ಗುಂಪು ಹತ್ಯೆ ನಿಲ್ಲಿಸಿ ಎಂದು ಪ್ರಧಾನಿಗೆ ಪತ್ರ: ನಟನಿಗೆ ಜೀವ ಬೆದರಿಕೆ!
ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಹಲ್ಲೆ ಪ್ರಕರಣಗಳು| 49 ಗಣ್ಯ ವ್ಯಕ್ತಿಗಳಿಂದ ಪ್ರಧಾನಿ ಮೋದಿಗೆ ಪತ್ರ| ಹಲ್ಲೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಕಾನೂನು ಜಾರಿಗೆ ಆಗ್ರಹ| ವಿವಿಧ ಕ್ಷೇತ್ರಗಳ 49 ಗಣ್ಯರು ಸಹಿ ಮಾಡಿರುವ ಪತ್ರ ಪ್ರಧಾನಿ ಮೋದಿಗೆ ರವಾನೆ| ಪತ್ರಕ್ಕೆ ಸಹಿ ಹಾಕಿದ್ದ ನಟ ಕೌಶಿಕ್ ಸೇನ್ ಅವರಿಗೆ ಜೀವ ಬೆದರಿಕೆ ಕರೆ| ಜೀವ ಬೆದರಿಕೆ ಕರೆ ಕುರಿತು ಪೊಲೀಸರಿಗೆ ದೂರು ನೀಡಿದ ನಟ ಕೌಶಿಕ್ ಸೇನ್|
ನವದೆಹಲಿ(ಜು.25): ಗುಂಪು ಗಲಭೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ಪತ್ರ ಬರೆದಿದ್ದರು. ಈ ಪೈಕಿ ನಟ ಕೌಶಿಕ್ ಸೇನ್ ಅವರಿಗೆ ಇದೀಗ ಜೀವ ಬೆದರಿಕೆ ಕರೆ ಬಂದಿದೆ.
ನಟ ಕೌಶಿಕ್ ಸೇನ್ ಅವರಿಗೆ ಇದೀಗ ಜೀವ ಬೆದರಿಕೆ ಕರೆ ಬಂದಿದ್ದು, ಈ ಕುರಿತು ಕೌಶಿಕ್ ಸೇನ್ ಪೊಲೀಸರಿಗೆ ದೂರು ನೀಡಿದ್ದಾರೆ. ಕೌಶಿಕ್ ಅವರಿಗೆ ಬಂದಿದ್ದ ದೂರವಾಣಿಯನ್ನು ಪರಿಶೀಲಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರಿಕ್ರಿಯೆ ನೀಡಿರುವ ಕೌಶಿಕ್ ಸೇನ್, ತಾವು ಪ್ರಾಮಾಣಿಕರಾಗಿದ್ದು ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಪ್ರಧಾನಗೆ ಬರೆದ ಪತ್ರಕ್ಕೆ ಸಹಿ ಹಾಕಿದ ತಮ್ಮ ನಡೆಯನ್ನೂ ಕೌಶಿಕ್ ಸಮರ್ಥಿಸಿಕೊಂಡಿದ್ದಾರೆ.
ಅಸಹಿಷ್ಣುತೆ ಮತ್ತು ಗುಂಪು ಹತ್ಯೆ ವಿರೋಧಿಸಿ ವಿವಿಧ ಕ್ಷೇತ್ರಗಳ ಸುಮಾರು 49 ಗಣ್ಯರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಗುಂಪು ಹತ್ಯೆ ವಿರುದ್ಧ ಕಠಿಣ ಕ್ರಮಕ್ಕೆ ಈ ಪತ್ರದಲ್ಲಿ ಆಗ್ರಹಿಸಲಾಗಿತ್ತು.