Asianet Suvarna News Asianet Suvarna News

ಸಿದ್ದರಾಮಯ್ಯ ಪರವಾಗಿ 46 ಕಾಂಗ್ರೆಸ್ ಶಾಸಕರ ಸಹಿ

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪರವಾಗಿ 46 ಕಾಂಗ್ರೆಸ್ ಶಾಸಕರು ಸಹಿ ಮಾಡಿದ್ದಾರೆ. ಯಾಕೆ ಈ ಸಹಿ ಎಲ್ಲಾ ಮಾಹಿತಿ ಇಲ್ಲಿದೆ. 

46 Congress MLAs Supports Siddaramaiah For Opposition Leader Post
Author
Bengaluru, First Published Oct 7, 2019, 7:29 AM IST

ಬೆಂಗಳೂರು [ಅ.07]:  ರಾಜ್ಯ ಕಾಂಗ್ರೆಸ್‌ನಲ್ಲಿನ ಬಣ ರಾಜಕಾರಣದ ತೀವ್ರ ಮೇಲಾಟದ ನಡುವೆಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂಧನ್‌ ಮಿಸ್ತ್ರಿ ಅವರು ವಿಧಾನಸಭೆಯ ಪ್ರತಿಪಕ್ಷದ ನಾಯಕನ ನೇಮಕದ ಬಗ್ಗೆ ಕಾಂಗ್ರೆಸ್‌ ನಾಯಕರು ಹಾಗೂ ಶಾಸಕರ ಅಭಿಪ್ರಾಯ ಸಂಗ್ರಹ ನಡೆಸಿದ್ದಾರೆ. ಈ ವೇಳೆ ತೀವ್ರ ವಿರೋಧದ ನಡುವೆಯೇ ಸಿದ್ದರಾಮಯ್ಯ ಪರ 46 ಮಂದಿ ಶಾಸಕರ ಸಹಿ ಸಂಗ್ರಹಿಸಿ ಮಿಸ್ತ್ರಿ ಅವರಿಗೆ ಹಸ್ತಾಂತರಿಸಲು ಸಿದ್ದರಾಮಯ್ಯ ಬಣ ಯಶಸ್ವಿಯಾಗಿದೆ.

ಈ ಮೂಲಕ ಕಾಂಗ್ರೆಸ್‌ನ 66 ಮಂದಿ ಹಾಲಿ ಶಾಸಕರ ಪೈಕಿ 46 ಮಂದಿ ಶಾಸಕರು ಸಿದ್ದರಾಮಯ್ಯ ಅವರೇ ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷದ ನಾಯಕ ಎರಡಕ್ಕೂ ನೇಮಕವಾಗಬೇಕು ಎಂದು ಲಿಖಿತ ರೂಪದ ಅಭಿಪ್ರಾಯ ನೀಡಿದ್ದಾರೆ.

ಕಾಂಗ್ರೆಸ್‌ನ ಆಂತರಿಕ ಬೇಗುದಿಗೆ ಮುಖ್ಯ ಕಾರಣವಾಗಿರುವ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಯಾರು ಸೂಕ್ತ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಹಾಗೂ ಉಭಯ ಬಣಗಳ ಭಿನ್ನಮತ ಶಮನದ ಸೂತ್ರ ಕಂಡು ಹಿಡಿಯಲು ಮಧುಸೂಧನ ಮಿಸ್ತ್ರಿ ಅವರು ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೆ ದಿನವಿಡಿ ಅಭಿಪ್ರಾಯ ಸಂಗ್ರಹಿಸಿದರು.

ಈ ವೇಳೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಹಾಗೂ ಕಾಂಗ್ರೆಸ್‌ ಪ್ರತಿಪಕ್ಷದ ಪಕ್ಷದ ನಾಯಕ ಎಂಬ ಎರಡು ಹುದ್ದೆ ಹುಟ್ಟು ಹಾಕುವುದು ಸೂಕ್ತವೇ? ಅಥವಾ ಎರಡೂ ಹುದ್ದೆಗೆ ಒಬ್ಬರನ್ನೇ ನೇಮಕ ಮಾಡಬೇಕೆ? ಒಬ್ಬರನ್ನೇ ನೇಮಿಸಿದರೆ ಯಾರನ್ನು ನೇಮಿಸಬೇಕು? ಖಾಲಿ ಇರುವ ಉಭಯ ಸದನಗಳ ಪ್ರತಿಪಕ್ಷ ನಾಯಕರು ಹಾಗೂ ಮುಖ್ಯ ಸಚೇತಕ ಹುದ್ದೆಗಳಿಗೆ ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ಚರ್ಚಿಸಲಾಯಿತು.

ಮಿಸ್ತ್ರಿ ಅವರು ಆಹ್ವಾನ ನೀಡಿದ್ದ 63 ಮಂದಿ ನಾಯಕರು, ಶಾಸಕರ ಪೈಕಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಂ. ವೀರಪ್ಪ ಮೊಯ್ಲಿ, ರಾಣಿಸತೀಶ್‌ ಸೇರಿದಂತೆ ಕೆಲವರು ಗೈರುಹಾಜರಾಗಿದ್ದು, ಕೆ.ಎಚ್‌. ಮುನಿಯಪ್ಪ, ಡಾ.ಜಿ. ಪರಮೇಶ್ವರ್‌, ರಾಮಲಿಂಗಾರೆಡ್ಡಿ, ಎಚ್‌.ಕೆ. ಪಾಟೀಲ್‌ ಸೇರಿ ಸುಮಾರು 56-58 ಮಂದಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ವೇಳೆ ಮೂರು ರೀತಿಯ ಅಭಿಪ್ರಾಯ ವ್ಯಕ್ತವಾಗಿದ್ದು, ಸಿದ್ದರಾಮಯ್ಯ ಬಣದ ಶಾಸಕರು ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕ ಎರಡೂ ಸ್ಥಾನದಲ್ಲೂ ಮುಂದುವರೆಸಬೇಕು ಎಂದು ಹೇಳಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯ ವಿರೋಧಿ ಬಣದ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌, ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರು ಸಿದ್ದರಾಮಯ್ಯ ಅವರಿಗೆ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಮಾತ್ರ ಮುಂದುವರೆಸಿ ಪ್ರತಿಪಕ್ಷ ನಾಯಕ ಸ್ಥಾನವನ್ನು ಬೇರೊಬ್ಬರಿಗೆ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ. ಈ ವೇಳೆ ಹಲವರು ಎಚ್‌.ಕೆ. ಪಾಟೀಲ್‌ ಅವರ ಹೆಸರನ್ನು ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಸೂಚಿಸಿದ್ದಾರೆ. ತಟಸ್ಥ ಬಣ ಅಧಿಕಾರ ಯಾರಿಗೆ ನೀಡಿದರೂ ಮೊದಲು ಬಣ ರಾಜಕೀಯಕ್ಕೆ ಪರಿಹಾರ ಹುಡುಕಿ ಎಂದು ಸಲಹೆ ನೀಡಿದೆ ಎಂದು ತಿಳಿದುಬಂದಿದೆ.

ಸಿದ್ದು ಬಣದಿಂದ ಸಹಿ ಸಂಗ್ರಹ ಲಾಬಿ:

ಪ್ರತಿಪಕ್ಷ ನಾಯಕ ಸ್ಥಾನದ ನೇಮಕದ ಬಗ್ಗೆ ಅಭಿಪ್ರಾಯ ತಿಳಿಯಲು ಬಂದಿದ್ದ ಮಧುಸೂಧನ ಮಿಸ್ತ್ರಿ ಅವರ ಬಳಿ ಸಿದ್ದರಾಮಯ್ಯ ಪರ ಬಣದ ಶಾಸಕರು ಸಿದ್ದರಾಮಯ್ಯ ಅವರ ಪರ ಸಹಿ ಸಂಗ್ರಹ ಕಾರ್ಯ ನಡೆಸಿದ್ದು, ಇದು ಸಿದ್ದರಾಮಯ್ಯ ಪರ ಹಾಗೂ ವಿರೋಧ ಬಣದ ನಡುವೆ ತೀವ್ರ ತಿಕ್ಕಾಟಕ್ಕೆ ಕಾರಣವಾಯಿತು. ಅಂತಿಮವಾಗಿ ಸಿದ್ದರಾಮಯ್ಯ ಬಣ ತನ್ನ ಉದ್ದೇಶ ಸಾಫಲ್ಯದಲ್ಲಿ ಯಶಸ್ವಿಯಾಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿ.ಝಡ್‌. ಜಮೀರ್‌ ಅಹಮದ್‌ಖಾನ್‌, ಕೃಷ್ಣಬೈರೇಗೌಡ, ಬೈರತಿ ಸುರೇಶ್‌ ಸೇರಿದಂತೆ ಹಲವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಹಾಗೂ ವಿರೋಧಪಕ್ಷದ ನಾಯಕನ ಸ್ಥಾನ ಬೇರ್ಪಡಿಸಿ ಇಬ್ಬರಿಗೆ ನೀಡಬಾರದು. ಎರಡೂ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೇ ನೀಡಬೇಕು ಎಂದು ಮಧುಸೂಧನ್‌ ಮಿಸ್ತ್ರಿ ಅವರ ಮುಂದೆ ವಾದ ಮಂಡಿಸಿದರು. ಇದರ ಜತೆಗೆ ಶಾಸಕರಿಂದ ಸ್ಥಳದಲ್ಲೇ ಸಹಿ ಸಂಗ್ರಹಿಸಿ ನೀಡಿದರು. ಮಧುಸೂಧನ ಮಿಸ್ತ್ರಿ ಅವರು ಸಭೆ ನಡೆಸುತ್ತಿದ್ದ ಪಕ್ಕದ ಕೋಣೆಯಲ್ಲಿ ಶಾಸಕರಿಂದ ಸಹಿ ಸಂಗ್ರಹಿಸುತ್ತಿದ್ದ ಸಿದ್ದರಾಮಯ್ಯ ಬಣದ ಶಾಸಕರ ಕ್ರಮಕ್ಕೆ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಕೆಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಈ ರೀತಿ ಮಾಡುವುದಾದರೆ ನಾವೂ ಮಾಡಬಹುದಿತ್ತು. ಮುಖಾಮುಖಿಯಾಗಿ ಅಭಿಪ್ರಾಯ ಸಂಗ್ರಹಿಸಲು ಬಂದಾಗ ನಿಮ್ಮ ಅಭಿಪ್ರಾಯವೇನಿದ್ದರೂ ಅವರ ಬಳಿ ನೇರವಾಗಿ ಹೇಳಬೇಕು. ಈ ರೀತಿ ಲಾಬಿ ನಡೆಸುವುದು ಸರಿಯಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಮಧುಸೂಧನ ಮಿಸ್ತ್ರಿ ಅವರೇ, ಶಾಸಕರು ಬರವಣಿಗೆ ರೂಪದಲ್ಲಿ ತಮ್ಮ ನಾಯಕನ ಆಯ್ಕೆ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಬೇಕಾದರೆ ಕೊಡಲಿ. ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ನೇರವಾಗಿ ಸಹಿ ಸಂಗ್ರಹಿಸಿದ ವರದಿಯನ್ನು ಮಿಸ್ತ್ರಿ ಅವರಿಗೆ ನೀಡುವಲ್ಲಿ ಸಿದ್ದರಾಮಯ್ಯ ಬಣ ಯಶಸ್ವಿಯಾಯಿತು.

ಸಭೆಯಲ್ಲೂ ಸಿದ್ದರಾಮಯ್ಯ ಬಣದ ನಾಯಕರು ಅವರ ಪರ ಬ್ಯಾಟ್‌ ಬೀಸಿದ್ದಾರೆ. ಸಿದ್ದರಾಮಯ್ಯ ಶಕ್ತಿಯುತ ನಾಯಕ. ಅವರನ್ನು ನಿರ್ಲಕ್ಷ್ಯ ಮಾಡಿದರೆ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ಉಂಟಾಗಲಿದೆ. ಐದು ವರ್ಷ ಅವರ ಸರ್ಕಾರದ ಕೆಲಸಗಳಿಂದಲೇ ಪಕ್ಷಕ್ಕೆ ಸದ್ಯ ವರ್ಚಸ್ಸು ಉಳಿದುಕೊಂಡಿದೆ. ವಿಧಾನಸಭೆ ಚುನಾವಣೆಯಲ್ಲೂ ಶೇಕಡಾವಾರು ಬಿಜೆಪಿಗಿಂತ ಹೆಚ್ಚು ಮತ ಪಡೆದಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆಯಿಂದಾಗಿ ಹಿನ್ನಡೆಯಾಗಿದೆಯೇ ಹೊರತು ಸಿದ್ದರಾಮಯ್ಯ ಅವರ ಸರ್ಕಾರದ ವೈಫಲ್ಯದಿಂದಲ್ಲ. ಹೀಗಾಗಿ ಸಿದ್ದರಾಮಯ್ಯ ಅವರನ್ನು ನಿರ್ಲಕ್ಷಿಸಬಾರದು ಎಂದಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಟಸ್ಥವಾಗಿರುವ ನಾಯಕರು ಯಾರನ್ನಾದರೂ ನೇಮಕ ಮಾಡಿ. ಆದರೆ, ಬಣ ರಾಜಕೀಯಕ್ಕೆ ತಿಲಾಂಜಲಿ ಇಡಿ. ಇದು ಮುಂದುವರೆದರೆ ಕಾಂಗ್ರೆಸ್‌ ಭಾರಿ ಧಕ್ಕೆ ಉಂಟಾಗಲಿದೆ ಎಂದು ಮನವಿ ಮಾಡಿದ್ದಾರೆ.

ಹೈಕಮಾಂಡ್‌ ಅಂತಿಮ ನಿರ್ಧಾರ:

ಮಧುಸೂಧನ ಮಿಸ್ತ್ರಿ ಅವರು ಶಾಸಕರು, ಮುಖಂಡರಿಂದ ಮುಖಾಮುಖಿ ಪಡೆದಿರುವ ಮಾಹಿತಿ ಹಾಗೂ ಸಿದ್ದರಾಮಯ್ಯ ಬಣದ ಶಾಸಕರಿಂದ ಪಡೆದಿರುವ ಸಹಿ ಸಂಗ್ರಹ ವರದಿ ಎಲ್ಲವನ್ನೂ ಕ್ರೋಢೀಕರಿಸಿ ಹೈಕಮಾಂಡ್‌ಗೆ ವರದಿ ಸಲ್ಲಿಸಲಿದ್ದಾರೆ. ಗಂಭೀರ ವಿಷಯವಾಗಿರುವುದರಿಂದ ಸ್ವತಃ ಎಐಸಿಸಿ ಹಂಗಾಮಿ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿಯವರೇ ಸಿದ್ದರಾಮಯ್ಯ ಮತ್ತಿತರ ನಾಯಕರನ್ನು ಕರೆಸಿಕೊಂಡು ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಬಹುದು ಎಂದು ಮೂಲಗಳು ತಿಳಿಸಿವೆ.

ಮಿಸ್ತ್ರಿ ಪಕ್ಕದ ಕೋಣೆಯಲ್ಲಿ ಸಿದ್ದು ಬಣ ಸಹಿ ಸಂಗ್ರಹ!

ಮಧುಸೂಧನ ಮಿಸ್ತ್ರಿ ಅವರು ಸಭೆ ನಡೆಸುತ್ತಿದ್ದ ಹೋಟೆಲ್‌ನ ಪಕ್ಕದ ಕೋಣೆಯಲ್ಲಿ ಸಿದ್ದರಾಮಯ್ಯ ಬಣದವರು ಶಾಸಕರಿಂದ ಸಹಿ ಸಂಗ್ರಹಿಸಿದರು. ಈ ಕ್ರಮಕ್ಕೆ ಹರಿಪ್ರಸಾದ್‌ ಮತ್ತಿತರರು ವಿರೋಧ ವ್ಯಕ್ತಪಡಿಸಿದರು. ಆದರೂ ಜಮೀರ್‌ ಅಹಮದ್‌ಖಾನ್‌, ಕೃಷ್ಣಬೈರೇಗೌಡ, ಬೈರತಿ ಸುರೇಶ್‌ ಸೇರಿದಂತೆ ಹಲವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಹಾಗೂ ವಿರೋಧಪಕ್ಷದ ನಾಯಕನ ಸ್ಥಾನ ಬೇರ್ಪಡಿಸಿ ಇಬ್ಬರಿಗೆ ನೀಡಬಾರದು. ಎರಡೂ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೇ ನೀಡಬೇಕು ಎಂದು ಮಧುಸೂಧನ್‌ ಮಿಸ್ತ್ರಿ ಅವರ ಮುಂದೆ ವಾದ ಮಂಡಿಸಿ ಶಾಸಕರ ಸಹಿ ಸಂಗ್ರಹಿಸಿ ಸಲ್ಲಿಸಿದರು.

Follow Us:
Download App:
  • android
  • ios