ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ 9 ಬಿಜೆಪಿ ಶಾಸಕರು : ಜಮೀರ್ ನೀಡಿದ ಸುಳಿವು
ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಇತ್ತ ಸರ್ಕಾರ ಪತನದ ವಿಚಾರ ಸದ್ದು ಮಾಡುತ್ತಿದೆ. ಕೈ ಮುಖಂಡರು ಬಿಜೆಪಿಗರು ನಮ್ಮ ಬಳಿ ಇದ್ದಾರೆ ಎಂದರೆ, ಅತ್ತ ಬಿಜೆಪಿಗರು ಕಾಂಗ್ರೆಸಿನವರು ನಮ್ಮ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ ಎನ್ನುತ್ತಿದ್ದಾರೆ.
ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಹಲವು ರೀತಿಯ ಚರ್ಚೆಗಳಾಗುತ್ತಿದೆ. ಅತ್ತ ಬಿಜೆಪಿ ಮುಖಂಡರು ಕೈ ನಾಯಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದರೆ ಇತ್ತ ಕೈ ಮುಖಂಡರೂ ಕೂಡ ಬಿಜೆಪಿಯವರು ನಮ್ಮ ಬಾಗಿಲು ತಟ್ಟುತ್ತಿದ್ದಾರೆ ಎನ್ನುತ್ತಿದ್ದಾರೆ.
ಕೈ ಮುಖಂಡ ಇದೀಗ ಜಮೀರ್ ಅಹಮದ್ 9 ಮಂದಿ ಬಿಜೆಪಿ ಶಾಸಕರು ನಮ್ಮೊಂದಿಗಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರಸ್ ಬಿಟ್ಟು ಬಿಜೆಪಿಗೆ ಹೋಗಿದ್ದ ಅವರು ಇದೀಗ ಮತ್ತೆ ಮರಳಿ ಬರುವುದಾಗಿ ನಮ್ಮ ಬಳಿ ಬಂದಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಾವು ಅವರನ್ನು ಮರಳಿ ಕರೆಸಿಕೊಳ್ಳುವುದಿಲ್ಲ ಎನ್ನುವ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಐದು ವರ್ಷ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರಲಿದ್ದಾರೆ. 2023ರಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುತ್ತೇವೆ ಎಂದರು.
ಇನ್ನು ಬಿಜೆಪಿ ನಾಯಕ ಯಡಿಯೂರಪ್ಪಮುಖ್ಯಮಂತ್ರಿಯಾಗುವ ಕನಸು ಕಾಣುತ್ತಾ ಮಧ್ಯರಾತ್ರಿ ಎದ್ದು ಕೂರುತಿದ್ದಾರೆ. ಮೇ 23 ಅಲ್ಲ. ಮೇ 25ರವರೆಗೂ ಟೈಮ್ ನೀಡುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ನಾನು ರಾಜಕೀಯ ನಿವೃತ್ತಿಯನ್ನೇ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ. ಇಲ್ಲವಾದಲ್ಲಿ ಯಡಿಯೂರಪ್ಪ ನಿವೃತ್ತಿ ಹೊಂದುತ್ತಾರಾ ಎಂದು ಓಪನ್ ಚಾಲೇಂಜ್ ಮಾಡಿದ್ದಾರೆ.