತ್ರಿಗಳು ಯಾವುದೇ ಉತ್ತರ ನೀಡದೆ ಸುಮ್ಮನಾದರು ಎಂದು ಕಿಡಿಕಾರಿದರು.
ರೈತರ ಸಾಲವನ್ನು ಪೂರ್ಣಪ್ರಮಾಣದಲ್ಲಿ ಮನ್ನಾ ಮಾಡುವಂತೆ ಬಿಜೆಪಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಿದೆ. ಬೆಳಗಾವಿ ಅಧಿವೇಶನ ಗದ್ದಲದಲ್ಲಿ ಮುಗಿಯಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಕಾರಣ ಹೊರತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾರಣರಲ್ಲ ಎಂದರು.